ತಾ.ಪಂ. ರದ್ದತಿ ಪ್ರಸ್ತಾವ: ಕೆಲವರಿಗೆ ಆತಂಕ, ಹಲವರಿಗೆ ನಿರಾತಂಕ!
Team Udayavani, Feb 10, 2021, 2:57 PM IST
ಉಡುಪಿ: ತ್ರಿಸ್ತರ ಪಂಚಾಯತ್ ವ್ಯವಸ್ಥೆಯಲ್ಲಿ ಒಂದಾದ ತಾಲೂಕು ಪಂಚಾಯತನ್ನು ಕೈಬಿಡುವ ಪ್ರಸ್ತಾವವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನವರು ಇತ್ತೀಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿರುವುದು ಹಲವರ ಚಿಂತೆಗೆ ಕಾರಣವಾಗಿದೆ. ಅನುದಾನ, ಅಧಿಕಾರವಿಲ್ಲದೆ ಬಳಲಿ ಬೆಂಡಾದ ಬಹುತೇಕ ತಾಲೂಕು ಪಂಚಾಯತ್ ಸದಸ್ಯರಿಗೆ ನಿರಾಳವೂ ಆಗಿದೆ.
ಮುಂದಿನ ಕೆಲವೇ ದಿನಗಳಲ್ಲಿ ಜಿ.ಪಂ. ಮತ್ತು ತಾ.ಪಂ. ಆಡಳಿತಾವಧಿ ಮುಗಿದು ಚುನಾವಣೆ ನಡೆಸಲು ಚುನಾವಣ ಆಯೋಗ ಸಿದ್ಧತೆ ನಡೆಸುತ್ತಿರುವಂತೆಯೇ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯವಾಗಿ ಅಷ್ಟಾಗಿ ಚರ್ಚೆಯ ಮುನ್ನೆಲೆಗೆ ಬಾರದಿದ್ದರೂ ಕಾರ್ಯಕರ್ತರಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ನೆಲೆ ಪೂರೈಕೆ ತಾಣ
ಜಿ.ಪಂ. ಮತ್ತು ಗ್ರಾ.ಪಂ. ವ್ಯವಸ್ಥೆ ನಡುವೆ ತಾ.ಪಂ. ಕಾರ್ಯನಿರ್ವಹಿಸುತ್ತಿತ್ತು. ಇದು ಒಂದು ರೀತಿಯಲ್ಲಿ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಿ ಕೊಳ್ಳಲು ಕಾರ್ಯಕರ್ತರಿಗೆ ಇರುವ ವ್ಯವಸ್ಥೆಯೂ ಆಗಿದೆ. ಜಿ.ಪಂ. ಕ್ಷೇತ್ರಗಳು ನಾಲ್ಕೈದು ಗ್ರಾ.ಪಂ.ಗಳಿಗೆ ಒಂದಾಗಿದೆ. ಜಿ.ಪಂ. ಕ್ಷೇತ್ರಗಳು ಉಡುಪಿ ಜಿಲ್ಲೆಯಲ್ಲಿರುವುದು ಕೇವಲ 26. ಇದು ಶಾಸಕ ಹುದ್ದೆಗೆ ಆಕಾಂಕ್ಷಿಯಾಗಿ ಅಲ್ಲಿ ನೆಲೆ ಸಿಗದ ಕಾರ್ಯಕರ್ತ/ನಾಯಕರಿಗೆ ಜಾಗ ತೋರುವ ಹುದ್ದೆಯಾಗಿದೆ. ಗ್ರಾ.ಪಂ. ವ್ಯವಸ್ಥೆ ಸ್ಥಳೀಯ ಕಾರ್ಯಕರ್ತರಿಗೆ ಜಾಗ ತೋರುವ ಹುದ್ದೆ. ಈ ನಡುವೆ ಜಿ.ಪಂ.ನಲ್ಲಿ ಅವಕಾಶ ಸಿಗದ, ಸ್ಥಳೀಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಸಾಮಾಜಿಕ ಸ್ಥಾನಮಾನವಿರುವ ಕಾರ್ಯಕರ್ತರಿಗೆ ತಾ.ಪಂ. ನೆಲೆ ಕೊಡುತ್ತಿತ್ತು.
ಒಂದು ವೇಳೆ ತಾ.ಪಂ. ವ್ಯವಸ್ಥೆ ರದ್ದುಗೊಂಡಲ್ಲಿ ಪ್ರತಿ ಜಿಲ್ಲೆಗಳಲ್ಲಿ ಸಣ್ಣ ಮಟ್ಟದ ರಾಜಕೀಯ ನೆಲೆ ಕಂಡುಕೊಂಡಿದ್ದ ನೂರಾರು ಕಾರ್ಯಕರ್ತರಿಗೆ ರಾಜಕೀಯ ನೆಲೆ ಇಲ್ಲದೆ ಪರಿತಪಿಸುವಂತಾಗುವುದು ಮಾತ್ರ ಖಾತ್ರಿ. ಹೆಸರಿಗಷ್ಟೇ ಅಲಂಕರಿಸುವ ಈ ಹುದ್ದೆಗಿಂತ ರದ್ದತಿ ಲೇಸು ಎಂಬವರೂ ಸಾಕಷ್ಟು ಜನರಿದ್ದಾರೆ.
ಇದನ್ನೂ ಓದಿ:ಗ್ರಾಮೀಣ ಶಾಲೆಗಳಲ್ಲಿ ಉತ್ತಮ ಶಿಕ್ಷಣಕ್ಕೆ ಅವಕಾಶ: ರಾಜೇಶ್ ನಾೖಕ್
ಅನುದಾನವೂ, ಅಧಿಕಾರವೂ ಇಲ್ಲ
ತಾ.ಪಂ.ನಲ್ಲಿರುವ ಒಂದೇ ಒಂದು ಸಮಸ್ಯೆ ಅಂದರೆ ಅಲ್ಲಿಗೆ ಬರುವ ಅನುದಾನ ಅತಿ ಕಡಿಮೆ ಪ್ರಮಾಣದ್ದು. ಆದ್ದರಿಂದ ತಾ.ಪಂ. ಸದಸ್ಯರಿಗೆ ಯಾವ ಅಧಿಕಾರವೂ ಇಲ್ಲ ಎಂಬಂತಾಗಿದೆ. ಆದರೆ ಸಾರ್ವಜನಿಕರ ಮಧ್ಯೆ, ಸರಕಾರಿ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳಲು ಒಂದು ರಾಜಕೀಯ ನೆಲೆಯ ಹುದ್ದೆ ಇದಾಗಿದೆ. ಇದೇ ವೇಳೆ ಸಾರ್ವಜನಿಕರಿಗೆ ತಾ.ಪಂ. ಸದಸ್ಯರಿಗಿರುವ ಇತಿಮಿತಿ ಅರಿವಿಲ್ಲದ ಕಾರಣ ಇತರ ಜನಪ್ರತಿನಿಧಿಗಳಂತೆ ಇವರ ಬಳಿಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಒಂದೆಡೆ ಅಧಿಕಾರವಿಲ್ಲ, ಇನ್ನೊಂದೆಡೆ ಅನುದಾನವೂ ಇಲ್ಲ, ಮತ್ತೂಂದೆಡೆ ಸಾರ್ವಜನಿಕರ ಬೈಗಳು ಮಾತ್ರ ಇದೆ ಎಂಬ ನೋವು ತಾ.ಪಂ. ಸದಸ್ಯರಿಗೆ ಲಾಗಾಯ್ತಿನಿಂದಲೂ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