ಪುತ್ತೂರಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ; ಮಳೆಯಿಂದ ನದಿ ನೀರಿನ ಮಟ್ಟ ಏರಿಕೆ
Team Udayavani, May 24, 2020, 11:22 AM IST
ಪುತ್ತೂರು ನಗರಕ್ಕೆ ನೀರು ಪೂರೈಕೆಯ ನೆಕ್ಕಿಲಾಡಿ ಡ್ಯಾಂ.
ಪುತ್ತೂರು: ಜಿಲ್ಲೆಯಲ್ಲಿ ಹರಿಯುವ ಜೀವ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ನದಿ ಪಾತ್ರದ ಭಾಗಗಳಲ್ಲಿ ಹಾಗೂ ಪುತ್ತೂರು ನಗರಕ್ಕೂ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಎರಡು ವಾರಗಳ ಅಂತರದಲ್ಲಿ ಪಶ್ಚಿಮಘಟ್ಟದ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ನೇತ್ರಾವತಿ ಹಾಗೂ ಕುಮಾರಧಾರಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಡ್ಯಾಂ ತುಂಬಿದೆ.
ಪುತ್ತೂರಿಗೆ ಚಿಂತೆ ಇಲ್ಲ
ಪುತ್ತೂರು ನಗರ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಕುಮಾರಧಾರಾ ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನಲ್ಲಿ 630 ಮಿ. ಲೀ. ನೀರು ಶೇಖರಣೆಯಾಗಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಸುಮಾರು 60 ಸಾವಿರ ಮೀರಿದ ಜನಸಂಖ್ಯೆಯಿದೆ. ಪ್ರತೀ ದಿನ 80 ಲಕ್ಷ ಲೀ. (8 ಮಿ.ಲೀ.) ನೀರು ಬೇಕು. 11 ಸಾವಿರ ನೀರಿನ ಸಂಪರ್ಕವಿದ್ದು, ಜತೆಗೆ 34 ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳು ಸಂಪರ್ಕ ಪಡೆದಿವೆ. ಸುಮಾರು 75 ಲಕ್ಷ ಲೀಟರ್(7.5 ಮಿ.ಲೀ.) ನಿತ್ಯ ನಗರಸಭೆಗೆ ಪೂರೈಕೆಯಾಗುತ್ತದೆ. ಸದ್ಯ ಇಲ್ಲಿ ಸಮಸ್ಯೆ ಇಲ್ಲ.
ಹೆಚ್ಚುವರಿ ನೀರು ಬಿಡುವ ಚಿಂತನೆ ಸದ್ಯಕ್ಕಿಲ್ಲ
ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿದೆ. ನಗರಸಭೆಗೆ 3 ತಿಂಗಳಿಗೆ ಬೇಕಾದಷ್ಟು 630 ಎಂ.ಎಲ್.ಡಿ. ನೀರು ಶೇಖರಣೆ ಇರುವುದರಿಂದ ತೊಂದರೆ ಇಲ್ಲ. ಮಂಗಳೂರು ಭಾಗಕ್ಕೆ ನೀರು ಬಿಡುವ ಕುರಿತೂ ಬೇಡಿಕೆ ಬಂದಿಲ್ಲ. ಹೆಚ್ಚುವರಿ ನೀರು ಬಿಡುವ ಚಿಂತನೆ ಸದ್ಯಕ್ಕೆ ಇಲ್ಲ.
-ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು