ಸುಳ್ಯ: ನಗರ ಪಂಚಾಯತ್ ಮುಂಭಾಗ ಏಕಾಂಗಿ ಪ್ರತಿಭಟನೆ
Team Udayavani, Aug 8, 2018, 1:15 PM IST
ಸುಳ್ಯ : ರಚನ್ ಮಹಿಳಾ ಸ್ವ ಅಭಿವೃದ್ಧಿ ಅಸಹಾಯಕರ ಸೇವಾ ಸಂಘಕ್ಕೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಸಂಘದ ಅಧ್ಯಕ್ಷ ಮಂಜುನಾಥ ಕುಕ್ಕುಜೆ ನ.ಪಂ. ಪ್ರವೇಶ ದ್ವಾರದ ಮುಂಭಾಗ ಮಂಗಳವಾರ ಧರಣಿ ಆರಂಭಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಸುಳ್ಯದ ನಿರೀಕ್ಷಣಾ ಮಂದಿರದ ಬಳಿ 46 ಸೆಂಟ್ಸ್ ಸ್ಥಳವನ್ನು ಸಂಘಕ್ಕೆಂದು ಗುರುತಿಸಿ ನ.ಪಂ. ಗೆ ಕಡತ ನೀಡಲಾಗಿತ್ತು. ಆದರೆ ನ.ಪಂ. ಈ ತನಕ ಅದಕ್ಕೆ ಸ್ಪಂದಿಸಿಲ್ಲ. ಅಲ್ಲಿ ಖಾಲಿ ಸ್ಥಳ ಇಲ್ಲ ಎಂದು ಕಂದಾಯ ಇಲಾಖೆಗೆ ವರದಿ ನೀಡಿದೆ. ಇದರಿಂದ ಸಂಘಕ್ಕೆ ನಿವೇಶನ ಕಲ್ಪಿಸುವ, ನಿರಾಶ್ರಿತರಿಗೆ ಆಸರೆ ಆಗುವ ಪ್ರಯತ್ನಕ್ಕೆ ತಡೆ ಒಡ್ಡಿದೆ ಎಂದು ಮಂಜುನಾಥ ಆರೋಪಿಸಿದ್ದಾರೆ.
ನ.ಪಂ. ವರದಿ: ಅನ್ಯಾಯ
ತಹಶೀಲ್ದಾರ್ ನೇತೃತ್ವದ ಸಭೆಯಲ್ಲಿ ವಿವಿಧ ಬೇಡಿಕೆ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತರಲು ನಿರ್ಧರಿಸಿದ್ದರೂ ನ.ಪಂ.ನ ಈ ವರದಿಯಿಂದ ಅನ್ಯಾಯ ವಾಗಲಿದೆ. ಸ್ಪಂದನೆ ನೀಡುವ ತನಕ ಧರಣಿ ಮುಂದುವರಿಸುವುದಾಗಿ ‘ಉದಯವಾಣಿ’ಗೆ ಅವರು ತಿಳಿಸಿದ್ದಾರೆ.
ಮುಖ್ಯಾಧಿಕಾರಿ ಭೇಟಿ
ಪ್ರತಿಭಟನೆ ನಿರತ ಮಂಜುನಾಥ ಅವರ ಬಳಿ ಮುಖ್ಯಾಧಿಕಾರಿ ಚಂದ್ರಕುಮಾರ್ ಭೇಟಿ ನೀಡಿ ಅಹವಾಲು ಆಲಿಸಿದ್ದಾರೆ. ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಂಗಳವಾರ ಸಂಜೆ 6.30 ತನಕ ಮಂಜುನಾಥ ಅವರು ಪ್ರತಿಭಟನೆ ಮುಂದುವರಿಸಿದ್ದರು.