ಶಿಕ್ಷಕರ ಹೊಸತನದ ಅನ್ವೇಷಣೆಯಿಂದ ಶಾಲೆ ಮಾದರಿ
Team Udayavani, Mar 9, 2019, 6:40 AM IST
ಪುತ್ತೂರು : ಚೌಕಟ್ಟು ಮೀರಿ ಹೊಸತನ ತಂದರೆ ಮಾತ್ರ ಸರಕಾರಿ ಶಾಲೆಗಳನ್ನು ಗುರುತಿಸುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಶಿಕ್ಷಕರು ಹೊಸತನಕ್ಕೆ ತೆರೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಹಾರಾಡಿ ಸರಕಾರಿ ಮಾದರಿ ಉನ್ನತ ಹಿ.ಪ್ರಾ. ಶಾಲೆಯ ಡಾ| ಶಿವರಾಮ ಕಾರಂತ ಸಾಹಿತ್ಯ ವೇದಿಕೆಯಲ್ಲಿ ಮಾ. 8ರಂದು ನಡೆದ 3ನೇ ಮಕ್ಕಳ ಕನ್ನಡ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚೌಕಟ್ಟಿನೊಳಗೆ ಶಾಲೆಗಳು ಮುಂದುವರಿದರೆ ಹೊಸತನದ ಶಿಕ್ಷಣ ಪಡೆಯಲು ಕಷ್ಟ. ಆಧುನಿಕ ಪ್ರಪಂಚ ವೇಗವಾಗಿ ಸಾಗುತ್ತಿದೆ. ಇದೇ ಸಂದರ್ಭ ಸಾಹಿತ್ಯ, ಕಲೆಯ ವಿಚಾರಗಳು ದೂರವಾಗುತ್ತಿದ್ದು, ಸಂಬಂಧಗಳೂ ದೂರ ಆಗುತ್ತಿವೆ. ಭಾಷೆ, ಸಾಹಿತ್ಯ, ಕಲೆ ಮೂಲಕ ಮಾತ್ರ ಸುಖಿ ಸಮಾಜ ಕಟ್ಟಲು ಸಾಧ್ಯ. ಆದ್ದರಿಂದ ಶಿಕ್ಷಕರು ಇದರ ಬಗ್ಗೆಯೂ ಚಿಂತನೆ ನಡೆಸಬೇಕು ಎಂದರು.
ಶಿವರಾಮ ಕಾರಂತರಂತಹ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಜರಾಮರ. ಇಂತಹ ಕೊಡುಗೆಯನ್ನು ನಾವು ನೀಡಲು ಸಾಧ್ಯವೇ ಎಂದು ಆಲೋಚಿಸಬೇಕು. ಶಾಶ್ವತ ಕೊಡುಗೆಗಳತ್ತ ಗಮನ ಹರಿಸಬೇಕು ಎಂದರು.
ಅನುಭವ ಜನ್ಯ ಕಲಿಕೆ ಮುಖ್ಯ
ಶಿಕ್ಷಕ, ಲೇಖಕ ಸುಂದರ ಕೇನಾಜೆ ಮಾತನಾಡಿ, ಕಲಿಕೆಯಲ್ಲಿ ಎರಡು ವಿಧ. ಅವು ಮಾಹಿತಿ ಜನ್ಯ, ಅನುಭವ ಜನ್ಯ. ಮಾಹಿತಿ ಜನ್ಯ ಕಲಿಕೆಯಿಂದ ಮಾಹಿತಿಯ ಹೊರೆ ಮಾತ್ರ ಬೆಳೆಯುತ್ತಾ ಸಾಗುತ್ತದೆ. ಇಂದಿನ ಸಮಾಜದಲ್ಲಿ ಮಾಹಿತಿ ಜನ್ಯ ಕಲಿಕೆ ಮಾತ್ರ ಕಾಣಸಿಗುತ್ತದೆ. ಪರಿಣಾಮ, ಹೊರ ಪ್ರಪಂಚದ ಅದ್ದೂರಿತನಕ್ಕೆ ಮಾತ್ರ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಇದರ ಬದಲು ಮಕ್ಕಳನ್ನು ಅನುಭವ ಜನ್ಯ ಕಲಿಕೆಯತ್ತ ಕೊಂಡೊಯ್ಯಬೇಕಾದ ಅಗತ್ಯವಿದೆ. ಇದರಿಂದ ಅಂತಃಶಕ್ತಿ ಬೆಳವಣಿಗೆಯಾಗುತ್ತದೆ. ಆಗ ಮಾತ್ರ ಒಳಗಿನ ಅದ್ಧೂರಿತನ, ವೈಭವೀಕರಣಕ್ಕೆ ಒತ್ತು ನೀಡಲು ಸಾಧ್ಯ ಎಂದರು.
