ಕೊಕ್ಕಡ: ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ; ಒಂಬತ್ತು ದುಷ್ಕರ್ಮಿಗಳಿಂದ ಕೃತ್ಯ
Team Udayavani, Dec 21, 2020, 7:17 AM IST
ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆಯ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡವು ಸೋಮವಾರ ಬೆಳಗಿನ ಜಾವ ನುಗ್ಗಿ ಮನೆಯ ಯಜಮಾನ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ನಗ, ನಗದು ದೋಚಿದ ಘಟನೆ ವರದಿಯಾಗಿದೆ.
ಒಂಭತ್ತು ಮಂದಿ ದರೋಡೆಕೋರರ ತಂಡ ಮನೆಯವರನ್ನು ಸ್ಥಳದಲ್ಲೇ ಕೂಡಿ ಹಾಕಿ ಹಲ್ಲೆ ನಡೆಸಿ ತುಕ್ರಪ್ಪ ಶೆಟ್ಟಿ ಯವರ ಪತ್ನಿಗೆ ಕತ್ತಿಯಿಂದ ಇರಿದಿದ್ದು ತೀವ್ರ ಗಾಯಗಳಾಗಿ ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮನೆಯಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಇದ್ದ ಸಂದರ್ಭದಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಲಾಗಿದೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಡಕಾಯಿತರ ತಂಡ ಬೆಳಗ್ಗಿನ ಜಾವ ಪರಾರಿಯಾಗಿದೆ.
ಇದನ್ನೂ ಓದಿ:ಉಜಿರೆಯ ಬಾಲಕನ ಅಪಹರಣ ಪ್ರಕರಣ: ಅಪಹರಣಕಾರರು 10 ದಿನ ಪೊಲೀಸ್ ಕಸ್ಟಡಿಗೆ
ಡಕಾಯಿತರು ತೆರಳುತ್ತಲೇ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಧಾವಿಸಿದ್ದಾರೆ.
ಸ್ಥಳೀಯವಾಗಿ ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅಧ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಗೆ ಈ ದರೋಡೆಕೋರರು ನುಗ್ಗಿದ ವಿಷಯ ತಿಳಿಯುತ್ತಲೆ ನೂರಾರು ಮಂದಿ ಆಗಮಿಸಿದ್ದಾರೆ.
ದರೋಡೆಕೋರರ ತಂಡದಲ್ಲಿ ಮನೆಯೊಳಗೆ ನುಗ್ಗಿದವರು ಅಂದಾಜು ಒಂಭತ್ತು ಮಂದಿಯಷ್ಟಿದ್ದು ದರೋಡೆ ನಡೆಸಿ ಪರಾರಿಯಾಗಬಹುದಾದ ಎಲ್ಲಾ ರಸ್ತೆಗಳನ್ನ ನಾಕಾಬಂದಿ ಹಾಕಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ದ.ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು.