ಉಡುಪಿ ಜಿಲ್ಲೆಯ ಗ್ರೇ ವಾಟರ್ ಮ್ಯಾನೇಜ್ಮೆಂಟ್ ಗೆ ಕಮ್ಯೂನಿಟಿ ಸೋಕ್ಪಿಟ್
40 ಗ್ರಾ.ಪಂ.ಗಳಲ್ಲಿ ಶೀಘ್ರ ಅನುಷ್ಠಾನ
Team Udayavani, Dec 13, 2021, 5:48 PM IST
ಸಾಂದರ್ಭಿಕ ಚಿತ್ರ.
ವಿಶೇಷ ವರದಿ- ಉಡುಪಿ: ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯ ಮನೆಗಳ ಪಾತ್ರೆ, ಬಟ್ಟೆ ತೊಳೆದ ಕಲುಷಿತ ನೀರನ್ನು ಶುದ್ಧೀಕರಿಸಲು ಸೋಕ್ ಪಿಟ್, ಕಮ್ಯೂನಿಟಿ ಸೋಕ್ಪಿಟ್ (ಸಮುದಾಯ) ನಿರ್ಮಾಣಕ್ಕೆ ಜಿ.ಪಂ. ಮುಂದಾಗಿದೆ.
ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ಜಿ.ಪಂ. ನಡೆಸಿರುವ ಮನೆ ಮನೆ ಸಮೀಕ್ಷೆ ಶೇ.90ರಷ್ಟು ಮುಗಿದಿದೆ. ಪ್ಲಾಸ್ಟಿಕ್ ಸಹಿತವಾಗಿ ಒಣ ಕಸಗಳನ್ನು ಗ್ರಾ.ಪಂ.ಗೆ ನೀಡಬೇಕು ಎಂಬ ನಿರ್ದೇಶನವಿದ್ದರೂ ಶೇ.45ರಷ್ಟು ಮನೆಗಳಲ್ಲಿ ಇದರ ಪಾಲನೆಯಾಗುತ್ತಿಲ್ಲ. ಹಸಿ ಕಸಗಳನ್ನು ಮನೆ ಪರಿಸರದ ತೋಟಕ್ಕೆ ಹಾಕುವುದು, ಕಾಂಪೋಸ್ಟ್ ಮಾಡುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ, ಗ್ರೇ ವಾಟರ್ ಮ್ಯಾನೇಜ್ಮೆಂಟ್ (ಮನೆಯ ಕಲುಷಿತ ನೀರಿನ ನಿರ್ವಹಣೆ) ಸರಿಯಾಗಿ ಆಗದೇ ಇರುವುದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ಸಮರ್ಪಕ ನಿರ್ವಹಣೆ
ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯ ಮನೆಗಳ ಬಟ್ಟೆ, ಪಾತ್ರೆ, ಸ್ನಾನ ನೀರು, ತರಕಾರಿ ಇತ್ಯಾದಿಗಳನ್ನು ತೊಳೆದ ತ್ಯಾಜ್ಯ ನೀರಿನ ನಿರ್ವಹಣೆ ಸರಿಯಾದ ಪ್ರಮಾಣದಲ್ಲಿ ನಡೆಸಲು ಸೋಕ್ ಪಿಟ್ಗಳ ನಿರ್ಮಾಣ ಮಾಡಲಾಗುತ್ತಿದೆ. ಆಯಾ ಮನೆಗಳಲ್ಲಿ ಜಾಗದ ಲಭ್ಯತೆ ಆಧಾರದಲ್ಲಿ ಸೋಕ್ ಪಿಟ್ ನಿರ್ಮಾಣಕ್ಕೂ ಜಿ.