ಹದಗೆಟ್ಟ ಒಳ ರಸ್ತೆಗಳು: ಸಂಚಾರವೇ ಕಷ್ಟ
Team Udayavani, Aug 31, 2021, 3:00 AM IST
ರಸ್ತೆಗಳು ಕೂಡ ಗ್ರಾಮೀಣಾಭಿವೃದ್ಧಿಯ ಸಂಕೇತ. ಬಡಗ-ತೆಂಕ ಕಜೆಕಾರು ಗ್ರಾಮಗಳ ಬಹುತೇಕ ಭಾಗಗಳ ಒಳ ರಸ್ತೆಗಳು ಡಾಮರು ರಸ್ತೆಗಳಾಗಿ ನಿರ್ಮಾಣವಾಗಬೇಕಿದೆ. ಈ ಕುರಿತು ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ ಬೆಳಕು ಚೆಲ್ಲುವ ಪ್ರಯತ್ನ.
ಪುಂಜಾಲಕಟ್ಟೆ: ಬಡಗ ಕಜೆಕಾರು ಗ್ರಾಮ ಪಂಚಾಯತ್ನಲ್ಲಿ ಬಡಗ-ತೆಂಕ ಕಜೆಕಾರು ಎರಡು ಗ್ರಾಮಗಳಿದ್ದು, ರಸ್ತೆ ಅಭಿವೃದ್ಧಿ ಸಹಿತ ಹಲವಾರು ಕೊರತೆಗಳು ಸಮಗ್ರ ಅಭಿವೃದ್ಧಿ ಸಾಧನೆಗೆ ತೊಡಕಾಗಿದೆ. ತೀರಾ ಗ್ರಾಮೀಣ ಪ್ರದೇಶವಾದ ಬಡಗಕಜೆಕಾರು ಗ್ರಾ.ಪಂ.ನ ಕೇಂದ್ರ ಸ್ಥಾನ ಪಾಂಡವರ ಕಲ್ಲುವಿನಲ್ಲಿದೆ. ತಾಲೂಕು ಕೇಂದ್ರ ಸ್ಥಾನ ಬಿ.ಸಿ.ರೋಡ್ನಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ.
ಪಾಂಡವರಕಲ್ಲು ಎಂಬ ಪುಟ್ಟ ಊರು ಪುರಾತನ ಹೆಜ್ಜೆ ಗುರುತುಗಳನ್ನು ಪಡಿಮೂಡಿಸಿದೆ. ಪಾಂಡವರಕಲ್ಲು ಹೆಸರೇ ಸೂಚಿಸುವಂತೆ ಇಲ್ಲಿ ವಿವಿಧ ಆಕಾರಗಳ ಬೃಹತ್ ಗಾತ್ರದ ಕಲ್ಲುಗಳು ಇತಿಹಾಸದ ಪಳಿಯುಳಿಕೆಗಳಂತೆ ಕಾಣಿಸುತ್ತದೆ. ಆದರೆ ಸಂರಕ್ಷಣೆ, ಸಂಶೋಧನೆ ಕೊರತೆಯಿಂದ ಐತಿಹ್ಯಗಳು ಮರೆಯಾಗುತ್ತಿರುವುದು ಗ್ರಾಮಕ್ಕೆ ನಷ್ಟವೇ ಆಗಿದೆ.
