ಇಲ್ಲಿ ಇರುವುದಕ್ಕಿಂತ ಇಲ್ಲವುಗಳೇ ಹೆಚ್ಚು
Team Udayavani, Sep 2, 2021, 3:00 AM IST
ಎರಡು ತಾಲೂಕುಗಳ ಗ್ರಾಮವಾದರೂ ಇಳಂತಿಲದಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲ.ಒಳ ರಸ್ತೆ ಅಭಿವೃದ್ಧಿ ಸಹಿತ ಅನೇಕ ಮೂಲಸೌಕರ್ಯಗಳ ಕೊರತೆ ಇಲ್ಲಿದೆ. ಈ ಕುರಿತು ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ ಬೆಳಕು ಚೆಲ್ಲುವ ಪ್ರಯತ್ನ.
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರ ಹಾಗೂ ಪುತ್ತೂರು ತಾಲೂಕು ಕೇಂದ್ರದಿಂದ ಸರಿಸುಮಾರು ಒಂದೇ ಅಂತರದಲ್ಲಿ ಇರುವ ಈ 2 ತಾಲೂಕುಗಳ ಗಡಿಭಾಗದ ಇಳಂತಿಲ ಗ್ರಾಮ ಹಲವು ಮೂಲಸೌಕರ್ಯಗಳು ಇಲ್ಲದಂತಿರುವ ಗ್ರಾಮಗಳಲ್ಲಿ ಒಂದು.
ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ನೇರ ಬಸ್ ಸೌಲಭ್ಯ ಇಲ್ಲದೆ ಇಲ್ಲಿನ ನಾಗರಿಕರ ಸಂಚಾರ ಸಂಕಟ ಹೇಳತೀರದು. ಈ ಊರಿಗೆ ಸರಕಾರಿ ಬಸ್ ಕನಸಿನ ಮಾತಾದರೆ ಇರುವ ಖಾಸಗಿ ಬಸ್ ಕೂಡ ಈಗ ಓಡುತ್ತಿಲ್ಲ. ಇದರಿಂದಾಗಿ ಇಲ್ಲಿನ ಜನರು ಖಾಸಗಿ ವಾಹನಗಳ ಮೊರೆಹೋಗುವುದು ಅನಿವಾರ್ಯವಾಗಿದೆ. ಪ್ರಾಥಮಿಕ ಶಿಕ್ಷಣವೇನೋ ಗ್ರಾಮದಲ್ಲಿ ಇದೆ. ಆದರೆ ಉನ್ನತ ಶಿಕ್ಷಣಕ್ಕಾಗಿ ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು ಕಡೆಗೆ ಬರಬೇಕಾದರೆ ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳ ಪಾಲಕರ ಜೇಬಿಗೆ ನಿತ್ಯ ಕತ್ತರಿ. ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಸರಕಾರಿ ಬಸ್ ಅಗತ್ಯ ಓಡಿಸಬೇಕೆಂಬುದು ಗ್ರಾಮದ ಜನರ ಆಗ್ರಹವಾಗಿದೆ.
ಕೆಸರು ಮಯ ರಸ್ತೆ:
ನೇಜಿಕಾರಿನ ಕಲೋಳಿ, ಕಾಡುಮನೆ, ಅಲೈಮಾರು, ಅಂಬೊಟ್ಟು ಮುಂತಾದೆಡೆಗೆ ಸಾರ್ವಜನಿಕ ಮಣ್ಣಿನ ರಸ್ತೆಯಿದ್ದು ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಕೆಸರು ಗದ್ದೆಯಾಗಿ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಬೇಸಗೆ ಬಂತೆಂದರೆ ಧೂಳ್ಳೋ ಧೂಳು.
ಒಳ ರಸ್ತೆಗಳ ಅಭಿವೃದ್ಧಿ ಕುರಿತಾಗಿ ಸುಮಾರು 25 ವರ್ಷಗಳಿಂದ ಪ್ರತೀ ಬಾರಿ ಶಾಸಕರಿಗೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಮತ ಯಾಚನೆಗೆ ಬಂದಾಗ ಮನವರಿಕೆ ಮಾಡಿದರೂ ಭರವಸೆ ಮಾತ್ರ ಸಿಕ್ಕಿದೆ ಹೊರತು ಕಾರ್ಯವಾಗಿಲ್ಲ ಎಂಬ ಗಂಭೀರ ದೂರು ಇಲ್ಲಿನವರದು. ಪೆದಮಲೆ -ಅಂಡೆತ್ತಡ್ಕ- ಇಳಂತಿಲ ರಸ್ತೆಯೂ ತೀರಾ ಹಾಳಾಗಿದೆ.
ಕುಡಿಯುವ ನೀರಿನ ಸಮಸ್ಯೆ :
ಜೀವ ನದಿ ನೇತ್ರಾವತಿಯ ಮಡಿಲಲ್ಲೇ ಗ್ರಾಮ ಇದ್ದರೂ ಬೇಸಗೆ ಬಂತೆಂದರೆ ಕಡವಿನ ಬಾಗಿಲು, ಪೆರ್ಲಾಪು ಮುಂತಾದ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಿದೆ. ಈ ಪ್ರದೇಶದಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಂಡಿದ್ದರೂ ಬೇಸಗೆಯಲ್ಲಿ ನೀರಿನ ಮೂಲವೇ ಬತ್ತುವುದು ಇಲ್ಲಿನ ಸಮಸ್ಯೆಯ ಮೂಲ.
