ಸುರೇಂದ್ರ ಬಂಟ್ವಾಳ್ ಹತ್ಯೆ: ಎನ್ ಕೌಂಟರ್ ಆತಂಕದಿಂದ ನ್ಯಾಯಾಧೀಶರಿಗೆ ಪತ್ರ?
Team Udayavani, Oct 30, 2020, 12:36 PM IST
ಬಂಟ್ವಾಳ: ಬಂಟ್ವಾಳ ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ವಿಚಾರಣೆ ಎದುರಿಸಬೇಕಿರುವ ಆರೋಪಿ ಎನ್ ಕೌಂಟರ್ ಆತಂಕದಿಂದ ಬಂಟ್ವಾಳ ನ್ಯಾಯಾಧೀಶರಿಗೆ ಬರೆದಿದ್ದಾನೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಬೆಂಗಳೂರು ಜೈಲಿನಲ್ಲಿರುವ ಆಕಾಶಭವನ ಶರಣ್ ಎಂಬಾತನ ವಿಚಾರಣೆಗಾಗಿ ಬಾಡಿ ವಾರಂಟ್ ಕೇಳಿದ್ದು, ಆದರೆ ಬೆಂಗಳೂರಿನಿಂದ ಬಂಟ್ವಾಳಕ್ಕೆ ತೆರಳುವ ವೇಳೆ ಪೊಲೀಸರು ತನ್ನನ್ನು ಎನ್ ಕೌಂಟರ್ ಮಾಡುವ ಆತಂಕವಿದ್ದು, ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಪತ್ರದಲ್ಲಿ ವಿವರಿಸಲಾಗಿದೆ.
ಆದರೆ ಈ ಪತ್ರದ ಕುರಿತು ನಿಖರ ಮಾಹಿತಿ ಇಲ್ಲದಾಗಿದ್ದು, ನಿಜವಾಗಿಯೂ ಇದನ್ನು ಯಾರು ಬರೆದಿದ್ದಾರೆ ಎಂಬ ವಿಚಾರ ಸ್ಪಷ್ಟಗೊಂಡಿಲ್ಲ.