‘ಹಳ್ಳಿಯಲ್ಲಿ ಚಿಣ್ಣರು’ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಶಿಬಿರ
Team Udayavani, May 24, 2018, 6:55 AM IST
ಪುಂಜಾಲಕಟ್ಟೆ: ನಗರದ ಕಾಂಕ್ರೀಟ್ ಕಟ್ಟಡದ ನಡುವೆ ಬಸವಳಿದ ಮಕ್ಕಳಿಗೆ ಹಚ್ಚ ಹಸಿರಿನ ಗುಡ್ಡ, ಕಾಡು, ತೋಟಗಳ ನಡುವೆ ಓಡಾಡಿ, ನಲಿದಾಡಿದಾಗ ಸಂಭ್ರಮವೋ ಸಂಭ್ರಮ… ಅಲ್ಲಿ ಚಿಣ್ಣರ ಕಲರವ ಕೇಳಿ ಬರುತ್ತಿತ್ತು. ಇದು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಗ್ರೀನ್ ವುಡ್ ಫಾರ್ಮ್ಸ್ ನಲ್ಲಿ ಮಂಗಳವಾರ ಕಂಡು ಬಂದ ದೃಶ್ಯ. ಮಂಗಳೂರಿನ ಚಿಂತನ ಬಳಗ ಮಂಗಳೂರಿನಲ್ಲಿ ಆಯೋಜಿಸಿದ್ದ ಆರು ದಿನಗಳ ಮಕ್ಕಳ ಬೇಸಗೆ ಶಿಬಿರದ ಮಕ್ಕಳು ಶನಿವಾರ ಹಳ್ಳಿ ಸಂಚಾರಕ್ಕಾಗಿ ತಾಲೂಕಿನ ಗ್ರಾಮೀಣ ಪ್ರದೇಶವಾದ ನೆಲ್ಲಿಗುಡ್ಡೆಗೆ ಆಗಮಿಸಿದ್ದರು. ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಪರಿಸರದೊಂದಿಗೆ ಹಳ್ಳಿಯಲ್ಲಿ ಚಿಣ್ಣರು ಕಾರ್ಯಕ್ರಮ ನಡೆಯಿತು.
ಮಕ್ಕಳ ಪ್ರಶ್ನೆಗಳಿಗೆ ಉತ್ತರ
ದನ ಹಾಲು ಕೊಡುವುದು ಹೇಗೆ?, ಭತ್ತದ ತೆನೆ ಅಕ್ಕಿಯಾಗುವುದು ಹೇಗೆ ?, ತರಕಾರಿ ಗಿಡಗಳು ಹೇಗಿರುತ್ತೆ ? ಹೀಗೆ ಸಾಲು ಸಾಲು ಪ್ರಶ್ನೆಗಳು ಮಕ್ಕಳ ಮನದಲ್ಲಿ ತುಂಬಿದ್ದವು.ಮಕ್ಕಳ ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇಲ್ಲಿ ನಡೆದ ‘ಹಳ್ಳಿಯಲ್ಲಿ ಚಿಣ್ಣರು’ ಕಾರ್ಯಕ್ರಮ ಯಶಸ್ವಿಯಾಯಿತು. ನಗರ ಪ್ರದೇಶದ ಕಾಂಕ್ರೀಟ್ ಕಾಡಿನ ನಡುವೆ ಬೆಳೆದ ಮಕ್ಕಳಿಗೆ ಈ ಗ್ರಾಮೀಣ ಪ್ರದೇಶದ ಒಂದು ದಿನದ ಒಡನಾಟ ಪರಿಸರದ ಪಾಠಗಳನ್ನು ಕಲಿಸಿಕೊಟ್ಟಿತು.
ಬೆಳಗ್ಗೆ ಆಗಮಿಸಿದ ಮಕ್ಕಳಿಗೆ ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ಅವರು ವಿವಿಧ ಆಟ, ಹಾಡು, ಕಥೆ ಹಾಗೂ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಪರಿಸರದ ಪಾಠ ಮಾಡಿದರು. ಮಧ್ಯಾಹ್ನ ಆಟ ಮುಗಿಸಿ ತೋಟ ಸುತ್ತಾಟಕ್ಕೆ ಹೊರಟ ಚಿಣ್ಣರು, ಅಡಿಕೆ, ತೆಂಗು, ತರಕಾರಿ ತೋಟದ ತಂಪಿನಲ್ಲಿ ಎ.ಸಿ. ರೂಂನ ಸುಖ ಕಂಡುಕೊಂಡರು. ಕೆಲವು ಮಕ್ಕಳಂತೂ ಅಡಿಕೆ ಮರವೇರುವ ಪ್ರಯತ್ನಕ್ಕೇ ತೊಡಗಿದರು.
ಪರಿಸರ ತಜ್ಞ ಅರವಿಂದ ಕುಡ್ಲ ಅವರು ಮರ ಗಿಡಗಳ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಕೊಕ್ಕೋ ಗಿಡದ ಕಾಯಿ ಚಾಕಲೇಟಿಗೆ ಬಳಕೆಯಾಗುತ್ತೆ, ಬಟ್ಟಲಲ್ಲಿ ಅನ್ನ ಬೀಳ್ಬೇಕಾದ್ರೆ ಭತ್ತದ ತೆನೆ ಬೆಳೆಯಲೇ ಬೇಕು ಮೊದಲಾದ ವಿಚಾರಗಳು ಮಕ್ಕಳಲ್ಲಿ ಪರಿಸರದ ಬಗೆಗಿನ ಕುತೂಹಲಗಳನ್ನು ಇಮ್ಮಡಿಗೊಳಿಸಿತು. ಬದನೆ, ಬೆಂಡೆಕಾಯಿ, ಹಾಗಲ ಕಾಯಿ, ತೊಂಡೆಕಾಯಿ, ಕಾಯಿ ಮೆಣಸುಗಳನ್ನು ಗಿಡದಲ್ಲೇ ಕಂಡು ಸಂಭ್ರಮಪಟ್ಟರು.
