ಪುತ್ತೂರು:ಮಾಸ್ಕ್ ಹಾಕದ ವಿಚಾರ- ಖಾಸಗಿ ಮಳಿಗೆಯ ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವೆ ಹೊಡೆದಾಟ
Team Udayavani, May 27, 2020, 12:56 PM IST
ಪುತ್ತೂರು: ಮಾಸ್ಕ್ ಹಾಕದ ವಿಚಾರದಲ್ಲಿ ಖಾಸಗಿ ಮಳಿಗೆಯ ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವೆ ಹೊಡೆದಾಟ ನಡೆದಿರುವ ಘಟನೆ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.
ಪುತ್ತೂರಿನಲ್ಲಿರುವ ಖಾಸಗಿ ಮಳಿಗೆಯ ಮುಂಭಾಗದಲ್ಲಿ ಖರೀದಿಗೆ ಆಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ಹಾಕದೇ ಸಾರತಿ ಸಾಲಿನಲ್ಲಿ ನಿಂತಿದ್ದ. ಕೋವಿಡ್ ವೈರಸ್ ಸೋಂಕು ತಡೆಗಟ್ಟಲು ಹಾಗೂ ರಕ್ಷಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಆದರೆ ಮಾಸ್ಕ್ ಧರಿಸದ ಗ್ರಾಹನಿಗೆ ಮಳಿಗೆಯ ಸಿಬ್ಬಂದಿಗಳು ಖರೀದಿಗೆ ಪ್ರವೇಶ ನಿರಾಕರಿಸಿದರು.
ಇದರಿಂದ ಆಕ್ರೋಶಗೊಂಡ ಗ್ರಾಹಕ ತನ್ನ ಸ್ನೇಹಿತರ ಜೊತೆ ಸೇರಿ ಖಾಸಗಿ ಮಳಿಗೆಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು, ಎರಡು ತಂಡದ ಮಧ್ಯೆ ಮಾರಾಮಾರಿ ನಡೆದಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.