ಅಂಗನವಾಡಿಗಳ ವಿದ್ಯುತ್ ಬಿಲ್ ಸಿಡಿಪಿಒ ಪಾವತಿಸಲಿ
ಕೋಡಿಂಬಾಡಿ ಗ್ರಾ.ಪಂ. ಗ್ರಾಮ ಸಭೆಯಲ್ಲಿ ಆಗ್ರಹ
Team Udayavani, Aug 3, 2019, 5:00 AM IST
ಕೋಡಿಂಬಾಡಿ: ಗ್ರಾ.ಪಂ.ನ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳ ವಿದ್ಯುತ್ ಬಿಲ್ಗಳನ್ನು ಗ್ರಾ.ಪಂ.ಗೆಬಿಡದೆ ಸಂಬಂಧಪಟ್ಟ ಸಿಡಿಪಿಒ ಇಲಾಖೆಯೇ ಪಾವತಿಸುವಂತಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ಕೋಡಿಂಬಾಡಿ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾಮ ಸಭೆ ನಡೆಯಿತು.
ಸಿಡಿಪಿಒ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನ 9 ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ ಪಾವತಿಸುತ್ತಿವೆ ಎಂದು ತಿಳಿಸಿದರು. ಕೆಲವು ಯೋಜನೆಗಳಿಗೆ ಸಿಡಿಪಿಒ ಇಲಾಖೆಯೇ ಅನುದಾನ ನೀಡುತ್ತಿದೆ. ಆದರೆ ವಿದ್ಯುತ್ ಬಿಲ್ ಪಾವತಿಯಲ್ಲಿ ಗ್ರಾ.ಪಂ.ಅನ್ನು ಎಳೆದು ತರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಕುರಿತು ನಿರ್ಣಯ ಕೈಗೊಳ್ಳುವಂತೆ ಅಧ್ಯಕ್ಷರಲ್ಲಿ ಆಗ್ರಹಿಸಿದರು. ಹಿಂದಿನ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆದಿದ್ದೇವೆ ಎಂದು ಸದಸ್ಯ ಜಗನ್ನಾಥ ಶೆಟ್ಟಿ ತಿಳಿಸಿದರು.
ಗ್ರಾಮಸ್ಥನಿಂದಲೇ ಜೆರಾಕ್ಸ್
ಗ್ರಾಮ ಸಭೆಯ ವರದಿ ಪ್ರತಿಯನ್ನು ಗ್ರಾಮಸ್ಥರೊಬ್ಬರು ತನ್ನ ಸ್ವಂತ ಖರ್ಚಿನಿಂದ ಜೆರಾಕ್ಸ್ ಮಾಡಿ ಗ್ರಾಮಸ್ಥರು ಸಹಿತ ಸದಸ್ಯರಿಗೆ ಹಂಚಿದ್ದಾರೆ. ಗ್ರಾ.ಪಂ. ವತಿಯಿಂದ ಜೆರಾಕ್ಸ್ ಮಾಡುವಷ್ಟು ಹಣವಿಲ್ಲವೆ ಎಂದು ಉಲ್ಲಾಸ್ ಕೋಟ್ಯಾನ್ ಪ್ರಶ್ನಿಸಿದರು. ಗ್ರಾಮಸ್ಥ ನಿರಂಜನ ರೈ ಮಠಂತಬೆಟ್ಟು ಮಾತನಾಡಿ, ಮುಂದಿನ ಸಭೆಯಲ್ಲಿ ವರದಿಯ ನೂರು ಜೆರಾಕ್ಸ್ ಪ್ರತಿಗಳನ್ನು ಗ್ರಾ.ಪಂ.ನಿಂದಲೇ ತೆಗೆದಿಡಬೇಕು ಎಂದು ತಿಳಿಸಿದರು. ಇದಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.