ಮಧ್ಯಾಹ್ನ ಊಟದ ಬಳಿಕ ಮಕ್ಕಳ ಆಸಕ್ತಿ ಫಾರ್ಮ್ಸ್ ನ ದನಗಳತ್ತ ಸರಿಯಿತು. ದನ ಹೇಗೆ ಹಾಲು ಕೊಡುತ್ತೆ?ಅದಕ್ಕೇನು ಫುಡ್ ಕೊಡ್ತಾರೆ? ಎಂಬ ಪ್ರಶ್ನೆಗಳಿಗೆ ಫಾರ್ಮ್ಸ್ ನ ಉದ್ಯೋಗಿ ಸುಭಾಸ್ ಮಕ್ಕಳ ಧಾಟಿಯಲ್ಲೇ ಉತ್ತರ ಕೊಟ್ಟರೆ, ರತ್ನಮ್ಮ ಮಕ್ಕಳ ಮುಂದೆಯೇ ದನದ ಹಾಲು ಕರೆದು, ಆ ಹಾಲನ್ನೇ ಬಿಸಿ ಮಾಡಿ ಮಕ್ಕಳಿಗೆ ಕುಡಿಯಲು ಕೊಟ್ಟರು.
ದಿನವಿಡೀ ನಡೆದ ಶಿಬಿರಕ್ಕೆ ಪತ್ರಕರ್ತ, ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಆಗಮಿಸಿ, ಮಕ್ಕಳ ಚಟುವಟಿಕೆಗಳಿಗೆ ಹುರುಪು ತುಂಬಿದರು. ಗ್ರೀನ್ ವುಡ್ ಫಾರ್ಮ್ಸ್ ನ ಮಾಲಕ, ಪತ್ರಕರ್ತ ಶ್ರೀನಿವಾಸ್ ನಾಯಕ್ ಇಂದಾಜೆ ಮಕ್ಕಳ ಆಸಕ್ತಿದಾಯಕ ಚಟುವಟಿಕೆಗಳಿಗೆ ಫಾರ್ಮ್ಸ್ ನಲ್ಲಿ ಅವಕಾಶ ಒದಗಿಸಿಕೊಡುವುದಾಗಿ ತಿಳಿಸಿದರು. ಚಿಂತನ ಬಳಗದ ಅಧ್ಯಕ್ಷ ಇಸ್ಮಾಯಿಲ್, ಸುಖೇಶ್ ಶೆಟ್ಟಿ, ಪ್ರೇಮ್ನಾಥ್ ಮರ್ಣೆ, ಸಂಧ್ಯಾ ಪ್ರೇಮ್ ನಾಥ್ ಮೊದಲಾದವರು ದಿನವಿಡೀ ನಡೆದ ಮಕ್ಕಳ ‘ಹಳ್ಳಿಯಲ್ಲಿ ಚಿಣ್ಣರು’ ಕಾರ್ಯಕ್ರಮದ ನೇತೃತ್ವ ವಹಿಸಿ ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
ಪಕ್ಷಿಗಳ ಹೊಸ ಲೋಕ
ಪರಿಸರ ತಜ್ಞ ಅರವಿಂದ ಕುಡ್ಲ ನಡೆಸಿಕೊಟ್ಟ ಪಕ್ಷಿ ಪ್ರೀತಿಯ ತರಗತಿ ಮಕ್ಕಳನ್ನು ಪಕ್ಷಿ ಸಂಕುಲದ ಹೊಸ ಲೋಕಕ್ಕೆ ಕೊಂಡೊಯ್ಯಿತು. ಪಕ್ಷಿ ಪ್ರೀತಿ ಯಾಕೆ ಬೇಕು ಎನ್ನುತ್ತಲೇ ಪಕ್ಷಿ ಲೋಕದ ತನ್ನ ಅಧ್ಯಯನದ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು. ಪಕ್ಷಿಗಳ ಸಚಿತ್ರ ಮಾಹಿತಿಯ ಜತೆಗೆ ಅದರ ಚಲನವಲನ, ಗೂಡು ಕಟ್ಟುವಿಕೆ, ಆಹಾರ ಪದ್ಧತಿಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಪಕ್ಷಿಗಳ ಜತೆಗಿನ ಒಡನಾಟವು ಪರಿಸರದ ಮೇಲಿನ ಪ್ರೀತಿಯನ್ನೂ ಹೆಚ್ಚಿಸುತ್ತದೆ ಎಂದು ಮಕ್ಕಳಿಗೆ ಮನನ ಮಾಡಿದರು.
ಸಂಭ್ರಮಪಟ್ಟ ಮಕ್ಕಳು
ಕಾಂಕ್ರೀಟ್ ಕಾಡುಗಳ ಮಧ್ಯೆ ವಾಸಿಸುವ ನಗರದ ಪ್ರದೇಶದ ವಿದ್ಯಾರ್ಥಿಗಳು ದಟ್ಟ ಅರಣ್ಯದ ಹಸಿರು ಪರಿಸರದೊಂದಿಗೆ ಸಂತಸದ ದಿನವನ್ನು ಕಳೆದು ಸಂಭ್ರಮಪಟ್ಟಿದ್ದಾರೆ.
– ಇಸ್ಮಾಯಿಲ್, ಅಧ್ಯಕ್ಷರು, ಚಿಂತನ ಬಳಗ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