ಬಿರುಗಾಳಿ “ರುದ್ರನರ್ತನ’ಕ್ಕೆ “ಮನೆ-ಕೃಷಿ’ ಹಾನಿ
Team Udayavani, May 5, 2020, 5:36 AM IST
ಪುತ್ತೂರು: ರವಿವಾರ ಸಂಜೆ ಬೀಸಿದ ಭಾರೀ ಗಾಳಿ, ಗುಡುಗು ಸಹಿತ ಮಳೆಗೆ ತಾಲೂಕಿನ ವಿವಿಧ ಭಾಗಗಳಲ್ಲಿ ಮನೆ ಹಾಗೂ ಕೃಷಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಅಡಿಕೆ, ತೆಂಗು, ಬಾಳೆ, ಕೊಕ್ಕೊ, ತರಕಾರಿಸಹಿತ ವಿವಿಧ ಕೃಷಿಗೆ ಹಾನಿಯಾಗಿದೆ. ಪುತ್ತೂರು ತಾಲೂಕಿನ ಮುಂಡೂರು ಮತ್ತು ಹಿರೇಬಂಡಾಡಿ ಗ್ರಾಮಗಳಲ್ಲಿ 2 ಮನೆಗಳಿಗೆ ಹಾನಿಯಾಗಿದೆ.
ಬಜತ್ತೂರಿನಲ್ಲಿ 1 ಮನೆಗೆ ಹಾನಿಯಾಗಿದೆ.ಕಡಬ ತಾಲೂಕಿನ ಆತೂರು ಭಾಗದಲ್ಲಿ ಸುಮಾರು 15ಕ್ಕೂ ಮನೆಗಳ ಹೆಂಚು ಮತ್ತು ಸಿಮೆಂಟ್ ಶೀಟ್ ಹಾರಿ ಹೋಗಿ ವಾಸ್ತವ್ಯಕ್ಕೆ ತೊಂದರೆಯಾಯಿತು. ಕೊಯಿಲ ಭಾಗದಲ್ಲಿ ಹಲವು ಕೃಷಿಗೆ ಹಾನಿಯಾಗಿದೆ.
ಮರಗಳು ಧರಾಶಾಯಿ
ತಾಲೂಕಿನ ವಿವಿಧ ಭಾಗದಲ್ಲಿ ಬೃಹತ್ ಮರಗಳು ಧರಾಶಾಯಿಯಾಗಿವೆ. ಬುಡ ಸಮೇತ ಉರುಳಿ ಬಿದ್ದ ಕಾರಣ ಕೃಷಿಕರ ಅಡಿಕೆ ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ನಗರದ ಮುಕ್ರಂಪಾಡಿ ಮತ್ತು ಪರ್ಲಡ್ಕದಲ್ಲಿ ರಸ್ತೆಗೆ ಮರಬಿದ್ದು ಸಂಚಾರಕ್ಕೆ ತೊಂದರೆಯಾಯಿತು.
ಮುಂಡೂರಿನ ಮುಕ್ವೆಯಲ್ಲಿ ಹರಿಣಾಕ್ಷಿ ಅವರ ಮನೆಗೆ ಮರ ಬಿದ್ದಿದೆ. ಹಿರೇಬಂಡಾಡಿ ಶರೀಫ್ ಅವರ ಮನೆಗೆ ಬಿರುಗಾಳಿಯಿಂದ ಹಾನಿ ಉಂಟಾಗಿದೆ. ಮೆಸ್ಕಾಂಗೆ 15 ಲಕ್ಷ ರೂ. ನಷ್ಟ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿದು ಸೋಮವಾರ ಬೆಳಗ್ಗಿನವರೆಗೂ ವಿದ್ಯುತ್ ಇರಲಿಲ್ಲ. ಗಾಳಿಗೆ ಮೆಸ್ಕಾಂ ಪುತ್ತೂರು ಉಪವಿಭಾಗದ ಪುತ್ತೂರು, ಸುಳ್ಯ ಭಾಗದಲ್ಲಿ ಸುಮಾರು ಹತ್ತಾರು ಕಂಬಗಳು ಮುರಿದುಬಿದ್ದಿವೆ. ಜಾಲ್ಸೂರು ಭಾಗ 60 ಕಂಬ, ಉಪ್ಪಿನಂಗಡಿ 10 ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ 10 ಕಂಬ ಮುರಿದುಬಿದ್ದಿವೆ. ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಎಇ ನರಸಿಂಹ ತಿಳಿಸಿದ್ದಾರೆ.