ಆನ್ಲೈನ್ ಕ್ಲಾಸ್ಗಾಗಿ ಕಾಡಿನಲ್ಲಿ ಟೆಂಟ್
ಶಿಬಾಜೆ ಪೆರ್ಲ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆ
Team Udayavani, Jul 25, 2020, 7:45 AM IST
ಶಿಬಾಜೆ ಪೆರ್ಲ ಬೈಕರ ಗುಡ್ಡದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಟೆಂಟ್.
ಬೆಳ್ತಂಗಡಿ: ಶಿಕ್ಷಣ ವ್ಯವಸ್ಥೆಗೆ ಕೋವಿಡ್ ಕರಿಛಾಯೆ ತಟ್ಟಿರುವ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯ ಸದೃಢಗೊಳಿಸುವಲ್ಲಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಮಸ್ಯೆ ಕಗ್ಗಂಟಾಗಿ ಉಳಿದಿದ್ದು, ವಿದ್ಯಾರ್ಥಿಗಳು ನೆಟ್ವರ್ಕ್ ಅರಸಿ ಗುಡ್ಡಗಾಡು ಅಲೆಯುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ಪೆರ್ಲ ವಿದ್ಯಾರ್ಥಿ ಗಳ ತಂಡವೊಂದು ಆನ್ಲೈನ್ ತರಗತಿಗೆ ಹಾಜರಾಗಲು ನೆಟ್ವರ್ಕ್ ಅರಸಿ ಗುಡ್ಡದಲ್ಲಿ ಟೆಂಟ್ ನಿರ್ಮಿಸಿರುವ ವಿಚಾರ ಗಮನ ಸೆಳೆದಿದೆ. ಶಿಬಾಜೆ ಗ್ರಾಮದ ಪೆರ್ಲ, ಬಂಡಿಹೊಳೆ, ಹೊಸತೋಟ, ಬೂಡುಡಮಕ್ಕಿ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಮನೆಗಳಿದ್ದು 150ರಿಂದ 200 ವಿದ್ಯಾರ್ಥಿಗಳಿದ್ದಾರೆ. ಸುತ್ತಮುತ್ತ ಗುಡ್ಡ ಗಾಡು ಪ್ರದೇಶವಾಗಿರುವುದರಿಂದ ನೆಟ್ವರ್ಕ್ ಪಡೆಯಲು ಶಿಬಾಜೆ ಪೇಟೆಗೆ ಬರ ಬೇಕಿದೆ. ಇದಕ್ಕಿಂತ ಮನೆಯಿಂದ ಅರ್ಧ ಕಿ.ಮೀ. ದೂರ ಕಾಡಿನಲ್ಲಿ ತಾವೇ ಟೆಂಟ್ ನಿರ್ಮಿಸಿ ಆನ್ಲೈನ್ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.
ಪೆರ್ಲ ನಿವಾಸಿಗಳಾದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಕಾಸ್ ರಾವ್, ಎಸ್ಡಿಎಂ ಉಜಿರೆ ಪ್ರಥಮ ಪಿಯುಸಿಯ ವಿಶ್ಮಿತಾ, ಉಜಿರೆ ಎಸ್ಡಿಎಂ ಎಂಜಿನಿಯರಿಂಗ್ ವಿದ್ಯಾರ್ಥಿ ದೀಪಕ್ ಹೆಬ್ಟಾರ್, ಎಸೆಸೆಲ್ಸಿ ವಿದ್ಯಾರ್ಥಿ ದೀಮಂತ್ ಹೆಬ್ಟಾರ್, ಎಸ್ಡಿಎಂನ ಎಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್, ಉಳಿದಂತೆ ಮಧುಶ್ರೀ, ಸ್ಕಂದ ಪ್ರಸಾದ್, ನಂದಕಿಶೋರ್ ಜತೆಗೂಡಿ ಬೈಕರ ಎಂಬ ಕಾಡಿನಲ್ಲಿ ಟೆಂಟ್ ನಿರ್ಮಿಸಿ ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ.
ಸಂಜೆಯವರೆಗೆ ಟೆಂಟ್ ಆಶ್ರಯ
ಮುಂಜಾನೆ 9ಕ್ಕೆ ಮನೆ ಬಿಡುವ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವಂತೆ ಸಂಜೆ 4ರ ಬಳಿಕ ಮನೆ ಸೇರುತ್ತಿದ್ದಾರೆ. ಮಧ್ಯಾಹ್ನಕ್ಕೆ ಟಿಫಿನ್ ಆಶ್ರಯಿಸಿದ್ದಾರೆ. ಇದೊಂದು ರೀತಿಯ ಶಾಲೆ-ಕಾಲೇಜಿನ ಅನುಭವವೇ ಆಗಿದೆ. ಶಿಬಾಜೆ, ಶಿಶಿಲ ಗಳಲ್ಲಿ ಆನೆಗಳ ಉಪಟಳ ಹೆಚ್ಚಿದ್ದು, ದಾಳಿ ನಡೆಸುವ ಸಾಧ್ಯತೆಯೂ ಇದೆ.
ಪರೀಕ್ಷೆಗೆ ಅಡ್ಡಿ
ಎಂಜಿನಿಯರಿಂಗ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ನೆಟ್ವರ್ಕ್ ಅವಶ್ಯವಿದೆ. ಈ ಸಮಯದಲ್ಲಿ ಇಂಟರ್ನೆಟ್ ಕೈಕೊಟ್ಟಲ್ಲಿ ಫೇಲ್ ಆಗುವ ಸಾಧ್ಯತೆ ಇದೆ. ಮತ್ತೂಂದೆಡೆ ಕಾಲೇಜಿನ ಪಠ್ಯಚಟುವಟಿಕೆಗೆ ಸಂಬಂಧಿಸಿದ ಕಾರ್ಯ ಯೋಜನೆ ಕ್ಲಪ್ತ ಸಮಯದಲ್ಲಿ ನೀಡಲು ಸಾಧ್ಯವಾಗದಂತ ಪರಿಸ್ಥಿತಿ ಬಂದೊಗಿದೆ.
ಇರುವ ಟವರ್ಗಳಿಗೆ ಲೋಡ್
ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಒಂದೇ ಕಡೆ ಸೇರಿದಾಗ ಟವರ್ಗಳ ಸಾಮರ್ಥ್ಯ ಗೌಣವಾಗುತ್ತದೆ. ಒಂದು ಟವರ್ ಸಾಮಾನ್ಯ 2 ಟಿಬಿ ಸ್ಪೀಡ್ ಸಾಮರ್ಥ್ಯವಿದ್ದರೂ ಸಾಲುತ್ತಿಲ್ಲ. ಮತ್ತೂಂದೆಡೆ ತಾಲೂಕಿನಲ್ಲಿ ಬಿಎಸ್ಸೆನ್ನೆಲ್ನಲ್ಲಿ 8 ಸಿಬಂದಿ ಮಾತ್ರ ಇದ್ದು, 23ಕ್ಕೂ ಹೆಚ್ಚು ಮಂದಿ ಈಗಾಗಲೇ ವಿಆರ್ಎಸ್ನಲ್ಲಿ ತೆರಳಿರುವುದರಿಂದ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ.
ಏರಿಯಾ ಮ್ಯಾನೇಜರ್ ಗಮನಕ್ಕೆ
ಶಿಬಾಜೆ ನೆಟ್ವರ್ಕ್ ಸಮಸ್ಯೆ ಕುರಿತು ಏರಿಯಾ ಮ್ಯಾನೇಜರ್ ಗಮನಕ್ಕೆ ತರಲಾಗುವುದು. 4ಜಿ ಅಳವಡಿಕೆಗೆ ತಾಂತ್ರಿಕ ತೊಂದರೆಗಳಿವೆ. ಗ್ರಾಮೀಣ ಭಾಗಗಳಲ್ಲಿ ಟವರ್ ನಿರ್ಮಾಣ ಬೇಡಿಕೆ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸರ್ವೇ ನಡೆಸಿ ವರದಿ ನೀಡಬೇಕಿದೆ.
– ಮುರುಗೇಶನ್, ಆಡಳಿತಾಧಿಕಾರಿ, ಬಿಎಸ್ಸೆನ್ನೆಲ್, ದ.ಕ. ಜಿಲ್ಲೆ
4ಜಿ ನೆಟ್ವರ್ಕ್ ಅವಶ್ಯ
ನಮ್ಮ ಶಿಕ್ಷಣಕ್ಕೆ ಪೂರಕ ವಾತಾವರಣ ಗ್ರಾಮೀಣ ಭಾಗದಲ್ಲಿ ಸಿಗುತ್ತಿಲ್ಲ. ಬಿಎಸ್ಸೆನ್ನೆಲ್ 3ಜಿ ಸಮಸ್ಯೆ ಇದೆ. ಶೀಘ್ರ ಶಿಬಾಜೆ ಆಸುಪಾಸು 4ಜಿ ನೆಟ್ವರ್ಕ್ ಅವಶ್ಯವಿದೆ.
– ವಿಕಾಸ್ ರಾವ್, ಎಂಜಿನಿಯರಿಂಗ್ ವಿದ್ಯಾರ್ಥಿ
ನೆಟ್ವರ್ಕ್ ಸಿಗುವಲ್ಲಿ ಟೆಂಟ್
ಮಕ್ಕಳು ಮಾನಸಿಕವಾಗಿ ಕುಗ್ಗಬಾರದೆಂಬ ದೃಷ್ಟಿಯಿಂದ ಕಾಡಿನಲ್ಲಿ ನೆಟ್ವರ್ಕ್ ಸಿಗುವಲ್ಲಿ ಟೆಂಟ್ ನಿರ್ಮಿಸಿದ್ದೇವೆ. ಕೋವಿಡ್ ಆತಂಕದಿಂದ ನೆಟ್ವರ್ಕ್ ಸಿಗುವ ಮನೆಗೆ ಕಳುಹಿಸಲೂ ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಗಿದೆ.
– ಲಕ್ಷ್ಮೀನಾರಾಯಣ ರಾವ್, ಹೆತ್ತವರು