ಬದುಕು ರೂಪಿಸುವ ಕೌಶಲ ತರಬೇತಿ: ಮುಂಡೋಡಿ
Team Udayavani, Aug 10, 2018, 3:43 PM IST
ಸುಬ್ರಹ್ಮಣ್ಯ : ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬಾರದು. ಕಲಿಕೆ ಹಂತದಲ್ಲೆ ಅನೇಕ ಹೊರಗಿನ ಜ್ಞಾನ ಅವಶ್ಯವಾಗಿದೆ. ಇವೆಲ್ಲವನ್ನೂ ತಿಳಿದುಕೊಳ್ಳಲು ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಕೆಎಸ್ಎಸ್ ಕಾಲೇಜಿನ ವಾಣಿಜ್ಯ ಮತ್ತು ಆಡಳಿತಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿ.ವಿ. ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಒಂದು ದಿನದ ಕೌಶಲಾಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಗಾರದಿಂದ ಸಮಾಜದಲ್ಲಿ ಹೇಗೆ ಸಮಸ್ಯೆ ಮಧ್ಯೆ ಸವಾಲನ್ನು ಎದುರಿಸಿ ನಡೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಕಂಡುಕೊಳ್ಳಬಹುದಾಗಿದೆ ಎಂದರು.
ಅವಕಾಶ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಆರ್. ಶೆಟ್ಟಿಗಾರ್ ಅವರು ಚೀನ ಅಥವಾ ಇತರ ಪಾಶ್ಚಾತ್ಯ ದೇಶಗಳ ಜನರು ಇಂದು ಭಾರತದತ್ತ ಮುಖ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿ ಸಮೂಹ ಚಿಂತಿಸಬೇಕಿದೆ. ಈ ದೃಷ್ಟಿಯಿಂದ ಔದ್ಯೋಗಿಕವಾಗಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕಾರ್ಯಕ್ಕೆ ಸಂಸ್ಥೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.
ಮಂಗಳೂರು ವಿ.ವಿ. ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ| ಬಾಲಕೃಷ್ಣ ಪೈ ಪ್ರಸ್ತಾವಿಸಿ, ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಲತಾ ಶೆಣೈ ಮತ್ತು ನೀತೂ ನಾರಾಯಣಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು. ಐಕ್ಯೂಎಸಿ ಸಂಯೋಜಕ ಪ್ರೊ| ಉದಯಕುಮಾರ್ ವಂದಿಸಿ, ಉಪನ್ಯಾಸಕಿ ಪ್ರೊ| ಪುಷ್ಪಾ ಡಿ. ದೋಣಿಮನೆ ಕಾರ್ಯಕ್ರಮ ನಿರೂಪಿಸಿದರು. ಅರ್ಪಿತಾ ಮತ್ತು ತಂಡ ಪ್ರಾರ್ಥನೆ ನಡೆಸಿಕೊಟ್ಟರು.