ಉಪ್ಪಿನಂಗಡಿ: ನಾಡ ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ
Team Udayavani, Jan 25, 2019, 6:09 AM IST
ಉಪ್ಪಿನಂಗಡಿ: ಅಪಾಯದ ಅಂಚಿನಲ್ಲಿದ್ದ ಕಂದಾಯ ಇಲಾಖೆಯ ನಾಡ ಕಚೇರಿ ಸ್ಥಳಾಂತರಕ್ಕೆ ಚಾಲನೆ ದೊರೆತಿದೆ.
ನಾದುರಸ್ತಿಯಲ್ಲಿದ್ದ ಕಚೇರಿಯ ಕುರಿತು ಕಳೆದ ಒಂದು ವರ್ಷದಿಂದ ‘ಉದಯವಾಣಿ’ ಸತತವಾಗಿ ವರದಿ ಮಾಡಿತ್ತು. ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಚೇರಿ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಪುತ್ತೂರು ಸಹಾಯಕ ಕಮಿಷನರ್ ಅವರು ಸ್ಥಳೀಯ ಪಂಚಾಯತ್ಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದರು.
ನಾಡ ಕಚೇರಿಗೆ ಸ್ಥಳಾವಕಾಶ ಕೊಟ್ಟಲ್ಲಿ ಅದರ ಸಾಧಕ – ಬಾಧಕಗಳ ಕುರಿತು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು.
ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ಕಚೇರಿಯನ್ನು ತತ್ಕ್ಷಣವೇ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಕಚೇರಿಯಲ್ಲಿರುವ ದಾಖಲೆಗಳ ಸಹಿತ ಪೀಠೊಪಕರಣಗಳನ್ನು ಸಾಗಾಟ ಮಾಡಲಾ ಗುತ್ತಿದ್ದು, ವಾರದೊಳಗೆ ಹೊಸ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಸಹಾಯಕ ಉಪತಹಶೀಲ್ದಾರ್ ಸದಾಶಿವ ನಾಯ್ಕ ತಿಳಿಸಿದ್ದಾರೆ.