ಮಕ್ಕಳ ಕನಸಿನ ತಿಜೋರಿ ಗಟ್ಟಿಗೊಳಿಸೋಣ
ಬಣ್ಣದ ಹಾಡು ಬೇಸಗೆ ಶಿಬಿರ ಸಮಾರೋಪದಲ್ಲಿ ರಮೇಶ್ ಉಳಯ
Team Udayavani, Apr 16, 2019, 6:00 AM IST
ಸವಣೂರು: ಶಿಬಿರಗಳ ಮೂಲಕ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ಕನಸಿನ ತಿಜೋರಿಯನ್ನು ಗಟ್ಟಿಗೊಳಿಸೋಣ ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ ಹೇಳಿದರು.
ಅವರು ಪುಣಪ್ಪಾಡಿ ಸರಕಾರಿ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಬಣ್ಣದ ಹಾಡು ಎನ್ನುವ ವಿಭಿನ್ನ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೋರ್ವ ಮಗುವೂ ಕೂಡ ಬುದ್ದಿವಂತ ಮಗುವೇ ಆಗಿರುತ್ತಾನೆ. ಅದರ ಬೌದ್ಧಿಕ ವಿಕಾಸಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಬೇಕಾಗಿದೆ. ಮಕ್ಕಳು ಕನಸಿನ ಚಿಲುಮೆಗಳು. ಅವರ ಕನಸಿನ ಪೆಟ್ಟಿಗೆಯನ್ನು ಗಟ್ಟಿಗೊಳಿಸುವ ಕೆಲಸಗಳು ಇಂತಹ ಮಕ್ಕಳ ಕೂಟಗಳಿಂದ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಮೂಡು ಬಿದಿರೆಯ ಆಳ್ವಾಸ್ನ ಕಲಾಶಿಕ್ಷಕ ಭಾಸ್ಕರ್ ನೆಲ್ಯಾಡಿ ಮಾತನಾಡಿ, ಬಣ್ಣ ಮಕ್ಕಳ ಪ್ರಿಯವಾದ ವಸ್ತು. ಹಾಡು, ಆಟ, ಕುಣಿತಗಳೂ ಹಾಗೆ ಮಕ್ಕಳಿಗೆ ಇಷ್ಟ, ಇವೆಲ್ಲವೂ ಮಕ್ಕಳ ಕಲಿಕೆಗೆ ಪೂರಕ. ಮಕ್ಕಳಿಗೆ ಅವಕಾಶ ನೀಡಿ ಎಂದರು.
ಸಂಪನ್ಮೂಲ ವ್ಯಕ್ತಿ ಮುಕ್ವೆ ಸರಕಾರಿ ಶಾಲೆ ಮುಖ್ಯ ಶಿಕ್ಷಕ ಚರಣ್ ಕುಮಾರ್ ಪುದು, ಶ್ರವಣ ರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು, ಊರಿನ ಹಿರಿಯರಾದ ಪಿ.ಡಿ. ಗಂಗಾಧರ್ ರೈ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮಾಶಂಕರ ಗೌಡ, ಪೋಷಕ ಬಾಬು ಎನ್. ಜರಿನಾರು, ವಿದ್ಯಾರ್ಥಿಗಳಾದ ದೀಪ್ತಿ, ತೇಜಸ್ವಿ, ನಿತೀಶ್, ಪಿ.ಆರ್. ಮೋಕ್ಷಿತ್ ಶಿಬಿರದ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಶೋಭಾ ಕೆ., ಪ್ಲಾವಿಯಾ, ಯತೀಶ್ ಕುಮಾರ್, ಪ್ರತಿಮಾ ಎನ್., ಯಮುನಾ ಬಿರ ಸಹಕರಿಸಿದರ. ಶಿಕ್ಷಕರಾದ ನಾರಾಯಣ ರೈ ಕುಕ್ಕುವಳ್ಳಿ, ಭಾಸ್ಕರ್ ನೆಲ್ಯಾಡಿ, ಶಿವಗಿರಿ ಕಲ್ಲಡ್ಕ, ರೋಹಿಣಿ ರಾಘವ, ಜಗನ್ನಾಥ್ ಅರಿಯಡ್ಕ, ಪ್ರದೀಪ್ ಪಾಣಾಜೆ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.