ಪೈಚಾರು: ಹೊಂಡ-ಗುಂಡಿಗೆ ದುರಸ್ತಿ ಭಾಗ್ಯ
Team Udayavani, Dec 1, 2018, 2:13 PM IST
ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಳ್ಯ ನಗರದ ಪೈಚಾರು ಸೇತುವೆ ಬಳಿಯ ರಸ್ತೆಯಲ್ಲಿ ಹಲವು ಸಮಯಗಳಿಂದ ಹೊಂಡ ಗುಂಡಿಗಳಿಂದ ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಶುಕ್ರವಾರ ರಸ್ತೆ ದುರಸ್ತಿ ಕಾಮಗಾರಿ ನಡೆಸಿ ಹೊಂಡಗಳಿಂದ ಮುಕ್ತಿ ನೀಡಿದೆ.
ರಸ್ತೆ ಅವ್ಯವಸ್ಥೆಯ ಬಗ್ಗೆ ‘ಉದಯವಾಣಿ’ ಸುದಿನ ಹಲವು ಬಾರಿ ವಿಸ್ತೃತ ವರದಿ ಪ್ರಕಟಿಸಿತ್ತು. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ಹೊಂಡ, ಕೆಸರು ನೀರು, ಬೇಸಗೆ ಕಾಲದಲ್ಲಿ ಧೂಳು, ಹೊಂಡಗಳಿಂದ ವಾಹನ ಸವಾರರು ಹೈರಾಣಾಗಿ ಹೋಗಿದ್ದರು.
ತಾ.ಪಂ. ಕೆಡಿಪಿ ಸಭೆಗಳಲ್ಲಿಯೂ ಈ ವಿಷಯ ಪ್ರಸ್ತಾವವಾಗಿತ್ತು. ಮಳೆಗಾಲದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಿದ್ದರೂ ಅದು ಪ್ರಯೋಜನ ಆಗಿರಲಿಲ್ಲ. ಈಗ ಡಾಮರು ಹಾಕಿ ಹೊಂಡ ಮುಚ್ಚಲಾಗಿದೆ. ರಸ್ತೆಯ ಎರಡು ದಿಕ್ಕಿನಲ್ಲಿ ವ್ಯವಸ್ಥಿತ ಚರಂಡಿ ನಿರ್ಮಾಣವಾದಲ್ಲಿ ಮಾತ್ರ ದುರಸ್ತಿ ಕಾಮಗಾರಿ ನಿಲ್ಲಬಹುದು. ಇಲ್ಲದಿದ್ದರೆ ಮಳೆಗಾಲದಲ್ಲಿ ಮತ್ತೆ ಹೊಂಡ ಸೃಷ್ಟಿಯಾಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.