ವಿಟ್ಲ: ಮಹಿಳೆ ಮನೆಗೆ ತೆರಳುವ ರಸ್ತೆ ಅಗೆದು ಹಾಕಿ, ನಿಂದನೆ: ತಹಶೀಲ್ದಾರ್ಗೆ ದೂರು
Team Udayavani, Aug 18, 2022, 7:16 PM IST
ವಿಟ್ಲ: ಬಿಳಿಯೂರು ಗ್ರಾಮದ ಕೋಡ್ಲೆಯ ಮನೆಗೆ ಹೋಗುವ ಸಂಪರ್ಕ ರಸ್ತೆಯನ್ನು ಮುಚ್ಚಿರುವ ಬಗ್ಗೆ ಬಂಟ್ವಾಳ ತಹಶೀಲ್ದಾರ್ಗೆ ಮಹಿಳೆಯೋರ್ವರು ದೂರು ನೀಡಿದ್ದಾರೆ.
ಗಂಗಾವತಿ ದೂರು ನೀಡಿದ ಮಹಿಳೆ. ಅವರ ಪತಿ ಉದ್ಯೋಗ ನಿಮಿತ್ತ ಮುಂಬಯಿಯಲ್ಲಿದ್ದಾರೆ.
ಅವರು 2014ರ ಕ್ರಯ ಪತ್ರದ ಪ್ರಕಾರ ಜಾಗವನ್ನು ಖರೀದಿಸಿ, 15 ಸೆಂಟ್ಸ್ ಜಾಗವನ್ನು ಭೂಪರಿವರ್ತನೆ ಮಾಡಿಸಿಕೊಂಡು ವಾಸದ ಉದ್ದೇಶಕ್ಕೆ ತಾತ್ಕಾಲಿಕ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ ಸಂಪರ್ಕ ಕಲ್ಪಿಸುವ 12 ಅಡಿ ಅಗಲದ ರಸ್ತೆಯನ್ನು ಜು. 27ರಂದು ಜೆಸಿಬಿ ಮೂಲಕ ಅಗೆದು ಹಾಕಲಾಗಿದೆ. ಇದನ್ನು ಆಕ್ಷೇಪಿಸಲು ಹೋದ ವೇಳೆ 15 ಮಂದಿ ಸ್ಥಳದಲ್ಲಿ ಸೇರಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ 112ಗೆ ಕರೆ ಮಾಡಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಅಲ್ಲದೇ ಅಕ್ರಮ ಕಾರ್ಯ ಮುಂದುವರಿಸಿದ್ದಾರೆ. ಒಂಟಿ ಮಹಿಳೆಯಾದ ತನಗೆ ವಾಹನ ಸಂಚಾರಕ್ಕೂ ಅವಕಾಶವಿಲ್ಲದೇ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.