ಪಡುವನ್ನೂರು: ಬಡ ಕುಟುಂಬಕ್ಕೆ ಸೌಕರ್ಯವಿಲ್ಲ
Team Udayavani, Jul 18, 2019, 5:00 AM IST
ನಗರ: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಬಡ ಕುಟುಂಬವೊಂದು ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದೆ.
ಪ್ರತಿಯೊಬ್ಬರಿಗೂ ಮೂಲಸೌಕರ್ಯ ಒದಗಿಸುವುದು ಆಡಳಿತದ ಜವಾಬ್ದಾರಿ.ಆದರೆ ಈ ಕುಟುಂಬ ಈಗಲೂ ಮೂಲ ಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದೆ. ಪಡುವನ್ನೂರು ಗ್ರಾಮದ ಮೂಡಾಯೂರು ನಿವಾಸಿ ದಿ| ಸುಂದರ ನಾಯ್ಕ ಅವರ ಪತ್ನಿ ಪಾರ್ವತಿ ಅವರ ಕುಟುಂಬವೇ ಮೂಲ ಸೌಕರ್ಯವಂಚಿತ ಕುಟುಂಬವಾಗಿದೆ.
ತೀರಾ ಬಡವರಾಗಿರುವ ಇವರು ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಒಂದು ಹೆಣ್ಣು ಮತ್ತು ಗಂಡು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿರುವ ಇವರು ಮೂಲ ಸೌಕರ್ಯ ಒದಗಿಸುವಂತೆ ಜನಪ್ರತಿನಿಧಿಗಳಿಗೆ, ಗ್ರಾ.ಪಂ.ಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.