ಕೋಡಿಂಬಾಡಿ ಶಾಲೆಗೆ ಆವರಣ ಗೋಡೆ ರಚಿಸಲಾಗಿಲ್ಲ. ಮುಂದಿನ ಗ್ರಾಮಸಭೆ ಮೊದಲು ಈ ಕೆಲಸ ಆಗಬೇಕು ಎಂದು ನಿರಂಜನ ರೈ ಮಠಂತಬೆಟ್ಟು ಹೇಳಿದರು. ಕೋಡಿಂಬಾಡಿ -ಬೆಳ್ಳಿಪ್ಪಾಡಿ ಕಾಲು ದಾರಿಯನ್ನು ರಸ್ತೆಯನ್ನಾಗಿ ಮಾಡಬೇಕು ಎಂದು ಗ್ರಾಮಸ್ಥ ಪದ್ಮನಾಭ ಆಚಾರ್ಯ ವಿನಂತಿಸಿದರು. ಈ ಕಾಲುದಾರಿಯನ್ನು ರಸ್ತೆಯನ್ನಾಗಿ ಮಾಡಲು ಸೈಕಲ್ ಟ್ರ್ಯಾಕ್ ಎಂಬ ವಿಶೇಷ ಅನುದಾನದಿಂದ ಆಗುತ್ತದೆ. ಕಾಲುದಾರಿಯಲ್ಲಿ ಬರುವ ವರ್ಗ ಜಾಗದ ಮಾಲಕರ ಮನವೊಲಿಸಿ ರಸ್ತೆಯನ್ನಾಗಿ ಗ್ರಾ ಪಂ. ಮೊದಲು ಮಾಡಬೇಕು. ಬಳಿಕ ಈ ಅನುದಾನವನ್ನು ಬಳಸಬಹುದು ಎಂದು ಮುರಳೀಧರ ರೈ ಮಠಂತಬೆಟ್ಟು ಹೇಳಿದರು. ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಕೊಳೆರೋಗ ಪರಿಹಾರದಲ್ಲಿ ಗ್ರಾಮದಲ್ಲಿ ತಾರತಮ್ಯ ಮಾಡಲಾಗಿದೆ. ಈ ಕುರಿತು ಗ್ರಾ.ಪಂ. ವರದಿ ನೀಡಬೇಕು ಎಂದು ಗ್ರಾಮಸ್ಥ ಜಯಾನಂದ ಆಗ್ರಹಿಸಿದರು.
ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖಾ ಸಹಾಯ ನಿರ್ದೇಶಕಿ ರೇಖಾ ಚರ್ಚಾ ನಿಯಂತ್ರಣಾಕಾರಿಯಾಗಿ ಪಾಲ್ಗೊಂಡರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಾಬು ಗೌಡ, ಪಿಡಿಒ ಚಿತ್ರಾವತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ವರದಿ ಓದಿದರು. ಸದಸ್ಯರು ಉಪಸ್ಥಿತರಿದ್ದರು.
ಬಹು ಉಪಯೋಗಿ ವಿನಾಯಕನಗರ -ದೇವಸ್ಥಾನ ರಸ್ತೆ ಕಾಮಗಾರಿ ಅರ್ಧ ನಡೆದು ಸ್ಥಗಿತಗೊಂಡಿದೆ. ದಿನನಿತ್ಯ ಈ ರಸ್ತೆಯಲ್ಲಿ ಹಲವಾರು ವಾಹನಗಳು, ಜನರು ಸಂಚರಿಸುವ ರಸ್ತೆಯಾದ್ದರಿಂದ ಸಮಸ್ಯೆ ಉಂಟಾಗಿದೆ. ಮೊದಲು ಇಲ್ಲಿ ಚರಂಡಿ ವ್ಯವಸ್ಥೆಯಾಗಬೇಕು. ಬಳಿಕ ರಸ್ತೆ ಕಾಮಗಾರಿ ನಡೆಸಬೇಕು. ತತ್ಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಉಲ್ಲಾಸ್ ಕೋಟ್ಯಾನ್ ಆಗ್ರಹಿಸಿದರು.
ಪುತ್ತೂರು ಜಿಲ್ಲೆಯಾಗಬೇಕು ಎಂದು ಹಲವು ಸಂಘಟನೆಗಳು ಈಗಿನ ಹಾಗೂ ಹಿಂದಿನ ಶಾಸಕರ ಮೂಲಕ ಸರಕಾರಕ್ಕೆ ಮನವಿ ಮಾಡಿವೆ. ಈ ಕುರಿತು ಹಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಾದಲ್ಲಿ ಹಲವು ಅಧಿಕಾರಿಗಳನ್ನು ಪುತ್ತೂರಿನಲ್ಲೇ ಭೇಟಿ ಮಾಡಬಹುದು.
ಈ ಕುರಿತು ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡು ಮತ್ತೂಮ್ಮೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಗ್ರಾಮಸ್ಥ ನಿರಂಜನ ರೈ ಮಠಂತಬೆಟ್ಟು ಆಗ್ರಹಿಸಿದರು.
ಪುತ್ತೂರು ಜಿಲ್ಲೆಯಾಗಬೇಕು
ಪುತ್ತೂರು ಜಿಲ್ಲೆಯಾಗಬೇಕು ಎಂದು ಹಲವು ಸಂಘಟನೆಗಳು ಈಗಿನ ಹಾಗೂ ಹಿಂದಿನ ಶಾಸಕರ ಮೂಲಕ ಸರಕಾರಕ್ಕೆ ಮನವಿ ಮಾಡಿವೆ. ಈ ಕುರಿತು ಹಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಾದಲ್ಲಿ ಹಲವು ಅಧಿಕಾರಿಗಳನ್ನು ಪುತ್ತೂರಿನಲ್ಲೇ ಭೇಟಿ ಮಾಡಬಹುದು. ಈ ಕುರಿತು ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡು ಮತ್ತೂಮ್ಮೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಗ್ರಾಮಸ್ಥ ನಿರಂಜನ ರೈ ಮಠಂತಬೆಟ್ಟು ಆಗ್ರಹಿಸಿದರು.