ಹದಗೆಟ್ಟ ರಸ್ತೆಗಳು:
ಗ್ರಾ.ಪಂ. ವ್ಯಾಪ್ತಿಯ ಪಾಂಡವರಕಲ್ಲು- ಕೆದಿಲೆ -ಬಾರ್ದೊಟ್ಟು ರಸ್ತೆ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ರಸ್ತೆ ಅಭಿ ವೃದ್ಧಿ ಕಾರ್ಯ ನಡೆಯಬೇಕಾಗಿದೆ. ತೆಂಕಕಜೆಕಾರು ಗ್ರಾಮದ ಪಟೀಲು- ಕಾನದಕೋಡಿಯಿಂದ ಉಳಿಗ್ರಾಮದ ಕಕ್ಯ ಪದವು ಸಂಪರ್ಕಕ್ಕೆ ಒಳ ರಸ್ತೆ ನಿರ್ಮಾಣಕ್ಕೆ ಆಗ್ರಹವಿದೆ. ನೀರಾರಿ-ಬೆರ್ಕಳ ರಸ್ತೆ ಡಾಮರೀಕರಣಗೊಂಡಿದ್ದು, ನರ್ಸಿಕುಮೇರ್ ವರೆಗೆ ರಸ್ತೆ ಪೂರ್ಣಗೊಳ್ಳಬೇಕಾಗಿದೆ. ಬಡಗಕಜೆಕಾರು ಗ್ರಾಮದ ಬ್ಯಾರಿಪಲ್ಕೆಯಿಂದ ಗುಂಡಿದಡ್ಡ ಸಂಪರ್ಕ ರಸ್ತೆ ಅಭಿವೃದ್ಧಿಗೊಳ್ಳಬೇಕು. ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ರಕ್ತೇಶ್ವರಿ ದೈವಸ್ಥಾನದಿಂದ ಕಿಜನಾರುವರೆಗೆ ರಸ್ತೆ ಅಭಿವೃದ್ಧಿಯಾಗಬೇಕಿದೆ. ಬ್ಯಾರಿಪಲ್ಕೆಯಿಂದ ದೊಡೇದುವರೆಗೆ ಸಂಪರ್ಕ ರಸ್ತೆ, ಬ್ಯಾರಿಪಲ್ಕೆಯಿಂದ ಪೆರು ವಾರುವರೆಗೆ ಸಂಪರ್ಕ ರಸ್ತೆ ಅಭಿವೃದ್ಧಿ ಗೊಳ್ಳಬೇಕಿದೆ.ರಕ್ತೇಶ್ವರಿ ಪದವು-ಅಂಗಡಿಬೆಟ್ಟು ರಸ್ತೆ, ಕೋಮಿನಡ್ಕ – ಮಡವು ದೇವಸ್ಥಾನಕ್ಕೆ ತೆರಳುವ ರಸ್ತೆ, ಪೊಸಲಾಯಿ – ಕಾನದ ಕೋಡಿ ರಸ್ತೆ ಹಾಗೂ ಅಡಲಾಟ-ಬರಮೇಲು ರಸ್ತೆ ಅಭಿವೃದ್ಧಿಯಾಗಬೇಕಾಗಿದೆ.
ರಸ್ತೆ ಮೇಲ್ದರ್ಜೆಗೆ ಏರಲಿ:
ಕೋಮಿನಡ್ಕ -ದೆತ್ತಿಮಾರ್ ರಸ್ತೆ, ಅಶ್ವತ್ಥದಡಿ- ಐಂಬಲೋಡಿ ರಸ್ತೆ,ಖಂಡಿಗ-ಗಾಣದಕೊಟ್ಟಿಗೆ ರಸ್ತೆ, ಪಾಂಡವರಕಲ್ಲು -ಮಿತ್ತಲಿಕೆ-ಬಾರ್ದೊಟ್ಟು ರಸ್ತೆ, ಕನೆ ಜಾಲು- ಗುಂಡಿದಡ್ಡ ರಸ್ತೆ ಹಗೂ ಮಡಂತ್ಯಾರು- ಪಾಂಡ ವರ ಕಲ್ಲು-ಕಕ್ಯಪದವು ರಸ್ತೆ ಮೇಲ್ದರ್ಜೆಗೆ ಏರಿಸಬೇಕು.
ಪಶು ವೈದ್ಯಕೀಯ ಆಸ್ಪತ್ರೆ:
ಬಡಗಕಜೆಕಾರು-ತೆಂಕಕಜೆಕಾರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಇಲ್ಲಿಗೆ ಪಶು ವೈದ್ಯಕೀಯ ಆಸ್ಪತ್ರೆ ಅಗತ್ಯವಿದೆ.
ಶೌಚಾಲಯಕ್ಕೆ ಕಾಯಕಲ್ಪ :
ಗ್ರಾ.ಪಂ.ಕೇಂದ್ರ ಸ್ಥಾನ ಪಾಂಡವರಕಲ್ಲುವಿನಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಕಾಯಕಲ್ಪ ಆಗಬೇಕಾಗಿದೆ.
ಅಸಮರ್ಪಕ ಚರಂಡಿ ವ್ಯವಸ್ಥೆ:
ಪಾಂಡವರಕಲ್ಲುವಿನಲ್ಲಿ ಸಾರ್ವಜನಿಕರು ಉಪ ಯೋಗಿಸಿದ ನೀರು ರಸ್ತೆ ಬದಿ ಹರಿಯುತ್ತಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ದುರ್ನಾತ ಬೀರುತ್ತಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಅಥವಾ ಪೈಪ್ ಅಳವಡಿಸಬೇಕಾಗಿದೆ.
