ಮರ್ದಾಳ: ಮುಂಚಿಕಾಪಿನಲ್ಲಿ ಜಮೀನು ಕಾದಿರಿಸಲು ಸಿದ್ಧತೆ
Team Udayavani, Jan 24, 2021, 2:40 AM IST
ಕಡಬ: ಕಡಬ ತಾಲೂಕಿಗೆ ಪ್ರತ್ಯೇಕ ವಾಗಿ ಅಗ್ನಿಶಾಮಕ ಠಾಣೆ ಆರಂಭಿಸುವ ನಿಟ್ಟಿನಲ್ಲಿ ಪ್ರಾಥಮಿಕ ಚಟುವಟಿಕೆಗಳು ಆರಂಭಗೊಂಡಿದ್ದು, ಸ್ಥಳೀಯರ ಬೇಡಿಕೆ ಯಂತೆ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿ ದ್ದಾರೆ.
ಕಡಬ ಭಾಗಕ್ಕೆ ಪ್ರತ್ಯೇಕವಾಗಿ ಅಗ್ನಿಶಾಮಕ ಠಾಣೆ ಆರಂಭಿಸಬೇಕೆನ್ನುವ ಬೇಡಿಕೆ ಹಲವು ಸಮಯದಿಂದ ಕೇಳಿಬರುತ್ತಿತ್ತು. ಪರಿಸರದಲ್ಲಿ ಅಗ್ನಿ ದುರಂತಗಳು ಹಾಗೂ ಇತರ ಅವಘಡಗಳು ಸಂಭವಿಸಿದರೆ ದೂರದ ಪುತ್ತೂರಿನಿಂದ ಅಗ್ನಿಶಾಮಕ ದಳ ಬರಬೇಕಿದೆ. ಹಲವಾರು ಸಂದರ್ಭಗಳಲ್ಲಿ ಅಗ್ನಿ ದುರಂತ ನಡೆದಾಗ ಅಗ್ನಿ ಶಾಮಕ ವಾಹನ ಕಡಬ ತಲುಪುವ ವೇಳೆಗೆ ಸೊತ್ತುಗಳು ಸುಟ್ಟು ಕರಕಲಾಗಿ ಅಪಾರ ಹಾನಿ ಸಂಭವಿಸಿರುತ್ತದೆ. ಮುಖ್ಯವಾಗಿ ಕಡಬ ಸೇರಿದಂತೆ ಪರಿಸರದ ಮರ್ದಾಳ, ಕೋಡಿಂಬಾಳ, ಐತ್ತೂರು, ಕುಂತೂರು, ಪೆರಾಬೆ, ಕೊಂಬಾರು, ಸಿರಿಬಾಗಿಲು ಮುಂತಾದೆಡೆ ಹೆಚ್ಚಾಗಿ ಅರಣ್ಯ ಪ್ರದೇಶವಿದೆ. ಕಡಬ ಸುತ್ತಮುತ್ತ ಖಾಸಗಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಸಾವಿರಾರು ಎಕರೆ ರಬ್ಬರ್ ಪ್ಲಾಂಟೇಶನ್ ಕೂಡ ಇದೆ. ಅರಣ್ಯ ಅಥವಾ ರಬ್ಬರ್ ಪ್ಲಾಂಟೇಶನ್ಗಳಿಗೆ ಬೆಂಕಿ ಬಿದ್ದರೆ ಅದು ನೂರಾರು ಎಕರೆ ಪ್ರದೇಶಕ್ಕೆ ಪಸರಿಸಿ ಅಪಾರ ನಷ್ಟವುಂಟಾಗುತ್ತದೆ. ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಕಡಬಕ್ಕೆ ಪ್ರತ್ಯೇಕವಾಗಿ ಅಗ್ನಿಶಾಮಕ ಠಾಣೆ ಆರಂಭಿಸಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ :
ಕಡಬ ತಾ| ಕೇಂದ್ರಿತ ಅಗ್ನಿಶಾಮಕ ಠಾಣೆಗೆ ಮರ್ದಾಳದ ಮುಂಚಿಕಾಪಿನಲ್ಲಿ ಜಮೀನು ಕಾದಿರಿಸಲು ಸಿದ್ಧತೆ ನಡೆಯುತ್ತಿದೆ. ಮುಂಚಿಕಾಪಿನಲ್ಲಿರುವ ಸುಮಾರು 12 ಎಕರೆ ಸರಕಾರಿ ಜಮೀನನ್ನು ತಾ| ಮಟ್ಟದ ಸರಕಾರಿ ಕಚೇರಿಗಳಿಗಾಗಿ ಕಾದಿರಿಸುವ ಪ್ರಕ್ರಿಯೆ ನಡೆ ಯುತ್ತಿದ್ದು, ಜಾಗಕ್ಕೆ ಸಂಬಂಧಿಸಿದ ಕಡತ ಸಹಾಯಕ ಆಯುಕ್ತರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ. ಮುಂಚಿಕಾಪಿನಲ್ಲಿರುವ ಜಮೀನು ಧರ್ಮ ಸ್ಥಳ-ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯ ಪಕ್ಕದ ಲ್ಲಿದ್ದು, ಅದರಲ್ಲಿ ರಸ್ತೆಗೆ ತಾಗಿಕೊಂಡಿರುವ ಸೂಕ್ತ ಜಾಗವನ್ನು ಗುರುತಿಸಿ ಅಗ್ನಿಶಾಮಕ ಠಾಣೆಗೆ ಮಂಜೂರುಗೊಳಿಸಲಾಗುವುದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಕಡಬದಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಚಟುವಟಿಕೆಗಳು ಆರಂಭವಾಗಿದೆ. ಜಮೀನು ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. -ಭರತ್ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಮಂಗಳೂರು
-ನಾಗರಾಜ್ ಎನ್.ಕೆ.