ಸೋರುತ್ತಿದೆ ವೇಣೂರು ನಾಡಕಚೇರಿ
32 ವರ್ಷಗಳಿಂದ ಬಾಡಿಗೆ ಕೋಣೆ ಆಸರೆ
Team Udayavani, Sep 11, 2019, 5:44 AM IST
ವೇಣೂರು: ಇಪ್ಪತ್ತೂಂಬತ್ತು ಗ್ರಾಮಗಳಿಗೆ ಸಂಬಂಧಿತ ಕಂದಾಯ ಇಲಾಖೆಯ ವೇಣೂರು ನಾಡ ಕಚೇರಿ ಅವ್ಯವಸ್ಥೆಯನ್ನು ನೋಡಿಯೇ ತಿಳಿಯಬೇಕು. ಸೋರುವ ಕಟ್ಟಡ, ಬಿರುಕುಬಿಟ್ಟ ಛಾವಣಿ, ಕೊಠಡಿ ತುಂಬಾ ಮಳೆ ನೀರು. ಈ ಎಲ್ಲದರ ಮಧ್ಯೆ ಕಡತಗಳನ್ನು ಶೇಖರಿಸಿಡಲು ಸಿಬಂದಿ ಪರದಾಡುವ ಕಷ್ಟ ಅಷ್ಟಿಷ್ಟಲ್ಲ.
1987ರಲ್ಲಿ ವೇಣೂರಿನಲ್ಲಿ ಪ್ರಾರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿ ಬಂದಿಲ್ಲ. ಸುಮಾರು 32 ವರ್ಷಗಳಿಂದ ಬಾಡಿಗೆ ಕೋಣೆಯಲ್ಲೇ ದಿನ ಕಳೆಯುತ್ತಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿ ಯಲ್ಲಿರುವ ಕಟ್ಟಡದಿಂದ ಗ್ರಾಮಸ್ಥರ ಕಡತಗಳಿಗೆ ಸುರಕ್ಷತೆಯೇ ಇಲ್ಲವಾಗಿದೆ.
ಇಲ್ಲಿನ ಕಂದಾಯ ನಿರೀಕ್ಷಕರೇ ಉಪ ತಹಶೀಲ್ದಾರರ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಒಬ್ಬನೇ ಗ್ರಾಮ ಸಹಾಯಕ ಇಡೀ ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದು, ಅವರು ರಜೆ ಮಾಡಿದರೆ ಆ ದಿನ ಕಚೇರಿ ಬಂದ್!
ಮಾಸಾಶನಗಳು, ತಕರಾರು ಕೊಟೇ ಶನ್, ಜಾತಿ-ಆದಾಯ ಪ್ರಮಾಣ ಪತ್ರ, ಜನನ-ಮರಣ ಪ್ರಮಾಣ ಪತ್ರ, ಸಹಿತ ಪ್ರಾಕೃತಿಕ ವಿಕೋಪದಡಿ ಪರಿಹಾರ, ಸರಕಾರಿ ಸೌಲಭ್ಯಗಳು ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ಹೋಬಳಿ ಮಟ್ಟದ ಜನರು ಬರುತ್ತಿದ್ದು, ನಾಡಕಚೇರಿಯ ಅವ್ಯವಸ್ಥೆಯಿಂದಾಗಿ ಜನ ಸಮರ್ಪಕ ಸೇವೆ ಯಿಂದ ವಂಚಿತರಾಗಿದ್ದಾರೆ.
ಸಂಪೂರ್ಣ ಶಿಥಿಲಾವಸ್ಥೆ
ನಾಡಕಚೇರಿಗೆ ಬಾಡಿಗೆ ಕೋಣೆಯನ್ನು ಪಡೆದುಕೊಂಡಾಗ ಕೊಠಡಿ ವ್ಯವಸ್ಥಿತವಾಗಿಯೇ ಇತ್ತು. ಆದರೆ ಇಂದು ಕಟ್ಟಡದ ಈ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಛಾವಣಿ ಕಾಂಕ್ರಿಟ್ ಬೀಳುತ್ತಿದೆ. ಬಾಡಿಗೆ ನೀಡಿದವರೇ ಕಚೇರಿ ತೆರವಿಗೆ ಹಲವು ಬಾರಿ ಸೂಚಿ ಸಿದ್ದರೂ ಇಲಾಖೆ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ.
ಜಾಗವಿದ್ದರೂ ಕಟ್ಟಡವಿಲ್ಲ
ವೇಣೂರು ಕಂದಾಯ ನಿರೀಕ್ಷಕರ ಕಚೇರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ದಾಗ ದುರಸ್ತಿ ಕಾರ್ಯ ಮಾಡುವ ಬದಲು 2004ಲ್ಲಿ ಬಾಡಿಗೆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ನಾಡ ಕಚೇರಿಗೆ ಸಂಬಂಧಿಸಿ 40 ಸೆಂಟ್ಸ್ ಜಾಗವಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕಿದೆ.
– ಪದ್ಮನಾಭ ವೇಣೂರು