ಪುತ್ತೂರು, ಬೆಳ್ತಂಗಡಿ: ಕ್ಯಾಂಪ್ಕೋದಿಂದ ಖರೀದಿ ಆರಂಭ
ಎಪಿಎಂಸಿಯಿಂದ ಶೂನ್ಯ ಬಡ್ಡಿದರದಲ್ಲಿ ಅಡಮಾನ ಸಾಲ
Team Udayavani, Apr 14, 2020, 5:46 AM IST
ಪುತ್ತೂರು: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಪುತ್ತೂರು ಎಪಿಎಂಸಿ ಹಾಗೂ ಕ್ಯಾಂಪ್ಕೋ ಸಂಸ್ಥೆಗಳು ಸೋಮವಾರದಿಂದ ಅಡಿಕೆ ಅಡಮಾನ ಸಾಲ ಹಾಗೂ ಅಡಿಕೆ ಖರೀದಿ ಪ್ರಕ್ರಿಯೆ ಆರಂಭಿಸಿವೆ.
ಅಡಮಾನ ಸಾಲ ಯೋಜನೆಯಡಿ ಸೋಮವಾರ 8 ಮಂದಿಗೆ ಶೂನ್ಯ ಬಡ್ಡಿ ದರದ ಸಾಲ ನೀಡಲಾಯಿತು. ಎಪಿಎಂಸಿಯು ಅಡಿಕೆ ಅಡಮಾನವಿರಿ ಸುವ ರೈತರಿಗೆ 3 ತಿಂಗಳ ಅವಧಿಗೆ 50 ಸಾ. ರೂ. ಅನ್ನು ಶೂನ್ಯ ಬಡ್ಡಿಯಲ್ಲಿ ನೀಡುತ್ತಿದೆ. ಈ ಮೊತ್ತದ ಸಾಲಕ್ಕೆ ರೈತರು 3.50 ಕ್ವಿಂ. ಅಡಿಕೆಯನ್ನು ಎಪಿಎಂಸಿ ದಾಸ್ತಾನು ಮಳಿಗೆಯಲ್ಲಿರಿಸಬೇಕು. 3 ತಿಂಗಳ ಅನಂತರ ಸಾಲವನ್ನು ನವೀಕರಣ ಮಾಡುವ ಚಿಂತನೆಯೂ ಇದೆ.
ಅಡಿಕೆ ಅಡಮಾನ ಸಾಲ ನೀಡು ವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
ಪ್ರಾ. ಕೃಷಿ ಪತ್ತಿನ ಸ. ಸಂಘಗಳಲ್ಲಿಯೂ ಅಡಿಕೆ ಅಡಮಾನವಿಟ್ಟು ಸಾಲ ನೀಡುವ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಅಲ್ಲಿ ಬಡ್ಡಿ ಸಹಿತ ಸಾಲ ನೀಡಲಾಗುತ್ತಿದೆ. ಮುಂದೆ ಕಡಬ ಎಪಿಎಂಸಿಯಲ್ಲೂ ಇದೇ ರೀತಿಯ ಸಾಲ ಯೋಜನೆ ಆರಂಭಿಸಲು ಚಿಂತಿಸಲಾಗಿದೆ ಎಂದು ದಿನೇಶ್ ಮೆದು ತಿಳಿಸಿದ್ದಾರೆ. ರೈತರಿಗೆ ಸಾಲದ ಚೆಕ್ ವಿತರಣೆ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.
ಕ್ಯಾಂಪ್ಕೋದಿಂದ ಖರೀದಿ ಆರಂಭ
ಜಿಲ್ಲೆಯ 9 ಕ್ಯಾಂಪ್ಕೋ ಕೇಂದ್ರಗಳಲ್ಲಿ ಸೋಮವಾರ ಅಡಿಕೆ ಖರೀದಿಸಲಾಯಿತು. ಓರ್ವ ಸದಸ್ಯನಿಂದ ತಿಂಗಳಿಗೆ 1 ಕ್ವಿಂ. ಅಥವಾ 25 ಸಾ. ರೂ. ಮೌಲ್ಯದ ಅಡಿಕೆ ಖರೀದಿಸಲು ಕ್ಯಾಂಪ್ಕೋ ನಿರ್ಧರಿಸಿದೆ. ಪುತ್ತೂರು ಕೇಂದ್ರದಲ್ಲಿ 22 ಮಂದಿ ಅಡಿಕೆ ಮಾರಾಟ ಮಾಡಿದರು. ಜಿಲ್ಲೆಯ 9 ಕಡೆಗಳಲ್ಲಿನ ಕೇಂದ್ರಗಳಲ್ಲೂ ಸೋಮವಾರ ರೈತರಿಂದ ಅಡಿಕೆ ಖರೀದಿ ನಡೆಸಲಾಗಿದೆ.
ಬೆಳ್ತಂಗಡಿ: ಕ್ಯಾಂಪ್ಕೋದಿಂದ 50 ಕ್ವಿಂಟಾಲ್ ಕೊಕ್ಕೊ ಖರೀದಿ
ಬೆಳ್ತಂಗಡಿ: ಜಿಲ್ಲೆಯ 9 ಕಡೆಗಳಲ್ಲಿ ಕ್ಯಾಂಪ್ಕೋ ಅಡಿಕೆ ಹಾಗೂ ಕೋಕ್ಕೋ ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು, ಬೆಳ್ತಂಗಡಿ ಕ್ಯಾಂಪ್ಕೋ ಕೇಂದ್ರದಲ್ಲಿ ಸೋಮವಾರ 50 ಕ್ವಿಂಟಾಲ್ ಕೊಕ್ಕೊ ಖರೀದಿ ನಡೆಸಲಾಗಿದೆ.
ಕೊಕ್ಕೊ ಮಾರಾಟಕ್ಕೆ ರೈತರಿಗೆ ಯಾವುದೇ ಮಿತಿ ಹೇರದಿರುವುದರಿಂದ ಸೋಮವಾರ ಒಟ್ಟು 107 ಮಂದಿ ಸದಸ್ಯರಿಂದ 50 ಕ್ವಿಂಟಾಲ್ ಕೊಕ್ಕೊ ಖರೀದಿಸಲಾಗಿದೆ. ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಲು ಸೂಚಿಸಲಾಗಿತ್ತು.
ಎ.14ರಂದು ಅಡಿಕೆ ಖರೀದಿ
ಮಂಗಳವಾರ, ಬುಧವಾರ, ಶುಕ್ರವಾರ ಅಡಿಕೆ ಖರೀದಿಗೆ ಅವಕಾಶ ನೀಡಲಾಗಿದೆ. ಈಗಾಗಲೆ ಬೆಳ್ತಂಗಡಿಯಲ್ಲಿ ಎ.14ರಂದು 20 ಸದಸ್ಯರಿಗೆ ಟೋಕನ್ ನೀಡಲಾಗಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಖರೀದಿ ಕೇಂದ್ರ ತೆರೆದಿರುತ್ತದೆ.