ಪುತ್ತೂರು ಹನಿಟ್ರ್ಯಾಪ್ ಪ್ರಕರಣ: 30 ಲಕ್ಷ ಕಳೆದುಕೊಂಡ ಯುವಕ; ಯುವತಿಯ ಬಂಧನ, 6 ಮಂದಿ ಪರಾರಿ
Team Udayavani, Jul 4, 2021, 8:37 AM IST
ಪುತ್ತೂರು: ಹನಿಟ್ರ್ಯಾಪ್ಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಈ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25ವ.)ಎಂಬವರು ಹನಿಟ್ರ್ಯಾಪ್ಗೆ ಬಲಿಯಾಗಿ ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದವರು.
ಘಟನೆ ಎ.12ಕ್ಕೆ ನಡೆದಿದ್ದು ಇದೀಗ ಪೊಲೀಸ್ ಮೇಲಾಧಿಕಾರಿಗಳ ಸೂಚನೆಯಂತೆ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್ ಮೋನು, ನಾಸಿರ್ ಮತ್ತು ಕಾರ್ಕಳದವಳೆಂದು ಪರಿಚಯಿಸಿಕೊಂಡಿದ್ದ ತನೀಶಾ ಎಂಬವರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಡಿವೈಎಸ್ ಪಿ ತನಿಖೆ, ಯುವತಿ ಬಂಧನ:
ತನಿಖೆ ಕೈಗೆತ್ತಿಗೊಂಡ ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದ ಪೊಲೀಸರು ಪ್ರಕರಣದ ಆರೋಪಿಗಳ ಪೈಕಿ ತನೀಶಾ ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