ಕಾಡು ಪ್ರಾಣಿಗಳ ಕಾಟ :
ಕೃಷಿಯೇ ಪ್ರಧಾನವಾದ ಈ ಗ್ರಾಮದಲ್ಲಿ ಈಗ ಕಾಡುಪ್ರಾಣಿಗಳ ಕಾಟ ಅಧಿಕವಾಗಿದೆ. ಮರ, ಗಿಡದಲ್ಲಿ ಬೆಳೆದ ಬೆಳೆ ಮಂಗಗಳ ಪಾಲಾದರೆ ಅವುಗಳಿಂದ ಉಳಿದು ನೆಲಕ್ಕೆ ಬಿದ್ದರೆ ಹಂದಿಗಳು ರೆಡಿ. ತೋಟದಲ್ಲಿ ಗಿಡ ನೆಟ್ಟರೆ ಅವುಗಳ ಬುಡವನ್ನು ಆಹಾರ ಅರಸಿ ಬಂದ ಹಂದಿಗಳು ಅಗೆದು ಗಿಡ ಬೆಳೆಯಲೇ ಅವಕಾಶ ನೀಡುತ್ತಿಲ್ಲ. ಕಾಡುಪ್ರಾಣಿಗಳ ಕಾಟದ ಕುರಿತು ಅರಣ್ಯ ಇಲಾಖೆಗೆ ದೂರಿದರೂ ಈ ವರೆಗೆ ಪ್ರಯೋಜನ ಆಗಿಲ್ಲ ಎನ್ನುತ್ತಿದ್ದಾರೆ ಕೃಷಿಕರು.
ನೆಟ್ ವರ್ಕ್ ಸಮಸ್ಯೆ :
ನೆಟ್ ವರ್ಕ್ ಸಮಸ್ಯೆ ಈ ಗ್ರಾಮವನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಡಿತರಕ್ಕಾಗಿ ಒಂದು ಕುಟುಂಬವು ಹಲವು ಬಾರಿ ನ್ಯಾಯಬೆಲೆ ಅಂಗಡಿ ಬಾಗಿಲಿಗೆ ಹೋಗಬೇಕಾದ ಸ್ಥಿತಿ ಇದೆ. ಆನ್ ಲೈನ್ ಶಿಕ್ಷಣ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳ ಪರದಾಟ ಹೇಳತೀರದಾಗಿದೆ.
ಖಾಯಂ ಪಿಡಿಒ ಇಲ್ಲ :
ಇಳಂತಿಲ ಗ್ರಾ. ಪಂ.ಗೆ ವಿವಿಧ ಕಾರ್ಯ ನಿಮಿತ್ತ ತೆರಳಿದರೆ ಪೂರ್ಣಕಾಲಿಕೆ ಪಿಡಿಒ ಇಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ.
ನೇಜಿಕಾರಿನಲ್ಲಿ ಇರುವ ಅಕ್ಷರ ಕರಾವಳಿ ಕಟ್ಟಡವೊಂದು ಇಂದೋ ನಾಳೆಯೊ ಕುಸಿಯುವ ಹಂತ ತಲುಪಿದೆ.
ಪ್ರಾ.ಆ. ಕೇಂದ್ರ ಬೇಕು :
ಗ್ರಾಮದ ಜನ ಆರೋಗ್ಯ ಸಮಸ್ಯೆಗೊಳಗಾದರೆ ಕಣಿಯೂರು ಅಥವಾ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. “ಉಳ್ಳವರು’ ತಮಗೆ ಬೇಕಾದ ವೈದ್ಯರ ಬಳಿ ತಮ್ಮದೇ ವಾಹನದಲ್ಲಿ ತೆರಳುತ್ತಾರೆ. ಈ ಗ್ರಾಮ ಕೇಂದ್ರದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕನಿಷ್ಠ ಉಪ ಆರೋಗ್ಯ ಕೇಂದ್ರವಾದರೂ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪಶು ಆರೋಗ್ಯ ಕೇಂದ್ರವೂ ಬೇಕೆಂಬುದು ಇಲ್ಲಿನವರ ಬೇಡಿಕೆ ಪಟ್ಟಿಯಲ್ಲಿದೆ.
ಘನತ್ಯಾಜ್ಯ ಘಟಕ :
ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದರೂ ಅದರ ಉದ್ಘಾಟನೆ ಆಗಿಲ್ಲ. ತ್ಯಾಜ್ಯ ನಿರ್ವಹಣೆ ಈಗ ಸಮರ್ಪಕವಾಗಿಲ್ಲ. ಗ್ರಾಮದ ಜನರಿಗಿಂತಲು ಹೆಚ್ಚಾಗಿ ಗ್ರಾಮದ ಮೂಲಕ ವಾಹನಗಳಲ್ಲಿ ಹಾದು ಹೋಗುವ ಜನರು ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುವುದು ಈ ಗ್ರಾಮದ ಮುಖ್ಯ ಸಮಸ್ಯೆಗಳಲ್ಲಿ ಒಂದು.
-ಎಂ.ಎಸ್. ಭಟ್ ಉಪ್ಪಿನಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್