ಗೋಡೆ ಬರಹಕ್ಕೂ ಅನುಮತಿ ಅಗತ್ಯ
Team Udayavani, Aug 8, 2018, 1:27 PM IST
ಪುತ್ತೂರು : ಖರ್ಚು ವೆಚ್ಚಗಳ ಪಟ್ಟಿಯಲ್ಲಿ ಗೋಡೆ ಬರಹವನ್ನು ಉಲ್ಲೇಖೀಸಬೇಕಾದ ಅಗತ್ಯವಿದೆ. ಆದ್ದರಿಂದ ಅನುಮತಿಪಡೆದುಕೊಳ್ಳುವುದು ಅಗತ್ಯ ಎಂದು ತಹಶೀಲ್ದಾರ್ ಅನಂತಶಂಕರ ಹೇಳಿದರು. ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕಚೇರಿಯ ತಹಶೀಲ್ದಾರ್ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ವಿಷಯ ಪ್ರಸ್ತಾವಿಸಿದ ಪಿಸಿಐ(ಎಂ)ನ ಪಿ.ಕೆ. ಸತೀಶನ್, ಗೋಡೆ ಬರಹಕ್ಕೆ ಅವಕಾಶ ಕೊಡಬೇಕು. ಇದಕ್ಕೆ ಅನುಮತಿ ಪಡೆದುಕೊಳ್ಳುವ ಅಗತ್ಯ ಇಲ್ಲವಲ್ಲ ಎಂದರು. ಪ್ರತಿಕ್ರಿಯಿಸಿದ ಚುನಾವಣಾ ಖರ್ಚು- ವೆಚ್ಚಗಳ ಅಧಿಕಾರಿ ವಿಷ್ಣುನಾಥ್, ಗೋಡೆ ಬರಹಕ್ಕೂ ಕನಿಷ್ಠ ಖರ್ಚನ್ನು ಉಲ್ಲೇಖ ಮಾಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಇತರ ಅಧಿಕಾರಿಗಳು, ಖರ್ಚನ್ನು ಉಲ್ಲೇಖ ಮಾಡಬೇಕಾದರೆ, ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಆಗುತ್ತದೆ ಎಂದರು. ಪಿ.ಕೆ. ಸತೀಶನ್ ಮಾತನಾಡಿ, ಗೋಡೆ ಬರಹಕ್ಕೆ ಅನುಮತಿ ಪಡೆದುಕೊಳ್ಳಬೇಕು ಎಂದು ಎಲ್ಲೂ ಇಲ್ಲ. ಈ ವಿಷಯದಲ್ಲಿ ಕರ್ನಾಟಕ ಪೊಲೀಸ್ ಆ್ಯಕ್ಟ್ನ ಒಂದು ಅಂಶವನ್ನು ಚುನಾವಣ ಆಯೋಗ ಪಡೆದುಕೊಂಡಿದೆಯಷ್ಟೇ. ಆಯೋಗವೂ ಸ್ವತಂತ್ರವಾಗಿ ಇದರ ಬಗ್ಗೆ ಉಲ್ಲೇಖ ಮಾಡಿಲ್ಲ.