ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ; ಕಟ್ಟಡಗಳ ತೆರವು
ಕಾಶಿಕಟ್ಟೆ ರಥಬೀದಿ ರಸ್ತೆ ಸಂಚಾರ ಸ್ಥಗಿತ; ಪರ್ಯಾಯ ವ್ಯವಸ್ಥೆ; ಇಂಜಾಡಿಯಲ್ಲೂ ಕೆಲಸ
Team Udayavani, Mar 14, 2020, 4:32 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ವತಿಯಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೆಡೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ.
ಕುಮಾರಧಾರಾ, ಕಾಶಿಕಟ್ಟೆ, ಸವಾರಿ ಮಂಟಪ, ಇಂಜಾಡಿ, ಆಂಜನೇಯ ದೇವಾಲಯ ರಸ್ತೆ, ರಥಬೀದಿಯ ಎದರು ಭಾಗದ ಮತ್ತಿತರ ಕಡೆ ರಸ್ತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಕಾಶಿಕಟ್ಟೆ ರಥಬೀದಿ ರಸ್ತೆ ಕಾಮಗಾರಿ ನಿರ್ವಹಿಸುವ ಸಲುವಾಗಿ ಕಾಶಿಕಟ್ಟೆ ರಥಬೀದಿ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಕಾಶಿಕಟ್ಟೆಯಿಂದ ಆಂಜನೇಯ ದೇವಸ್ಥಾನ ರಸ್ತೆಯಾಗಿ ಸವಾರಿ ಮಂಟಪ ಬಳಿ ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಳ್ಯದಿಂದ ತೆರಳುವವರು ಕೂಡಾ ಇದೇ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.
ಕಟ್ಟಡಗಳ ತೆರವು
ರಸ್ತೆ ವಿಸ್ತರಿಸಲು ರಸ್ತೆ ಬದಿಯ ಪ್ರಮುಖ ಕಟ್ಟಡಗಳ ತೆರವು ಕಾರ್ಯಾಚರಣೆ ಕೂಡ ಭರದಿಂದ ಸಾಗಿದೆ. ಮುಖ್ಯವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ರಥಬೀದಿಯ ಎದುರು ಭಾಗದಲ್ಲಿರುವ ಕಟ್ಟಡದ ಹಲವು ಅಂಗಡಿಗಳು, ಡಿಸಿಸಿ ಬ್ಯಾಂಕಿನ ಸುಬ್ರಹ್ಮಣ್ಯ ಶಾಖೆ, ಮೆಡಿಕಲ್ ಶಾಪ್ ಮತ್ತಿತರ ಅಂಗಡಿಗಳು ಕಾರ್ಯಾಚರಿಸುತ್ತಿದ್ದವು. ಈ ಕಟ್ಟಡದ ತೆರವಿನ ಹಿನ್ನೆಲೆಯಲ್ಲಿ ಇಲ್ಲಿದ್ದ ಅಂಗಡಿಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಅಲ್ಲದೇ ಇದೇ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿಯೂ ನಡೆಯುತ್ತಿದೆ.
ಇಂಜಾಡಿಯಲ್ಲೂ ಕೆಲಸ
ಇಂಜಾಡಿ ಭಾಗದಲ್ಲಿ ರಸ್ತೆ ಕೆಲಸಗಳು ಭರದಿಂದ ಸಾಗಿದೆ. ವರ್ಷದ ಹಿಂದೆ ಶಿಫ್ಟ್ ಮಾಡಿದ ವಿದ್ಯುತ್ ಕಂಬಗಳನ್ನು ಮತ್ತೆ ತೆರವುಗೊಳಿಸಿ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಗುತ್ತಿದೆ.
ಧೂಳುಮಯ
ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಮಣ್ಣು ಸಾಗಾಟ ವಾಹನಗಳ ಸಂಚಾರ, ಇತರ ವಾಹನಗಳ ಸಂಚಾರದಿಂದ ನಗರದ ರಸ್ತೆಗಳು ಪೂರ್ತಿ ಧೂಳುಮಯಗೊಂದಿದ್ದು, ಪರ್ಯಾಯವಾಗಿ ನೀರು ಹಾಯಿಸಿ ಧೂಳನ್ನು ದೂರ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಕಾಮಗಾರಿ ಕೆಲಸಗಳು ಶೀಘ್ರಗತಿಯಲ್ಲಿ ನಡೆಯುತ್ತಿದೆ. ಧೂಳಿನ ಸಮಸ್ಯೆಗೆ ನೀರು ಹಾಯಿಸಿ, ಧೂಳು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬಂದ್ ಮಾಡಿದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಲೋಕೋಪಯೋಗಿ ಎಂಜಿನಿಯರ್ ಪ್ರತಿಕ್ರಿಯಿಸಿದ್ದಾರೆ.
ಜಾಗ ಅತಿಕ್ರಮಣ?
ಈಗ ನಡೆಯುತ್ತಿರುವ ರಸ್ತೆಯ ಇಕ್ಕೆಲಗಳ ಮಾರ್ಜಿನ್ನಲ್ಲಿ ಎರಡು ಮೀಟರ್ ಬಿಡಬೇಕೆಂಬ ನಿಯಮ ವಿದೆ. ಆದರೆ ಕೆಲವು ಕಡೆ ಈ ಜಾಗ ದಲ್ಲಿ ಅತಿಕ್ರಮಣ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಸುಬ್ರಹ್ಮಣ್ಯ ಗ್ರಾಮಸಭೆಯಲ್ಲೂ ಈ ಬಗ್ಗೆ ಆರೋಪ ಕೇಳಿ ಬಂದಿದೆ. ಅತಿಕ್ರಮಣವಾದಲ್ಲಿ ಕಟ್ಟಡ ತೆರವುಗೊಳಿಸಿ ಜಾಗ ವಶಪಡಿಸಿ ಕೊಳ್ಳ ಬೇಕು ಎನ್ನುವ ಆಗ್ರಹ ವ್ಯಕ್ತ ವಾಗಿದೆ.