ಪುತ್ತೂರು ಎಪಿಎಂಸಿ ರಸ್ತೆ: ಅಂಡರ್ಪಾಸ್ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್
Team Udayavani, Oct 23, 2021, 5:53 AM IST
ಪುತ್ತೂರು: ಎಪಿಎಂಸಿ ಸಂಪರ್ಕ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿ ಸಿರುವ ಅಂಡರ್ಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ಅರ್ಧ ಅನುದಾನವನ್ನು ರೈಲ್ವೇ ಇಲಾಖೆ ನೀಡಬೇಕಿದ್ದು, ಇದಕ್ಕೆ ಸಂಬಂಧಪಟ್ಟ ಕಡತ ರೈಲ್ವೇ ಸಚಿವರ ಬಳಿ ಇದ್ದು ಶೀಘ್ರ ಅಂತಿಮ ಮುದ್ರೆ ಸಿಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಕೋ. ರೂ.ಗಳ ಯೋಜನೆ ಇದಾಗಿದೆ. ಶೇ. 50 ಅನುದಾನವನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ನೀಡಲಿದೆ. ಈ ಸಂಬಂಧ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪ್ರಯತ್ನ ಮಾಡಿ ಯಶಸ್ಸು ಸಾಧಿಸಲಾಗಿದೆ. ಉಳಿದ ಮೊತ್ತ ಮಂಜೂರು ಮಾಡುಂವಂತೆ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದರು.
ಚತುಷ್ಪಥ ಕಾಮಗಾರಿ ಶೀಘ್ರ ಪ್ರಾರಂಭ
ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿಯನ್ನು ವೇಗವಾಗಿ ಮುಂದು ವರಿಸಲು ಸೂಚಿಸಲಾಗಿದೆ. ನ. 1ರಿಂದು ಕಾಮಗಾರಿಯನ್ನು ಮರು ಆರಂ ಭಿಸಲು ಉದ್ದೇಶಿಸಲಾಗಿದ್ದರೂ ಮಳೆಯ ಕಾರಣದಿಂದಾಗಿ ಕೆಲವು ದಿನಗಳ ಕಾಲ ಮುಂದೂಡಲಾಗಿದೆ. ಗುತ್ತಿಗೆದಾರರು ಕಾಮಗಾರಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಮನುಷ್ಯರನ್ನಾಗಿಸುವಲ್ಲಿ ಪ್ರಸ್ತುತ ಶಿಕ್ಷಣ ವಿಫಲ: ಆರಗ ಜ್ಞಾನೇಂದ್ರ
ಕೋವಿಡ್ ಸಂಕಷ್ಟ ಬಂದ ಬಳಿಕ ಅನೇಕ ಸಮಸ್ಯೆಗಳು ಎದುರಾದರೂ ಅದನ್ನೆಲ್ಲ ಮೆಟ್ಟಿ ನಿಂತು ನೂರು ಕೋಟಿ ಲಸಿಕೆ ಉಚಿತವಾಗಿ ನೀಡುವ ಮೂಲಕ ಭಾರತ ವಿಶ್ವಮಟ್ಟದ ಸಾಧನೆ ಮಾಡಿದೆ. ಕೋವಿಡ್ ನಿಯಂತ್ರಣಕ್ಕಾಗಿ ಅನೇಕ ಉಪ ಕ್ರಮಗಳನ್ನು ಜಾರಿಗೊಳಿಸಿ ಜನರ ಪ್ರಾಣ ಉಳಿಸಿದೆ. ಆರ್ಥಿಕ ಸಂಕಷ್ಟವನ್ನು ಅರ್ಥ ಮಾಡಿಕೊಂಡಿರುವ ಜನರು ಬೆಲೆ ಏರಿಕೆಯ ಸಮಸ್ಯೆಯನ್ನು ಒಪ್ಪಿ ಕೊಂಡಿದ್ದಾರೆ ಎಂದರು.
ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮತ್ತಿತರರು ಉಪಸ್ಥಿತರಿದ್ದರು.
ಹಳದಿ ಎಲೆ ರೋಗ: ನಿವಾರಣೆಗೆ ಕ್ರಮ
ಅಡಿಕೆ ತೋಟಕ್ಕೆ ಬಾಧಿಸುತ್ತಿರುವ ಹಳದಿ ಎಲೆ ರೋಗ ಮತ್ತು ಎಲೆಚುಕ್ಕಿ ರೋಗದ ಬಗ್ಗೆ ಸರಕಾರದ ಗಮನ ಸೆಳೆದಿದ್ದು ಈ ರೋಗದ ನಿವಾರಣೋಪಾಯ ಕಂಡುಕೊಳ್ಳಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ನಳಿನ್ ಹೇಳಿದರು.