ವಿಟ್ಲ : ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವು
Team Udayavani, Nov 14, 2019, 6:54 PM IST
ವಿಟ್ಲ: ಮಕ್ಕಳ ದಿನಾಚರಣೆ ದಿನದಂದೇ 9ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಕೋಟಿಕೆರೆಯಲ್ಲಿ ಗುರುವಾರ ಸಂಭವಿಸಿದೆ.
ವಿಟ್ಲಪಡ್ನೂರು ಗ್ರಾಮದ ಕಡಂಬು ನಿವಾಸಿ ಜುಬೈದಾ ಅವರ ಪುತ್ರ, ವಿಟ್ಲದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಶ್ವದ್ ಅಹಮ್ಮದ್(14) ಮೃತಪಟ್ಟ ವಿದ್ಯಾರ್ಥಿ. ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯಲ್ಲಿ ಹಲವು ಮಂದಿ ಈಜಾಡುತ್ತಿದ್ದರು. ಅಶ್ವದ್ ಕೆರೆಯ ಬದಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಆತ ಮುಳುಗುತ್ತಿರುವುದನ್ನು ಕಂಡು ಕೆಲವರು ಕೂಗಿ ಕರೆದಾಗ ಸ್ಥಳೀಯರು ಆತನನ್ನು ಮೇಲೆತ್ತಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಆತ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು, ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಭೇಟಿ ನೀಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.