ಸುಬ್ರಹ್ಮಣ್ಯ: ಶಿವರಾತ್ರಿ ಪ್ರಯುಕ್ತ ಚಿಕ್ಕ ರಥೋತ್ಸವ
Team Udayavani, Mar 7, 2019, 9:13 AM IST
ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸುಬ್ರಹ್ಮಣ್ಯ ಸ್ವಾಮಿ ಮತ್ತು ಉಮಾಮಹೇಶ್ವರ ದೇವರ ಶಿವರಾತ್ರಿ ರಥೋತ್ಸವವು ಮಂಗಳವಾರ ಸಂಜೆ ನೆರವೇರಿತು.
ಒಂದೇ ಪಲ್ಲಕ್ಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರು ರಥಬೀದಿಗೆ ಬಂದು ರಥಾರೂಢರಾದರು. ದೇಗುಲದ ಅರ್ಚಕ ರಾಮಕೃಷ್ಣ ನೂರಿತ್ತಾಯರು ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ತಳಿರು ತೋರಣಗಳಿಂದ ಅಲಂಕೃತವಾದ ಚಿಕ್ಕರಥದಲ್ಲಿ ಶಿವರಾತ್ರಿ ಉತ್ಸವ ನೆರವೇರಿತು. ಅನಂತರ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು. ರಥೋತ್ಸವದ ಬಳಿಕ ದೇಗುಲದಲ್ಲಿ ಡೋಲೋತ್ಸವ ನೆರವೇರಿತು.
ದೇಗುಲದ ಇಒ ರವೀಂದ್ರ ಎಂ.ಎಚ್., ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಮಾಧವ ಡಿ., ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ದೇಗುಲದ ಪದ್ಮನಾಭ ಶೆಟ್ಟಿಗಾರ್ ಸಹಿತ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ರಾತ್ರಿ ಶಿವರಾತ್ರಿ ಪ್ರಯುಕ್ತ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರನಿಗೆ ಜೊತೆಯಾಗಿ ಉತ್ಸವ ನೆರವೇರಿತು. ರಾತ್ರಿ ಮಹಾಪೂಜೆಯ ಬಳಿಕ ಕುಕ್ಕೆಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರಿಗೆ ಜತೆಯಾಗಿ ಬಂಡಿ ರಥೋತ್ಸವ ನೆರವೇರಿತು. ಹೊರಾಂಗಣ ಉತ್ಸವದ ಬಳಿಕ ಶ್ರೀ ದೇಗುಲದ ಒಳಾಂಗಣದಲ್ಲಿ ವಸಂತಪೂಜೆ ನಡೆಯಿತು.