ಬಗೆ ಹರಿಯದ ಮೆಸ್ಕಾಂ ಮೀಟರ್ ರೀಡಿಂಗ್ ಗುತ್ತಿಗೆ ಬಿಕ್ಕಟ್ಟು
ನೂತನ ಒಪ್ಪಂದ ತಕರಾರು; 2 ತಿಂಗಳ ರೀಡಿಂಗ್ ಅಸ್ಪಷ್ಟ ; ಗ್ರಾಹಕರಿಗೆ ಹೊರೆ
Team Udayavani, Sep 30, 2020, 3:03 AM IST
ಬೆಳ್ತಂಗಡಿ: ಮೆಸ್ಕಾಂ ಮೀಟರ್ ರೀಡಿಂಗ್ ಗುತ್ತಿಗೆದಾರರು ಹಾಗೂ ನೌಕರರ ನಡುವಿನ ಬಿಕ್ಕಟ್ಟಿನಿಂದ ಪ್ರಸಕ್ತ ಗ್ರಾಹಕರು ಕಳೆದ ಎರಡು ತಿಂಗಳುಗಳಿಂದ ಸಂಕಷ್ಟ ಎದುರಿಸುವಂತಾಗಿದೆ. ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ ಬಂಟ್ವಾಳ ಪಟ್ಟಣ, ಗ್ರಾಮೀಣ ಹಾಗೂ ವಿಟ್ಲ, ಬೆಳ್ತಂಗಡಿ, ಉಜಿರೆ ಉಪವಿಭಾಗಗಳಲ್ಲಿ ಮೀಟರ್ ರೀಡಿಂಗ್ ನಡೆಸಲು ಹೊರಗುತ್ತಿಗೆ ನೀಡಲಾಗಿತ್ತು. ಕೆಲವು ಉಪವಿಭಾಗಗಳಲ್ಲಿ ಈ ಹಿಂದಿನ ಮೀಟರ್ ರೀಡರ್ಗಳು ವಿಧಿಸಿದ್ದ ಹೊಸ ಬೇಡಿಕೆ ಪೂರೈಸಲಾಗದೆ ನೂತನ ಕೆಲಸಗಾರರನ್ನು ನೇಮಿಸಲು ಗುತ್ತಿಗೆದಾರರು ಮುಂದಾಗಿದ್ದರು ಎಂಬ ವದಂತಿ ಹಬ್ಬಿತ್ತು. ಪ್ರಸಕ್ತ ಕಂಪೆನಿ ಪಾಲಿಸಿ ವಿಚಾರವಾಗಿ ಈ ಹಿಂದಿನ ನೌಕರರು ಹಾಗೂ ನೂತನ ಸಿಬಂದಿಗೆ ಅಸಮಾಧಾನವಿದೆ. ಹೊಸ ನಿಯಮದಂತೆ ವೇತನ ಸಾಲುತ್ತಿಲ್ಲ. ಹೀಗಾಗಿ ಹೊಸಬರನ್ನು ನೇಮಿಸಿದರೂ ಪೂರ್ಣಾವಧಿ ಕೆಲಸ ನಿರ್ವಹಿಸದೆ ಕೈಚೆಲ್ಲಿದ್ದಾರೆ. ಈ ಕುರಿತು ಮೆಸ್ಕಾಂ ಇಲಾಖೆಯೂ ಹಲವು ಪ್ರಯತ್ನ ನಡೆಸಿದರೂ ಫಲಪ್ರದವಾಗಿಲ್ಲ.
