ಪೇಜಾವರ ಶ್ರೀಗಳ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕ ಹೊರ ತರುವ ಯೋಜನೆ; ಮಾಹಿತಿಗಾಗಿ ಮನವಿ
Team Udayavani, Aug 4, 2020, 7:49 AM IST
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕವನ್ನು ಹೊರ ತರುವ ಯೋಜನೆ ಇದೆ. ಇವರಿಗೆ ಸಂಬಂಧಿಸಿದ ವಸ್ತುಗಳು, ಅಪೂರ್ವ ಮಾಹಿತಿಗಳನ್ನು ಕಳುಹಿಸಿಕೊಡಲು ವಿನಂತಿಸಲಾಗಿದೆ.
ಸ್ವಾಮೀಜಿಯವರು ಊರುಗಳಿಗೆ ಭೇಟಿ ನೀಡಿದಾಗ ಅವರು ಮಾಡಿದ ಉಪನ್ಯಾಸಗಳು, ಪತ್ರಿಕಾ ಹೇಳಿಕೆಗಳು, ಸಂದರ್ಶನಗಳು, ವಿಡಿಯೋಗಳು ಅವರಿಗೆ ಸಂಬಂಧಿಸಿದ ಮಾಹಿತಿಗಳು, ಅವರ ತಪಸ್ಸಿನ ಬಲದಿಂದ ನಡೆದ ಅಪೂರ್ವ ಅತಿಮಾನುಷ ಘಟನೆಗಳನ್ನು, ಪಾದುಕೆ ಮೊದಲಾದ ವಸ್ತುಗಳನ್ನು ಕಳುಹಿಸಿಕೊಡಲು ತಿಳಿಸಲಾಗಿದೆ.
ಅನೇಕರು ದೇಶದ ಅನೇಕ ಕಡೆ ಗಳಿಂದ ಅವರಕುರಿತ, ಕೃತಿಗಳನ್ನು, ಲೇಖನಗಳನ್ನು ಅಪೇಕ್ಷಿಸುತ್ತಿದ್ದಾರೆ. ಈಗ ಅವೆಲ್ಲವನ್ನೂ ಶೀಘ್ರವಾಗಿ ಸಂಗ್ರಹಿಸುವ ಕೆಲಸವಾಗುತ್ತಿದೆ. ಶ್ರೀಪಾದರ ಕುರಿತ ಬೇರೆ ಬೇರೆ ಧಾರ್ಮಿಕ ವ್ಯಕ್ತಿಗಳು, ಕವಿಗಳು, ಸಾಹಿತಿಗಳು, ರಾಜಕಾರಣಿಗಳು, ವಿಜ್ಞಾನಿಗಳು ಸೇರಿದಂತೆ ಇನ್ನಿತರ ಯಾವುದೇ ಕ್ಷೇತ್ರದವರ ಲೇಖನಗಳ ಸಂಗ್ರಹವಿದ್ದರೆ, ಅಥವಾ ಶ್ರೀಪಾದರೇ ಸ್ವತಃ ಆಯಾ ಸಂದರ್ಭಗಳಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬರೆದ ಲೇಖನಗಳ ಸಂಗ್ರಹವಿದ್ದರೆ ಮತ್ತು ತಾವೇ ಯಾರಾದರೂ ಶ್ರೀಪಾದರ ಮೇಲೆ ಹಾಡುಗಳನ್ನು, ಲಾವಣಿಗಳನ್ನು, ಕೃತಿಗಳನ್ನು ರಚಿಸಿದ್ದರೆ ದಯವಿಟ್ಟು ಕಳುಹಿಸಿಕೊಡಿ. ಅವೆಲ್ಲವೂ ಒಂದೇ ಕಡೆಯಲ್ಲಿ ಸಂಗ್ರಹವಾಗುತ್ತವೆ.
ಸಂಪರ್ಕ ವಿಳಾಸ: ಸಿ.ಎಚ್. ಬದರಿ ಆಚಾರ್ಯ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪೆ ರಸ್ತೆ, ಬೆಂಗಳೂರು (ದೂ: 9480620304).