ಪಕ್ಷ ಕಟ್ಟಲಾಗದವರಿಂದ ಜಾತಿ ರಾಜಕೀಯದ ವರಸೆ ಅಪಾಯ; ಸುನೀಲ್ ಕುಮಾರ್
ಕಾಂಗ್ರೆಸ್ ಪಕ್ಷ ಡಮ್ಮಿ ಅಧ್ಯಕ್ಷನನ್ನು ಹಾಕಿ ಪಕ್ಷ ಕಟ್ಟಲು ಹೊರಟಿದೆ
Team Udayavani, Dec 7, 2022, 3:00 PM IST
ಬೆಳ್ತಂಗಡಿ: ಅಭಿವೃದ್ಧಿಗಾಗಿ ಬೇಡಿಕೆ ಇಡುತ್ತಿದ್ದ ಮಂದಿ ಚುನಾವಣೆ ಸಮೀಪಿಸುತ್ತಿರುವಂತೆ ಜಾತಿ ಮುಂದಿಡಲು ಶುರುಮಾಡುತ್ತಿದ್ದಾರೆ. ಬೆಳ್ತಂಗಡಿಯಲ್ಲೂ ಇದೇ ವಾತಾವರಣ ಬೀಸುತ್ತಿದ್ದು, ಅದರ ಪರಿಣಾಮ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ಅಭ್ಯರ್ಥಿಯಾಗಬೇಕೆಂದು ಸಿದ್ದರಾಮಯ್ಯ, ಡಿಕೆಶಿಯವರು ಶಾಸಕ ಹರೀಶ್ ಪೂಂಜರನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ವಿ.ಸುನೀಲ್ ಕುಮಾರ್ ಅವರು ಹೇಳಿದರು.
ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎರಡನೇ ಬಾರಿಗೆ ಶಾಸಕ ಪೂಂಜ ಇನ್ನಷ್ಟು ಅಭಿವೃದ್ಧಿ ಓಟ ಮುಂದುವರೆಯಲು ಕಾರ್ಯಕರ್ತರು ಎರಡನೇ ಬಾರಿಗೆ ಹರೀಶ್ ಪೂಂಜರನ್ನು ಗೆಲ್ಲಿಸಿ ಕೊಡಬೇಕು ಎಂದು ಕರೆ ನೀಡಿದರು.
2,500 ಕೋ.ರೂ. ಅಭಿವೃದ್ಧಿ
ಶಾಸಕ ಹರೀಶ್ ಪೂಂಜ ಮಾತನಾಡಿ, ಗುಜರಾತ್ ಚುನಾವಣೆಯನ್ನು ಕಂಡಾಗ ಬಿಜೆಪಿ ಪಕ್ಷ ಕರ್ನಾಟಕದಲ್ಲೂ ಮತ್ತೆ ಚುಕ್ಕಾಣಿ ಹಿಡಿಯಲಿದೆ. ಕಾರ್ಕಳ ತಾಲೂಕಿನಲ್ಲಿ ಸುನಿಲ್ ಕುಮಾರ್ ನಡೆಸಿದ ಅಭಿವೃದ್ಧಿಯಂತೆ ಬೆಳ್ತಂಗಡಿ ತಾಲೂಕಿನಲ್ಲಿ 2,500 ಕೋ.ರೂ.ಅನುದಾನದಡಿ ಅಭಿವೃದ್ಧಿ ಪಥ ಕಂಡಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಹೀನಾಯ ಸೋಲು
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಾಂಗ್ರೆಸ್ ಪಕ್ಷ ಡಮ್ಮಿ ಅಧ್ಯಕ್ಷನನ್ನು ಹಾಕಿ ಪಕ್ಷ ಕಟ್ಟಲು ಹೊರಟಿದೆ. ಅಂದು ಕಟ್ಟಿದ ಕಾಂಗ್ರೆಸ್ ಇಂದಿಲ್ಲ. ಬರಿ ಇಟಲಿ ಕಾಂಗ್ರೆಸ್ ಉಳಿದಿದೆ ಎಂದರು.
ವಿ.ಪ. ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ನ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯೆಲ್ ಮೆಂಡೋನ್ಸಾ, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಚೆನ್ನಕೇಶವ ಅರಸಮಜಲು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ದನ್, ಉಪಾಧ್ಯಕ್ಷ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು.
ಸಚಿವ ಸುನೀಲ್ ಕುಮಾರ್ ಅವರನ್ನು ಶಾಸಕ ಹರೀಶ್ ಪೂಂಜ ಗೌರವಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಮಾಜಿ ಶಾಸಕ, ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್, ಆರ್.ಎಸ್.ಎಸ್.ನ ನಾರಾವಿಯ ಹಿರಿಯ ನೇತಾರ ಎಂ.ಎಸ್.ರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪಕ್ಷದ ಪ್ರಮುಖರು ಬಿಜೆಪಿಯತ್ತ
ಮುಗುಳಿ ನಾರಾಯಣ ಭಟ್, ಧರ್ಮಸ್ಥಳದ ಚಂದನ್ ಕಾಮತ್, ಮಡಂತ್ಯಾರು ಉದ್ಯಮಿ ಪುಷ್ಪರಾಜ್ ಜೈನ್, ಮಾಲಾಡಿಯ ಪುನೀತ್, ಲಾೖಲ ಸುಧಾಕರ್ ಬಿ.ಎಲ್., ಮುಂಡಾಜೆ ಗ್ರಾ.ಪಂ.ಮಾಜಿ ಸದಸ್ಯೆ ಅಶ್ವಿನಿ ಹೆಬ್ಟಾರ್, ಕುಕ್ಕಳದ ರಾಜೇಶ್ವರಿ, ವೇಣೂರು ಸತೀಶ್ ಮಡಿವಾಳ್, ಧರ್ಮಸ್ಥಳ ಗ್ರಾ.ಪಂ.ಸದಸ್ಯೆ ಗಾಯತ್ರಿ, ಕನ್ಯಾಡಿ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷೆ ನಂದ ಭಟ್, ನಿಡ್ಲೆ ಸತೀಶ್, ಬೆಳ್ತಂಗಡಿ ಮಹೇಶ್ ಜೈನ್, ಧರ್ಮಸ್ಥಳದ ಆ್ಯಂಟನಿ ಕಲ್ಲೇರಿ, ನಿವೃತ್ತ ಸೈನಿಕ ಸೆಬಾಸ್ಟಿಯನ್, ಆರಂಬೋಡಿ ಮಾಜಿ ಗ್ರಾ.ಪಂ. ಸದಸ್ಯ ಆನಂದ ಶೆಟ್ಟಿ, ಕಾಶಿಬೆಟ್ಟು ಶನೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ದನ ಆಚಾರ್, ಕೊಕ್ಕಡದ ವಿಟಲ್ ಗೌಡ, ಮೊಗ್ರು ಗ್ರಾಮದ ಮುಗೇರಡ್ಕ ಕೇಶವ್ ಗೌಡ ಜಾಲ್ನಡೆ, ಕಲ್ಮಂಜದ ಗುತ್ತುಮನೆಯ ಸುಂದರಿ ಸಹಿತ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಅವರಿಗೆ ಪಕ್ಷದ ಧ್ವಜ ನೀಡಿ ಸಚಿವ ಸುನಿಲ್ ಕುಮಾರ್ ಸ್ವಾಗತಿಸಿದರು.