ಪ್ರೌಢಶಾಲೆಗೆ ಬೇಡಿಕೆ:
ಪಾಂಡವರಕಲ್ಲು, ತೆಂಕಕಜೆಕಾರು, ಮಾಡಪಲ್ಕೆ ಇಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢಶಾಲೆ ವ್ಯಾಸಂಗಕ್ಕೆ ದೂರ ತೆರಳಬೇಕಾಗಿದೆ. ಆದುದರಿಂದ ಸರಕಾರಿ ಪ್ರೌಢಶಾಲೆ, ಪ.ಪೂ. ತರಗತಿಗೆ ಬಹುಕಾಲದ ಬೇಡಿಕೆ ಇದೆ.
ಘನತ್ಯಾಜ್ಯ ವಿಲೇ ಘಟಕ:
ತೆಂಕಕಜೆಕಾರು ಗ್ರಾಮದ ಸ.ನಂ. 61/11 ರಲ್ಲಿ 1 ಎಕ್ರೆ ಸರ ಕಾರಿ ಸ್ಥಳವನ್ನು ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಗುರುತಿಸಿ, ಕಾದಿರಿಸಲು ಬೇಡಿಕೆಯನ್ನು ಕಂದಾಯ ಇಲಾಖೆಗೆ ಸಲ್ಲಿಸ ಲಾಗಿದೆ. ಸಾರ್ವಜನಿಕ ವಿರೋಧದಿಂದ ಘಟಕ ನಿರ್ಮಾಣ ವಾಗದೆ ಘನ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಯಾಗಿದೆ.
ಸಾರ್ವಜನಿಕ ಶ್ಮಶಾನ :
ಮೊಡತಲಿಕೆ ಎಂಬಲ್ಲಿ 75 ಸೆಂಟ್ಸ್ ಸ್ಥಳದಲ್ಲಿ ಸಾರ್ವಜನಿಕ ಶ್ಮಶಾನ ನಿರ್ಮಾಣಗೊಂಡಿದ್ದು, ಮೂಲ ಸೌಕರ್ಯ ಸಹಿತ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ.
ನ್ಯಾಯಬೆಲೆ ಅಂಗಡಿ:
ಕಜೆಕಾರು ವ್ಯಾವಸಾಯಿಕ ಸಹಕಾರಿ ಸಂಘ ಬಡಗಕಜೆಕಾರುವಿನ ಪಾಂಡವರಕಲ್ಲುವಿನಲ್ಲಿದ್ದು, ಪಡಿತರ, ರಾಸಾಯಿನಿಕ ಗೊಬ್ಬರ ಖರೀದಿಗೆ ತೆಂಕಕಜೆಕಾರಿನ ಜನತೆ ದೂರ ಪ್ರಯಾಣಿಸಬೇಕಾಗಿದೆ. ಮಾಡಪಲ್ಕೆಯಲ್ಲಿ ನ್ಯಾಯಬೆಲೆ ಅಂಗಡಿ ಶಾಖೆ ತೆರೆಯಬೇಕೆಂಬ ಆಗ್ರಹವಿದೆ.
ಇತರ ಬೇಡಿಕೆಗಳೇನು?:
- ಮಿತ್ತಳಿಕೆ ಅಂಗನವಾಡಿ ಕೇಂದ್ರ ದುರಸ್ತಿ
- ಕೆದಿಮೇಲು ಹಾಗೂ ಮಾಡಪಲ್ಕೆ ಅಂಗನವಾಡಿ ಕೇಂದ್ರ, ಬಡಗಕಜೆಕಾರು ಶಾಲೆಗೆ ಆವರಣ ಗೋಡೆ
- ಅಂಬ್ಡೇಲು ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ.
- ಸರಕಾರಿ ಬಸ್ ಸೇವೆ.
- ಮಾಡಪಲ್ಕೆಯಲ್ಲಿ ಹಾಲು ಸೊಸೈಟಿ
- ಪ್ರಾಥಮಿಕ ಉಪ ಆರೋಗ್ಯ ಕೇಂದ್ರ
- ಎಟಿಎಂ ಕೇಂದ್ರ
– ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