ಪುತ್ತೂರು: ನಗರದಲ್ಲಿ ಸಂಚಾರದ ಸೂತ್ರ ತಪ್ಪಿದ ರಸ್ತೆ
Team Udayavani, Aug 27, 2021, 3:00 AM IST
ಪುತ್ತೂರು: ಇರುವ ಅರೆಬರೆ ದಾರಿಯನ್ನು ಸರಕಾರಿ ಕೆರೆಯೊಂದು ನುಂಗಿ ಬಿಡುವ ಹಾಗಿದೆ. ಹೀಗೆ ಸಂಚಾರದ ಸೂತ್ರ ತಪ್ಪಿದ ಸ್ಥಿತಿ ಇರುವುದು ನಗರಸಭೆಯ ಸೂತ್ರಬೆಟ್ಟುವಿನ ಸಂಪರ್ಕ ರಸ್ತೆಯಲ್ಲಿ.
ಒಂದೆಡೆ ಕಿರಿದಾದ ದಾರಿ, ಇನ್ನೊಂದೆಡೆ ಕೆಸರು ತುಂಬಿದ ಸ್ಥಿತಿಯಲ್ಲಿರುವ ಈ ರಸ್ತೆಯ ಬಗ್ಗೆ ಸ್ಥಳೀಯರು ನಗರಸಭೆ ಗಮನಕ್ಕೆ ತಂದಿದ್ದು ಕನಿಷ್ಠ ಪಕ್ಷ ದುರಸ್ತಿ ಮಾಡಿ ಸಂಚಾರದ ಸ್ಥಿತಿಗೆ ತರುವಂತೆ ಆಗ್ರಹಿಸಿದ್ದಾರೆ.
ಹೊತ್ತು ಸಾಗಬೇಕು:
ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿನ ಮನೆಗಳಿಗೆ ದಿನ ಬಳಕೆಯ ವಸ್ತುಗಳು, ಇತರ ಸಾಮಗ್ರಿಗಳನ್ನು ಅರ್ಧ ಕಿ.ಮೀ. ದೂರಕ್ಕೂ ಹೆಚ್ಚು ಹೊತ್ತು ಸಾಗುವ ಸ್ಥಿತಿ ಇದೆ. ಗ್ಯಾಸ್ ಸಿಲಿಂಡರ್ ಸಹಿತ ಅಧಿಕ ಬಾರದ ವಸ್ತುಗಳನ್ನು ಕಾಲು ದಾರಿಯಲ್ಲಿ ಸಾಗಿಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು.
ಕೆರೆ ತುಂಬಿದರೆ ರಸ್ತೆಯೆಲ್ಲ ಕೆಸರು:
ಈ ಹಿಂದೆ ಆಟೋ ರಿಕ್ಷಾ ಓಡಾಟ ನಡೆಸುತ್ತಿದ್ದ ಈ ರಸ್ತೆ ಕ್ರಮೇಣ ನಿರ್ಲಕ್ಷéಕ್ಕೆ ಈಡಾಗಿ ಕಾಲು ದಾರಿಯ ರೂಪಕ್ಕೆ ಇಳಿದಿದೆ. ಈ ದಾರಿಯಲ್ಲಿ ಸರಕಾರಿ ಕೆರೆಯೊಂದಿದ್ದು ತಡೆಗೋಡೆ ರಹಿತವಾಗಿದೆ. ಹೂಳು ಎತ್ತದೆ 20 ವರ್ಷಗಳೇ ಕಳೆದಿದ್ದು, ಸಣ್ಣ ಮಳೆ ಬಂದರೂ ಕೆರೆ ತುಂಬಿ ರಸ್ತೆಗೆ ನೀರು ನುಗ್ಗಿ ಬಂದ್ ಆಗುವ ಸ್ಥಿತಿ ನಿರ್ಮಾಣಗೊಂಡಿದೆ.
ನಗರಸಭೆ ಅಧ್ಯಕ್ಷರ ಭೇಟಿ:
ಇಲ್ಲಿಯ ನಿವಾಸಿಗಳು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರಿಗೆ ರಸ್ತೆ ಬಗ್ಗೆ ತಿಳಿಸಿದ್ದು, ಅವರು ಸ್ಥಳೀಯ ವಾರ್ಡ್ ಸದಸ್ಯ ಪ್ರೇಮ್ಕುಮಾರ್ ಅವರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿಯ ಜನರ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಹಲವು ವರ್ಷಗಳ ಬೇಡಿಕೆ :
ಇಲ್ಲಿನ ನಿವಾಸಿಗಳು, ಸಂಪರ್ಕ ರಸ್ತೆ ಬಳಕೆದಾರರು ರಸ್ತೆ ವ್ಯವಸ್ಥೆ ಸರಿಪಡಿಸಲು ಹಲವು ಬಾರಿ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ. ನಗರಸಭೆ ಅಧ್ಯಕ್ಷರ ಭೇಟಿ ನೀಡಿದ ಸಂದರ್ಭ ಈ ವಿಚಾರ ಪ್ರಸ್ತಾವಿಸಿದ್ದಾರೆ. ಈ ಬಾರಿಯಾದರೂ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರದಲ್ಲಿ ರಸ್ತೆ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಯನ್ನು ಅಭಿವೃದ್ದಿ ಪಡಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು. –ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