ಗ್ರಾಮೀಣ ಭಾಗದಲ್ಲಿ ಸಾಲುತ್ತಿಲ್ಲ ವೇತನ
ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ ಒಟ್ಟು 101 ಮಂದಿ ಮೀಟರ್ ರೀಡರ್ಗಳು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ 41 ಮಂದಿ ನೌಕರರಿದ್ದಾರೆ. ಈಗಾಗಲೇ ಜೂನ್ ತಿಂಗಳ ರೀಡಿಂಗ್ ಪೂರ್ಣಗೊಂಡಿದ್ದು, ಜುಲೈ, ಆಗಸ್ಟ್ ತಿಂಗಳ ರೀಡಿಂಗ್ ಬಾಕಿ ಉಳಿದಿದೆ. ಬಂಟ್ವಾಳ ಉಪವಿಭಾಗಕ್ಕೆ ಒಳಪಟ್ಟಂತೆ 1,80,000ಕ್ಕೂ ಹೆಚ್ಚು ಮೀಟರ್ಗಳಿವೆ. ಪ್ರತಿ ರೀಡರ್ಗೆ ಮಾಸಿಕ ಸರಾಸರಿ 1,700ರಿಂದ 1,800 ರೀಡಿಂಗ್ ನಡೆಸಬೇಕಾಗುತ್ತದೆ. ಈ ಹಿಂದೆ ಪ್ರತಿ ಮೀಟರ್ ರೀಡಿಂಗ್ಗೆ 14 ರೂ. ಕಮಿಷನ್ ನೀಡಲಾಗುತ್ತಿತ್ತು. ನೂತನ ನಿಯಮದಂತೆ ಗುತ್ತಿಗೆ ಕಂಪೆನಿ 9.6 ರೂ. ನೀಡಲು ಮುಂದಾಗಿದೆ. ಇದಲ್ಲದೆ ಈ ಹಿಂದೆ 1ರಿಂದ 27ನೇ ತಾರೀಕಿನ ಒಳಗಾಗಿ ರೀಡಿಂಗ್ ಪೂರ್ಣಗೊಳಿಸಲು ಅವಕಾಶ ಇದ್ದು, ಪ್ರಸಕ್ತ 20 ದಿನಗಳೊಳಗೆ ಪೂರ್ಣಗೊಳಿಸುವ ಒತ್ತಡ ಹೇರ ಲಾಗಿದೆ. ಇಷ್ಟೇ ಅಲ್ಲದೆ 41 ಮಂದಿ ಸಿಬಂದಿ ಬದಲಾಗಿ 30 ಮಂದಿಯನ್ನಷ್ಟೇ ಇರಿಸಿಕೊಂಡು ಇಷ್ಟು ಹೊರೆಯನ್ನು ಸೀಮಿತ ಅವಧಿಯಲ್ಲಿ ಮುಗಿಸುವ ಒತ್ತಡ ಹೇರಿದೆ.
ಇದಕ್ಕೆ ಒಪ್ಪದ ನೌಕರರು 41 ಮಂದಿಯನ್ನೂ ಉಳಿಸಬೇಕು. ಮಾತ್ರ ವಲ್ಲದೆ ಪಟ್ಟಣದಲ್ಲಿ ಅವಧಿಯೊಳಗೆ ರೀಡಿಂಗ್ ಸಾಧ್ಯವಾದರೂ ಗ್ರಾಮೀಣ ಭಾಗ ದಲ್ಲಿ ಪ್ರತಿನಿತ್ಯ 70 ಮೀಟರ್ ರೀಡಿಂಗ್ ನಡೆಸಬೇಕು. ಡಿಜಿಟಲ್ ಮೀಟರ್ ಆದ್ದ ರಿಂದ ಒಂದು ಮೀಟರ್ನಿಂದ ಇನ್ನೊಂದು ಮೀಟರ್ ರೀಡಿಂಗ್ ನಡೆಸಲು ಕನಿಷ್ಠ 7 ನಿಮಿಷ ಸಮಯ ತಗಲುತ್ತದೆ. ಇದರಿಂದ ಸೀಮಿತ ಸಮಯದಲ್ಲಿ ರೀಡಿಂಗ್ ಪೂರ್ಣಗೊಳಿಸುವುದು ಅಸಾಧ್ಯವಾಗಿದ್ದರಿಂದ ಮಾಸಿಕ ವೇತನ (9,500 ರೂ.) ನಿಗದಿಗೊಳಿಸಿ ಪಿಎಫ್, ಇಎಸ್ಐ ನೀಡುವಂತೆ ಈ ಹಿಂದಿನ ನೌಕರರು ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಒಪ್ಪದ ಗುತ್ತಿಗೆದಾರರು ಹೊಸಬರನ್ನು ನೇಮಕಗೊಳಿಸಲು ಮುಂದಾಗಿದೆ ಎಂಬುದು ಈ ಹಿಂದಿನ ರೀಡರ್ಗಳ ಆರೋಪವಾಗಿದೆ.
