ಸುಳ್ಯ ತಾ.ಪಂ.: ಸದಸ್ಯರ ವ್ಯಾಪ್ತಿಗೆ 7.25 ಲಕ್ಷ ರೂ.
Team Udayavani, May 30, 2020, 5:52 AM IST
ಸುಳ್ಯ: 15 ನೇ ಹಣಕಾಸು ಆಯೋಗದ ಅನುದಾನದಲ್ಲಿ ತಾ.ಪಂ.ಗೆ 90.27 ಲಕ್ಷ ರೂ. ಅನುದಾನ ಇದ್ದು, ಪ್ರತಿ ತಾ.ಪಂ.ಸದಸ್ಯರ ವ್ಯಾಪ್ತಿಗೆ 7.25 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಣಾಧಿಕಾರಿ ಹೇಳಿದರು.
ತಾ.ಪಂ.ನ 15 ನೇ ಹಣಕಾಸಿನ ಕ್ರಿಯಾ ಯೋಜನೆಯ ಬಗ್ಗೆ ಮೇ 29 ರಂದು ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಶೇ. 90ರಷ್ಟು ಜನಸಂಖ್ಯೆ ಹಾಗೂ ಶೇ. 10ರಷ್ಟು ಭೌಗೋಳಿಕ ಆಧಾರದಲ್ಲಿ ಸರಕಾರ ಈ ಅನುದಾನ ನೀಡುತ್ತದೆ. ಈ ಬಾರಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆದಿದೆ. ನೀರಿನ ಮೂಲ ವೃದ್ಧಿ, ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಣೆ, ಪುನಶ್ಚೇತನ ಹೀಗೆ ಅನುದಾನ ವಿಂಗಡಣೆಗೆ ಅವಕಾಶವಿದೆ.
ತಾ.ಪಂ.ಅನುದಾನದ ಜತೆಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜ ನೆಯ ಅನುದಾನ ಬಳಸಿಕೊಂಡು ಹೆಚ್ಚಿನ ಕೆಲಸ ಮಾಡಲು ಅವಕಾಶ ಇದೆ ಎಂದರು.
ತಾ.ಪಂ. ಸದಸ್ಯರು ಮತ್ತು ಎಂಜಿನಿ ಯರ್ ಜತೆಯಾಗಿ ಕಾಮಗಾರಿ ಪಟ್ಟಿ ಅಂತಿಮಗೊಳಿಸುವುದು ಸೂಕ್ತ. ಏಕೆಂದರೆ ಒಂದು ಬಾರಿ ಅಪ್ಲೋಡ್ ಆದಲ್ಲಿ ಮತ್ತೆ ಆ ಕಾಮಗಾರಿ ಬದಲಾಯಿಸಲಾಗದು ಎಂದು ಪಂಚಾಯತ್ ರಾಜ್ ಎಂಜಿನಿಯರ್ ಮಾಹಿತಿ ನೀಡಿದರು.
ಕಳೆದ ಆರ್ಥಿಕ ವರ್ಷದಲ್ಲಿ ತಾ.ಪಂ.ನ ಎಲ್ಲ ಅನುದಾನ ಪೂರ್ಣ ಬಳಕೆ ಮಾಡುವಲ್ಲಿ ಕಾರಣ ಕರ್ತರಾದ ಎಂಜಿನಿ ಯರ್, ತಾ.ಪಂ.ಸಿಬಂದಿ, ಜನ ಪ್ರತಿನಿಧಿಗಳ ಕಾರ್ಯವನ್ನು ಶ್ಲಾಘಿಸಲಾಯಿತು.
ಕಡಬ ತಾಲೂಕಿನಲ್ಲಿ ನೂತನ ತಾ.ಪಂ. ರೂಪುಗೊಂಡಿದ್ದು, ಇದರ ವ್ಯಾಪ್ತಿಗೆ ಸೇರಿರುವ ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್.ರೈ, ಸದಸ್ಯ ಅಶೋಕ್ ನೆಕ್ರಾಜೆ ಅವರನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಅಭಿನಂದಿಸಿ ಬೀಳ್ಕೊಡಲು ನಿರ್ಧರಿಸಲಾಯಿತು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಹಾಗೂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ವಾರಂಟೈನ್ ವೇಳೆ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ
ಬೆಳ್ಳಾರೆ ದರ್ಖಾಸು ಮೂಲದ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಅವರು ಕ್ವಾರಂಟೈನ್ನಲ್ಲಿದ್ದ ಹಾಸ್ಟೆಲ್ನಲ್ಲಿ ನಿಯಮ ಪಾಲಿಸದ ಬಗ್ಗೆ ಸ್ಥಳೀಯರಿಂದ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯ ಅಶೋಕ್ ನೆಕ್ರಾಜೆ ಅವರು ವಿಷಯ ಪ್ರಸ್ತಾವಿಸಿ ಹಾಸ್ಟೆಲ್ಗೆ ಅಧಿಕಾರಿಗಳು ಅಲ್ಲದೇ ಅನೇಕರು ಭೇಟಿ ನೀಡಿರುವ ದೂರು ಇದೆ. ಈ ನಿರ್ಲಕ್ಷéದ ವಿರುದ್ಧ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದರು. ಸದಸ್ಯ ರಾಧಾಕೃಷ್ಣ ಬೆಳ್ಳೂರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಅಧ್ಯಕ್ಷರು ಪ್ರತಿಕ್ರಿಯಿಸಿ ವ್ಯಕ್ತಿಯ ವರ್ತನೆ ಬಗ್ಗೆ ಅನೇಕರು ಕರೆ ಮಾಡಿ ತಿಳಿಸಿದ್ದಾರೆ.
ಸೋಂಕು ಪಸರಿಸದಂತೆ ತಾ. ಆಡಳಿತಕ್ಕೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು. ಇಒ ಭವಾನಿಶಂಕರ ಮಾತನಾಡಿ, ಬಿಎಚ್ಓ ನೇತೃತ್ವದ ತಂಡ ಮೇ 29 ರಂದು ಪರಿಶೀಲನೆ ನಡೆಸುತ್ತಿದ್ದು, ಸೋಂಕಿತನ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ ಎಂದು ಉತ್ತರಿಸಿದರು.