‘ವಿದ್ಯಾರ್ಥಿಗಳು ದುಶ್ಚಟ ಮುಕ್ತ ಸಮಾಜದ ರೂವಾರಿಗಳಾಗಿ’
Team Udayavani, Aug 25, 2018, 1:14 PM IST
ನೆಲ್ಯಾಡಿ : ಶ್ರೀ ಕ್ಷೇ.ಧ.ಗ್ರಾ. ಯೋಜನೆ ಪುತ್ತೂರು, ಶ್ರೀ ಕ್ಷೇ.ಧ. ಗ್ರಾ.ಯೋಜನೆ ನೆಲ್ಯಾಡಿ ವಲಯ, ಬೆಥನಿ ಶಿಕ್ಷಣ ಸಂಸ್ಥೆಗಳು ನೆಲ್ಯಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ಹಾಗೂ ನೆಲ್ಯಾಡಿ ಬೆಥನಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶೋಕಿ ಜೀವನದ ಕೆಟ್ಟ ಭ್ರಮೆಯಲ್ಲಿದ್ದಾರೆ. ಇದರಿಂದಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ನೆಲೆಯಾಗಲು ತಡೆಯುಂಟಾಗಿದೆ. ವಿದ್ಯಾರ್ಥಿಗಳು ದುಶ್ಚಟ ಮುಕ್ತ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ನುಡಿದರು.
ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ನಡೆಯುತ್ತಿದೆ. 14 ರಿಂದ 21 ವಯಸ್ಸಿನ ಹದಿಹರೆಯದಲ್ಲೇ ವಿದ್ಯಾರ್ಥಿಗಳು ಇಂತಹ ಛಟಗಳಿಗೆ ಬಲಿಯಾಗುತ್ತಾರೆ. 24ನೇ ವಯಸ್ಸಿನ ಬಳಿಕ ಈ ರೀತಿಯ ಛಟ ಬರುವುದಿಲ್ಲ. ಆದ್ದರಿಂದ ಹದಿಹರೆಯದಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದರಬೇಕು. ಇಂತಹ ದುಶ್ಚಟಗಳಿಂದ ದೂರವಿರುವ ದೃಢ ನಿರ್ಧಾರ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.
ಅಪಾಯ ನಿಶ್ಚಿತ
ಮದ್ಯಪಾನ, ಮಾದಕ ವಸ್ತುಗಳು ಮನುಷ್ಯನ ದೇಹವನ್ನು ಜಿಗುಪ್ಸೆಗೆ ತಳ್ಳುತ್ತವೆ. ಮದ್ಯಪಾನ, ಮಾದಕ ವಸ್ತುಗಳ ದಾಸರಾದವರಿಗೆ ಆತ್ಮಹತ್ಯೆ, ಅಪಘಾತ,ಅಕಾಲಿಕ ಮರಣ ಕಟ್ಟಿಟ್ಟ ಬುತ್ತಿಯಾಗಿದೆ. ಯಾವ ಜಾತಿಯಲ್ಲೂ,ಧರ್ಮದಲ್ಲೂ ಮದ್ಯಪಾನ, ಮಾದಕ ವಸ್ತುಗಳ ಬಳಕೆ ಮಾಡುವಂತೆ ಹೇಳುವುದಿಲ್ಲ ಎಂದು ವಿವೇಕ್ ವಿನ್ಸೆಂಟ್ ಹೇಳಿದರು.
ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವಂ| ಪ್ರಾನ್ಸಿಸ್ ತೆಕ್ಕೇಪೂಕ್ಕಳಂ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾ| ಅಧ್ಯಕ್ಷ ಪದ್ಮನಾಭ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾ| ಯೋಜನಾಧಿಕಾರಿ ಜನಾರ್ದನ ಅವರು ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಮಾಜಿ ಅಧ್ಯಕ್ಷ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿದರು. ಬೆಥನಿ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್ ವಂದಿಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ನೆಲ್ಯಾಡಿ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಬೆಥನಿ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್, ಬೆಥನಿ ವಿದ್ಯಾಸಂಸ್ಥೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ರಹಾಂ ಕೆ.ಪಿ., ಸೇವಾಪ್ರತಿನಿಧಿಗಳಾದ ನೇಮಿರಾಜ್ , ಕುಸುಮಾ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರನ್ನು ಸಮ್ಮಾನಿಸಲಾಯಿತು.
ಜಿಮ್ನ ಬದಲು ಧ್ಯಾನ, ಯೋಗ ಮಾಡಿ
ವಿದ್ಯಾರ್ಥಿಗಳು ಜಿಮ್ಗೆ ಹೋಗಿ ಸುನೀಲ್ ಶೆಟ್ಟಿ, ಅಕ್ಷಯ್ಕುಮಾರ್, ಶಾರೂಕ್ ಖಾನ್ ಅವರಂತೆ ದೇಹ ಬೆಳೆಸುವುದಕ್ಕಿಂತ ಒಳ್ಳೆಯ ಯೋಗ,ಕ್ರೀಡೆ, ಧ್ಯಾನ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಸಿನೇಮಾ ನಟ ಆದರ್ಶ ಪಾಲಿಸುವುದಕ್ಕಿಂತ ಯೇಸುಕ್ರಿಸ್ತ್, ಅಲ್ಲಾಹು, ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿರಿಸಿಕೊಳ್ಳಿ. ಮೆಡಿಸಿನ್ಗಳಿಗೆ ಹೊಂದಿಕೊಳ್ಳುವುದಕ್ಕಿಂತ ಉತ್ತಮ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಮನೆಯಲ್ಲಿ ತಂದೆ, ತಾಯಿಯರಿಗೆ ವಿಧೇಯರಾಗಿ ಎಂದು ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.