ಸುಳ್ಯ ನಗರ ಮುಖ್ಯ ರಸ್ತೆಯಲೆಲ್ಲ ಹೊಂಡ: ಸವಾರರಿಗೆ ಸಂಕಷ್ಟ
ವಾಹನ ಚಾಲಕರ ಆಕ್ರೋಶ
Team Udayavani, Aug 12, 2022, 3:18 PM IST
ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದ ಮುಖ್ಯ ರಸ್ತೆ ಶ್ರೀರಾಮ್ ಪೇಟೆಯ ರಸ್ತೆಯ ಡಾಮರು ಕಿತ್ತು ಹೋಗಿದ್ದು, ಹೊಂಡ- ಗುಂಡಿಗಳಿಂದ ಸಂಚಾರ ದುಸ್ತರಗೊಂಡಿದೆ. ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸೆತ್ತಿದ್ದಾರೆ.
ಶ್ರೀರಾಮ್ ಪೇಟೆಯ ಸುಳ್ಯ ತಾಲೂಕು ಪಂಚಾಯತ್ ಸಂಪರ್ಕಿಸುವ ಜಂಕ್ಷನ್ ರಸ್ತೆಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ರಸ್ತೆ ದುಸ್ತರದಿಂದ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯೂ ಉಂಟಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಇಲ್ಲಿ ಉಂಟಾಗಿರುವ ರಸ್ತೆ ಹೊಂಡದಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ದ್ವಿಚಕ್ರ ವಾಹನ ಸವಾರರು ಸಹಿತ ಇತರ ವಾಹನ ಸವಾರರಿಗೆ ಈ ಹೊಂಡ ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ನಗರದ ಮುಖ್ಯ ರಸ್ತೆಯ ಸ್ಥಿತಿ ಬಗ್ಗೆ ತೀವ್ರ ಆಕ್ರೋಶ ಕೇಳಿಬಂದಿದೆ.
ಸುಳ್ಯ ನಗರ ವಿವಿಧ ಕಡೆಗಳಲ್ಲೂ ರಸ್ತೆಗಳು ಹಾನಿಯಾಗಿದೆ. ಆಲೆಟ್ಟಿ ಸಂಪರ್ಕ ರಸ್ತೆ, ಪೊಲೀಸ್ ಠಾಣೆ ಬಳಿ, ರಥ ಬೀದಿ ಸಂಪರ್ಕ ರಸ್ತೆಯಲ್ಲೂ ಉಂಟಾದ ಹೊಂಡದ ವ್ಯವಸ್ಥಿತ ದುರಸ್ತಿ ನಡೆಯದೇ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಳೆಗೇಟು ಸೇತುವೆಯಲ್ಲೂ ಹೊಂಡ- ಗುಂಡಿ ಉಂಟಾಗಿದೆ. ಒಟ್ಟಿನಲ್ಲಿ ಹದಗೆಟ್ಟ ರಸ್ತೆ ವಾಹನ ಸವಾರರಿಗೆ ಸಂಕಷ್ಟದ ಜತೆ ಅಪಾಯಕಾರಿಯಾಗಿದೆ. ರಸ್ತೆ ದುರಸ್ತಿ ಗೊಳಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.