ಶಾಲಾ, ಕಾಲೇಜು ಬಂದ್: ಮನೆಗೆ ಹೊರಟ ವಿದ್ಯಾರ್ಥಿಗಳು
Team Udayavani, Apr 23, 2021, 3:00 AM IST
ಬೆಳ್ತಂಗಡಿ: ಕೋವಿಡ್ ಮುನ್ನೆಚ್ಚರಿಕೆ ಕಾರಣ ಶಾಲಾ- ಕಾಲೇಜುಗಳಿಗೆ ರಜೆ ನೀಡಿದ್ದು, ಇತ್ತ ಶುಕ್ರವಾರದಿಂದ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಹಾಸ್ಟೆಲ್, ವಸತಿಗೃಹದಲ್ಲಿದ್ದ ಹೊರ ಊರಿನ ವಿದ್ಯಾರ್ಥಿಗಳು ಗುರುವಾರದಿಂದಲೇ ಊರಿನತ್ತ ಹೆಜ್ಜೆ ಹಾಕಿದ್ದಾರೆ.
ಬುಧವಾರದಿಂದಲೇ ಶಾಲೆ- ಕಾಲೇಜು ಗಳನ್ನು ಬಂದ್ ಮಾಡಲಾಗಿದ್ದರೂ ಕೆಎಸ್ಆರ್ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ ಸಂಚಾರ ಇರಲಿಲ್ಲ. ಬುಧವಾರ ಮಧ್ಯಾಹ್ನದ ಬಳಿಕ ಬಸ್ ಮುಷ್ಕರ ಕೊನೆಗೊಂಡಿತ್ತು. ಗುರುವಾರ ಬೆಳಗ್ಗಿನಿಂದ ಸರಿಯಾದ ಸಂಚಾರ ಆರಂಭವಾಗಿ ಮೂಡಿಗೆರೆ, ಚಿಕ್ಕಮಗಳೂರು ಕಡೆಗೆ ತೆರಳುವ ವಿದ್ಯಾರ್ಥಿಗಳು ಉಜಿರೆ, ಬೆಳ್ತಂಗಡಿ, ಧರ್ಮಸ್ಥಳ ಬಸ್ ನಿಲ್ದಾಣಗಳಲ್ಲಿ ಕಂಡುಬಂದರು.
ಲೋಕಲ್ ಬಸ್ ಆರಂಭ :
ಮುಷ್ಕರ ಕೊನೆಗೊಂಡ ಹಿನ್ನೆಲೆಯಲ್ಲಿ ದಿಡುಪೆ, ಚಾರ್ಮಾಡಿ, ಗಂಡಿಬಾಗಿಲು ದೇವಗಿರಿ, ನೆರಿಯ ಮೊದಲಾದ ಗ್ರಾಮೀಣ ಭಾಗಗಳಿಗೆ ಗುರುವಾರದಿಂದ ಪ್ರಯಾಣಿಕರ ಸಂಖ್ಯೆ ಆಧಾರದಲ್ಲಿ ಬಸ್ ಓಡಾಟ ಆರಂಭಗೊಂಡಿದೆ.
ರವಿವಾರ ಹೆಚ್ಚಿನ ಕಡೆಗಳಲ್ಲಿ ಮದುವೆ, ಗೃಹಪ್ರವೇಶ ಸಮಾರಂಭ ನಿಗದಿಯಾಗಿದೆ. ಅಂದು ಕರ್ಫ್ಯೂ ಜಾರಿ ಆಗಿರುವುದರಿಂದ ಸಮಾರಂಭಗಳಿಗೆ ತೆರಳಲು ಪಾಸ್ ಪಡೆಯಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ.
ನೈಟ್ ಕರ್ಫ್ಯೂ ಇರುವುದರಿಂದ ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆ ವೃತ್ತಕ್ಕೆ ಸಂಬಂಧಿಸಿ ತಾಲೂಕಿನ ನಾಲ್ಕು ಆಯಕಟ್ಟು ಪ್ರದೇಶಗಳಲ್ಲಿ ತಪಾಸಣೆಗೆ ಕ್ರಮ ವಹಿಸಲಾಗಿದೆ. ರಾತ್ರಿ ಸಂಚಾರ ನಡೆಸದಂತೆ ಪೊಲೀಸರು ವಿನಂತಿಸಿದ್ದಾರೆ.
ಅಪರಾಹ್ನ 2ರ ವರೆಗೆ ಬ್ಯಾಂಕ್ ವ್ಯವಹಾರ :
ಉಜಿರೆ, ಮುಂಡಾಜೆ, ಬಂಗಾಡಿ, ಕಕ್ಕಿಂಜೆ ಮೊದಲಾದ ಕಡೆಗಳಲ್ಲಿ ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕ್ಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ತನಕ ಮಾತ್ರ ವ್ಯವಹಾರ ನಡೆಸಿದವು. ಸಿಬಂದಿ ಸಂಜೆ ತನಕ ಶಾಖೆಗಳಲ್ಲಿದ್ದರು. ಸಹಕಾರ ಸಂಘಗಳಲ್ಲಿ ಯಥಾಪ್ರಕಾರ ಸಂಜೆ ತನಕವು ವ್ಯವಹಾರ ಮುಂದುವರಿಯಿತು. ಉಜಿರೆ, ಸೋಮಂತಡ್ಕ, ಕಕ್ಕಿಂಜೆ ಮೊದಲಾದ ಕಡೆಗಳಲ್ಲಿ ವೀಕೆಂಡ್ ಕರ್ಫ್ಯೂ ಕಾರಣ ಅಗತ್ಯ ಸಾಮಗ್ರಿ ಖರೀದಿಗೆ ಹೆಚ್ಚಿನ ಜನಸಂದಣಿ ಮಧ್ಯಾಹ್ನದ ತನಕ ಕಂಡುಬಂತು.