ಪ್ರಕೃತಿ ಬಗ್ಗೆ ಕಾಳಜಿ ವ್ಯಕ್ತವಾಗಲಿ
ಆಧುನಿಕ ಭರಾಟೆಯಲ್ಲಿ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಸಾಹಿತ್ಯ ಸಮ್ಮೇಳನಗಳು, ಚರ್ಚೆಗಳು ಓದು, ಬರಹದ ಜತೆಗೆ ಪ್ರಕೃತಿ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಅಗತ್ಯವೂ ಇದೆ. ಇಂತಹ ಮನೋಧರ್ಮ ಬೆಳೆಯಲು ಸಾಹಿತ್ಯ ಸಂಘಟನೆಗಳಿಂದ ಮಾತ್ರ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಭ್ರಮದ ಅಧ್ಯಕ್ಷ, ಕಿರಿಯ ಲೇಖಕ ದಿವಿತ್ ರೈ ಮಾತನಾಡಿ, ಓದುವಿಕೆ ವಿಸ್ತರಿಸಿಕೊಂಡಾಗ ಕ್ರಿಯಾಶೀಲತೆಯ ಲೋಕ ತೆರೆಯುತ್ತದೆ. ಇದಕ್ಕೆ ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮ ಸ್ಫೂರ್ತಿ ಎಂದರು. ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ನಗರಸಭೆ ಸದಸ್ಯೆ ಪ್ರೇಮಲತಾ ಜಿ., ಮುಖ್ಯಶಿಕ್ಷಕ ಮುದರ ಎಸ್., ಹಾರಾಡಿ ಕ್ಲಸ್ಟರ್ ಸಿಆರ್ಪಿ ನಾರಾಯಣ ಪುಣಚ್ಚ, ಎಸ್ಡಿಎಂಸಿ ಅಧ್ಯಕ್ಷೆ ಪ್ರತಿಮಾ ಉಪಸ್ಥಿತ ರಿದ್ದರು. ಸಹಶಿಕ್ಷಕ ಪ್ರಶಾಂತ್ ಅನಂತಾಡಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ವಿದ್ಯಾರ್ಥಿ ಪ್ರಜ್ವಲ್ ಲೇಖಕರ ಪರಿಚಯ ಮಾಡಿದರು. ಸಾಹಿತ್ಯ ವೇದಿಕೆಯ ಪ್ರತೀಕ್ಷಾ ಎಂ.ಬಿ. ನಿರೂಪಿಸಿದರು.
ಬಳಿಕ ನಾರಾಯಣ ರೈ ಕುಕ್ಕುವಳ್ಳಿ ನೇತೃತ್ವದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಮಧ್ಯಾಹ್ನ ಇಂಗ್ಲೀಷ್ ಕಾವ್ಯ ನಮನ ಗೋಷ್ಠಿ ವಿವೇಕಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ಡಾ| ಸ್ಮಿತಾ ಪಿ.ಜಿ. ಅಧ್ಯಕ್ಷತೆ ಯಲ್ಲಿ ನಡೆಯಿತು. ವಿದ್ಯಾರ್ಥಿ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಐ.ಕೆ. ಬೊಳುವಾರು ವಹಿಸಿದ್ದರು.
‘ಹಾರ’ ಲೋಕಾರ್ಪಣೆ
ಶಾಲಾ ಸಂಚಿಕೆ ‘ಹಾರ’ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್., ಮಕ್ಕಳ ಅಭಿರುಚಿಗೆ ವೇದಿಕೆ ಒದಗಿಸುವ ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮದಿಂದ ಪಠ್ಯೇತರ ಚಟುವಟಿಕೆಗಳ ಬೆಳವಣಿಗೆಗೆ ಪೂರಕ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!