ಶಾಸಕ ಹರೀಶ್ ಪೂಂಜ ಮಧ್ಯಸ್ತಿಕೆ
ಈ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಬೆಳ್ತಂಗಡಿ-ಉಜಿರೆ ವ್ಯಾಪ್ತಿಗೊಳಪಟ್ಟಂತೆ ಶಾಸಕ ಹರೀಶ್ ಪೂಂಜ ಅವರು ಗುತ್ತಿಗೆ ದಾರರು, ನೌಕರರನ್ನು ಕರೆದು ಬಿಕ್ಕಟ್ಟು ಬಗೆಹರಿಸಿದ್ದರು. ಅದರಂತೆ ಬೆಳ್ತಂಗಡಿ -ಉಜಿರೆ ಸಮಸ್ಯೆ ಬಗೆಹರಿ ಯುವ ಹಂತದಲ್ಲಿದೆ. ಉಳಿದಂತೆ ಬಂಟ್ವಾಳ, ವಿಟ್ಲ ಇತರೆಡೆ ರೀಡಿಂಗ್ ನಡೆಯದೆ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ಮೂಲ ದಾಖಲೆ ನೀಡಲು ಸೂಚನೆ
ಬೆಳ್ತಂಗಡಿ-ಉಜಿರೆ ವ್ಯಾಪ್ತಿಗೆ ಒಳಪಟ್ಟಂತೆ ಗುತ್ತಿಗೆದಾರರು ಈ ಹಿಂದಿನ ರೀಡರ್ಗಳನ್ನೇ ಉಳಿಸಿಕೊಳ್ಳುವ ಭರವಸೆ ನೀಡಿದೆ. ನಿಯಮನುಸಾರ ಆ. 29ಕ್ಕೆ ಒಪ್ಪಂದ ಸಿದ್ಧಪಡಿಸಿ ಸೆ. 1ಕ್ಕೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಈ ನಡುವೆ ಖಾಲಿ ಚೆಕ್, ಪಿಯುಸಿ, ಐಟಿಐ ಮೂಲ ಪ್ರತಿ, ಸಹಿತ ಬಾಂಡ್ಗೆ ಸಹಿ ಹಾಕಿದಲ್ಲಿ ಮಾತ್ರ ಎರಡು ವರ್ಷ ಒಪ್ಪಂದ ಪತ್ರ ನೀಡುವುದಾಗಿ ತಿಳಿಸಿತ್ತು. ಮೂಲ ಪ್ರತಿ ಒದಗಿಸಲು ಸಿಬಂದಿ ಒಪ್ಪದೆ ಇತರ ಎಲ್ಲ ಬೇಡಿಕೆಗೆ ಸಮಂಜಸ ನೀಡಿದರೂ ಕಂಪೆನಿ ಒಪ್ಪದೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ. ಹೆಚ್ಚಿನ ನೌಕರರು 10-17 ವರ್ಷಗಳಿಂದಲೂ ಇದೇ ವೃತ್ತಿಯನ್ನು ಅವಲಂಬಿಸಿದ್ದರು. ಈ ವರೆಗೆ ಗುತ್ತಿಗೆ ಕಂಪೆನಿಗಳಷ್ಟೆ ಬದಲಾಗುತ್ತಿತ್ತು. ಕಳೆದ ಐದು ತಿಂಗಳ ಕೋವಿಡ್ ಸಮಸ್ಯೆ ನಡುವೆಯೂ ಪ್ರಸಕ್ತ ನೌಕರರನ್ನು ಬದಲಾಯಿಸುವ ಪ್ರಕ್ರಿಯೆ ಯಿಂದ ಹೊಸಬರು ಪೂರ್ಣಾ ವಧಿ ಕೆಲಸ ನಿರ್ವಹಿಸುತ್ತಿಲ್ಲ. ಹಳಬರಿಗೆ ಹೊಸ ಉದ್ಯೋಗದ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಮಧ್ಯಪ್ರವೇಶಿಸಿ ಜತೆಗೆ ಜನಪ್ರತಿನಿಧಿಗಳು ಗಮನ ಹರಿಸಿ ಶೀಘ್ರ ಸಮಸ್ಯೆ ಇತ್ಯರ್ಥ ಗೊಳಿಸಿ ಗ್ರಾಹಕರಿಗೆ ಹೊರೆ ತಗ್ಗಿಸಬೇಕಿದೆ.
ಸರಿಯಾಗಲಿದೆ
ಮೀಟರ್ ರೀಡಿಂಗ್ ಗುತ್ತಿಗೆದಾರರ ಹಾಗೂ ನೌಕರರ ನಡುವಿನ ಕೆಲವು ತಾಂತ್ರಿಕ ದೋಷಗಳಿಂದ ಸಮಸ್ಯೆ ಎದುರಾಗಿತ್ತು. ಈಗಾಗಲೇ ಸಂಬಂಧಪಟ್ಟ ಕಂಪೆನಿಗೆ ನೋಟಿಸ್ ಜಾರಿ ಗೊಳಿಸಲಾಗಿತ್ತು. ಅಕ್ಟೋಬರ್ನಿಂದ ಎಲ್ಲವೂ ಸರಿಯಾಗಲಿದೆ. ಗ್ರಾಹಕರು ಸಹಕರಿಸಬೇಕು.
-ರಾಮಚಂದ್ರ ಎಂ. ಕಾರ್ಯನಿರ್ವಾಹಕ ಎಂಜಿನಿಯರ್ ಮೆಸ್ಕಾಂ, ಬಂಟ್ವಾಳ ಉಪವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