ಪುತ್ತೂರು : ಅಕ್ರಮ – ಸಕ್ರಮದಲ್ಲಿ ಕುಮ್ಕಿ ಮಂಜೂರಾತಿಗೆ ಪ್ರಸ್ತಾವ
Team Udayavani, Sep 18, 2022, 9:29 AM IST
ಪುತ್ತೂರು : ಅಕ್ರಮ-ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಹಲವು ಕುಮ್ಕಿ ಜಮೀನು ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಅಕ್ರಮ-ಸಕ್ರಮ ನಮೂನೆ-57ರಲ್ಲಿ ಕುಮ್ಕಿ ಜಮೀನು ಮಂಜೂರಾತಿಗೆ ಅವಕಾಶ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕಬಕ ಗ್ರಾಮದ ಮುರ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ “ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರ ಹತ್ತಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಆದರ್ಶ ಗ್ರಾ.ಪಂ. ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರೈತ ವಿದ್ಯಾನಿಧಿ ಯೋಜನೆಯಡಿ 6 ಸಾವಿರ ರೂ.ನಿಂದ 11 ಸಾವಿರ ರೂ. ತನಕ ನೆರವು ನೀಡಲಾಗಿದ್ದು ದ.ಕ. ಜಿಲ್ಲೆಯಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಎಚ್.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ನಿಸರ್ಗಪ್ರಿಯ, ಭೂಮಾಪನ ಇಲಾಖೆಯ ಉಪ ನಿರ್ದೇಶಕ ನಿರಂಜನ್, ಆಹಾರ ಇಲಾಖೆಯ ಅಧಿಕಾರಿ ಮಾಣಿಕ್ಯ, ಎಸಿಎಫ್ ಕಾರ್ಯಪ್ಪ, ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ, ಜಂಟಿ ನಿರ್ದೇಶಕಿ ಸೀತಾ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಕಬಕ ಗ್ರಾ.ಪಂ. ಉಪಾಧ್ಯಕ್ಷ ರುಕ್ಮಯ ಗೌಡ ಮೊದಲಾದವರಿದ್ದರು.
ಇದನ್ನೂ ಓದಿ : ರಾಣಿ ಎಲಿಜಬೆತ್ ಅಂತ್ಯಕ್ರಿಯೆ : ಬ್ರಿಟನ್ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
60 ಅಹವಾಲು ಸ್ವೀಕಾರ
ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ರಸ್ತೆ, ವಸತಿ, ನಿವೇಶನ, ಮೆಸ್ಕಾಂ, ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಒಟ್ಟು 60 ಅರ್ಜಿ ಗಳನ್ನು ಸ್ವೀಕರಿಸಿದರು.
ಕಾಲನಿಗೆ ಭೇಟಿ
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣ ಮೂರ್ತಿ ಹಾಗೂ ಅಧಿಕಾರಿಗಳು ಶೇವಿರೆ ಎಸ್ಸಿ-ಎಸ್ಟಿ ಕಾಲನಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಮೂಲೆಕಾಳು ಪೂವಮ್ಮ ಅವರ ಮನೆಗೆ ಭೇಟಿ ನೀಡಿ ಎಂಡೋಸಲ್ಫಾನ್ ಪೀಡಿತೆ ಕೃತಿಕಾ ಅವರೊಂದಿಗೆ ಮಾತುಕತೆ ನಡೆಸಿದರು.