ಏಕಮುಖ ಸಂಚಾರ: ಟ್ರಾಫಿಕ್ನಲ್ಲಿ ಸಿಲುಕಿದ ಎಸ್ಐ!
Team Udayavani, May 11, 2019, 9:37 AM IST
ಉಪ್ಪಿನಂಗಡಿ: ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಏಕಮುಖ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಉಪ್ಪಿನಂಗಡಿ: ಏಕಮುಖ ಸಂಚಾರದಿಂದ ಇಲ್ಲಿನ ಪೊಲೀಸ್ ಠಾಣೆ ಪಿಎಸ್ಐ ಅವರೇ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ, ಕೊನೆಗೆ ಅವರೇ ಸಂಚಾರ ಸುಗಮಗೊಳಿಸಿದ ಪ್ರಸಂಗ ಪಟ್ಟಣದಲ್ಲಿ ನಡೆಯಿತು.
ಎಂಟು ದಿನಗಳ ಹಿಂದೆ ದಿಡೀರ್ ಏಕಮುಖ ಸಂಚಾರ ನಿರ್ಬಂಧದಿಂದ ಶೆಣೈ ನರ್ಸಿಂಗ್ ಹೋಮ್ ರಸ್ತೆಗೆ ಯಾವುದೇ ವಾಹನವನ್ನು ಒಳಗೆ ತಿರುಗಿಸುವಂತಿಲ್ಲ. ಮಂಗಳೂರು ಹಾಗೂ ಪುತ್ತೂರಿನಿಂದ ಸರಕು ಹೇರಿಕೊಂಡು ಬಂದ ಘನ ವಾಹನಗಳು ಏಕಾಏಕಿ ಒಳ ಹೊಕ್ಕಿಸುವಂತಿಲ್ಲ. ಇದರಿಂದ ಎಲ್ಲ ವಾಹನಗಳು ನೇರ ಬಸ್ ನಿಲ್ದಾಣದ ಪ್ರವೇಶ ದ್ವಾರದಿಂದಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಗುರುವಾರ ಸಂತೆ ದಿನವಾಗಿದ್ದು, ಆಗಾಗ ಟ್ರಾಫಿಕ್ ಜಾಮ್ ಆಗಿ ಸಮಸ್ಯೆಯಾಗಿತ್ತು.
ಇಲ್ಲಿನ ಸಮಸ್ಯೆಯ ಬಿಸಿ ಸ್ವತಃ ಪಿಎಸ್ಐ ನಂದಕುಮಾರ್ ಅವರಿಗೂ ತಟ್ಟಿತು. ನೆಲ್ಯಾಡಿ ಸಮೀಪ ಜೀಪ್ ಅಪಘಾತದಲ್ಲಿ ಒಬ್ಬರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದರು. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಹೇಳಿಕೆ ಪಡೆಯಲು ಅವರು ಪುತ್ತೂರಿಗೆ ಹೊರಟಿದ್ದರು. ಆದರೆ, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಸುಮಾರು ಅರ್ಧ ಗಂಟೆ ಚಡಪಡಿಸಿದರು. ಕೊನೆಗೆ ಅವರೇ ಮುಂದೆ ನಿಂತು ವಾಹನಗಳು ಸುಗಮವಾಗಿ ಸಂಚರಿಸಲು ನಿರ್ದೇಶನ ನೀಡಿದರು.
ಎಲ್ಲವೂ ಸರಿಯಾದ ಬಳಿಕವೇ ಅವರು ಪುತ್ತೂರಿಗೆ ತೆರಳಿದರು. ಪಿಎಸ್ಐ ಅವರ ತಾಳ್ಮೆಯ ನಡವಳಿಕೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.