ಸಾಲ ಮನ್ನಾ ಮಾಡದಿದ್ದರೆ ತಾಲೂಕಿನ ರೈತರಿಂದ ನಿರಂತರ ಹೋರಾಟ
Team Udayavani, May 29, 2018, 4:25 AM IST
ಬೆಳ್ತಂಗಡಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದಲ್ಲಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದು, ಈಗ ತಮ್ಮ ಮಾತು ಬದಲಾಯಿಸುತ್ತಿದ್ದಾರೆ. ಒಂದು ವೇಳೆ ರೈತರ ಸಾಲ ಮನ್ನಾ ಮಾಡದಿದ್ದರೆ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಅವರು ಹೇಳಿದರು. ಅವರು ಮಿನಿ ವಿಧಾನಸೌಧ ಬಳಿ ಸಾಲಮನ್ನಾಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾದಲ್ಲಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದು, ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಿದ್ದರು. ಅವರ ಸೂಚನೆಯಂತೆ ಸಹಕಾರಿ ಬ್ಯಾಂಕುಗಳಿಗೆ ನೋಟಿಸ್ ಬಂದಿದೆ. ಆದರೆ ಅಧಿಕಾರವಿಲ್ಲದಿರುವುದರಿಂದ ಹೋರಾಟದ ಹಾದಿ ಹಿಡಿಯಬೇಕಾಗಿದೆ. ಕುಮಾರ ಸ್ವಾಮಿ ಅವರು ಕೊಟ್ಟ ಮಾತು ತಪ್ಪಿದ್ದಾರೆ. ರೈತಪರ ಎನ್ನುವ ಜೆಡಿಎಸ್ ಪಕ್ಷ ಹಾಗೂ ಮುಖ್ಯಮಂತ್ರಿ ಎಲ್ಲಾ ರೀತಿಯ ಸಾಲಮನ್ನ ಮಾಡುವುದಾಗಿ ತಿಳಿಸಿದ್ದರು ಆದರೆ ಇದೀಗ ಬಹುಮತವಿಲ್ಲ ಎಂಬ ಕಾರಣ ನೀಡುತ್ತಿರುವುದು ಸರಿಯಲ್ಲ ಎಂದರು. ಪ್ರತಿಭಟನೆ ನಡೆಸಿ ಶಾಸಕ ಹರೀಶ್ ಪೂಂಜಾ ಹಾಗೂ ರೈತ ಮುಖಂಡರು ತಹಶೀಲ್ದಾರ್ ಟಿ.ಸಿ. ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು. ಬೆಳಗ್ಗೆ ಚರ್ಚ್ರೋಡ್ ಹಾಗೂ ಹಳೆಕೋಟೆ ಬಳಿ ರಸ್ತೆಯಲ್ಲಿ ಟಯರ್ ಹೊತ್ತಿಸಿ ಬಂದ್ ಗೆ ಯತ್ನಿಸಲಾಯಿತು. ಬಂದ್ ಅಂಗವಾಗಿ ರಕ್ಷಣೆಗೆ ವಿಶೇಷ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು.
ರೈತ ಮೋರ್ಚಾ ಅಧ್ಯಕ್ಷ ದಿನೇಶ್ ಗೌಡ ಮಲವಂತಿಗೆ, ಪ್ರಧಾನ ಕಾರ್ಯದರ್ಶಿ ಸೀತಾರಾಂ ಬೆಳಾಲು, ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ತಾಪಂ ಸದಸ್ಯರಾದ ಶಶಿಧರ ಶೆಟ್ಟಿ ಕಲ್ಮಂಜ, ಸುಧಾಕರ ಶೆಟ್ಟಿ, ಲಕ್ಷ್ಮೀನಾರಾಯಣ, ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ವಸಂತ ಮಜಲು, ನಾರಾಯಣ ಗೌಡ, ರಾಜೀವ್, ಬಿಜೆಪಿ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಪ್ರಸಾದ್ ಕುಮಾರ್, ಪದ್ಮನಾಭ್, ರತ್ನವರ್ಮ ಜೈನ್, ಕೇಶವ ಕನ್ಯಾಡಿ, ನಾರಾಯಣ, ಪುಷ್ಪಾ ಶೆಟ್ಟಿ, ಹರೀಶ್ ಸಾಲ್ಯಾನ್, ಗಿರೀಶ್, ಸಂತೋಷ್ ಲಾೖಲ, ಜಯಂತ್ ಗೌಡ, ರಾಮ್ ಪ್ರಸಾದ್, ಆನಂದ್ ಗೌಡ, ಜಗದೀಶ್, ರಕ್ಷಿತ್ ಶೆಟ್ಟಿ ಮೊದಲಾದವರಿದ್ದರು.