ಪಂ. ಅವಕಾಶ ಮಾಡಿಕೊಡಲಿದೆ. ಮನೆಗಳಲ್ಲಿ ಸಾಧ್ಯವಾಗದೆ ಇದ್ದಾಗ ಸಮುದಾಯ ಸೋಕ್ಪಿಟ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಐದಾರು ಮನೆಗಳ ತ್ಯಾಜ್ಯ ನೀರು ಒಂದೆಡೆ ಶೇಖರಿಸಿ ಸಮರ್ಪಕ ನಿರ್ವಹಣೆ ಮಾಡಲಾಗುತ್ತದೆ. ಗ್ರೇ ವಾಟರ್ ಮ್ಯಾನೇಜ್ಮೆಂಟ್ ನಿಂದ ಶುದ್ಧೀಕರಿಸಿದ ನೀರಿನ ಮರು ಬಳಕೆ ಹೇಗೆ ಅಥವಾ ಅಂತರ್ಜಲಕ್ಕೆ ಬಿಡಬಹುದಾದ ಸಾಧ್ಯತೆ ಬಗ್ಗೆಯೂ ಯೋಚನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಲ್ಯಾಕ್ ವಾಟರ್ ಮ್ಯಾನೇಜ್ಮೆಂಟ್
ಗ್ರಾ.ಪಂ. ವ್ಯಾಪ್ತಿಯ ಮನೆಗಳಲ್ಲಿ ಗ್ರೇ ವಾಟರ್ ಮ್ಯಾನೇಜೆ¾ಂಟ್ ವ್ಯವಸ್ಥೆ ಸಮರ್ಪಕವಾಗಿ ಜಾರಿಗೆ ಬರುತ್ತಿದ್ದಂತೆ ಬ್ಲ್ಯಾಕ್ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆಗೆ ಒತ್ತು ಸಿಗಲಿದೆ. ಮನೆಯ ಶೌಚಾಲಯದ ತ್ಯಾಜ್ಯ (ಮಲ ತ್ಯಾಜ್ಯ)ವನ್ನು ಆಯಾ ಮನೆಗಳಲ್ಲಿ ಇರುವ ಸಿಂಗಲ್ ಪಿಟ್ ಸೇರುತ್ತದೆ. ಸಿಂಗಲ್ ಪಿಟ್ಗಳ ಮಲ ತ್ಯಾಜ್ಯ ಐದರಿಂದ 10 ವರ್ಷಗಳಲ್ಲಿ ಭರ್ತಿಯಾಗುತ್ತದೆ. ಭರ್ತಿಯಾದ ಅನಂತರ ವಿಲೇವಾರಿ ವೈಜ್ಞಾನಿಕವಾಗಿ ಆಗುವುದಿಲ್ಲ. ಅದನ್ನು ನದಿಗೆ ಬಿಡುವುದು ಅಥವಾ ಇನ್ಯಾವುದೋ ಸ್ಥಳದಲ್ಲಿ ಹಾಕಲಾಗುತ್ತದೆ. ಇದನ್ನು ತಪ್ಪಿಸಲು ಜಿ.ಪಂ. ನಿಂದಲೇ ಸಕ್ಕಿಂಗ್-ಜಟ್ಟಿಂಗ್ ಮೆಷಿನ್ ಇಟ್ಟುಕೊಂಡು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎರಡು ಘಟಕ ನಿರ್ಮಾಣವಾಗುತ್ತಿದೆ. ಕುಕ್ಕುಂದೂರಿನಲ್ಲಿರುವ ಘಟಕ ಕಾರ್ಕಳ ಮತ್ತು ಹೆಬ್ರಿ ಭಾಗಕ್ಕೆ ಹಾಗೂ 80 ಬಡಗಬೆಟ್ಟಿನಲ್ಲಿ ನಿರ್ಮಾಣವಾಗುವ ಘಟಕ ಉಡುಪಿ, ಕಾಪು, ಬ್ರಹ್ಮಾವರ ಭಾಗಕ್ಕೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗೋವಾ: ಉದ್ಯೋಗ ಹಗರಣದ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್
40 ಗ್ರಾ.ಪಂ. ಟಾರ್ಗೆಟ್
ಜಿಲ್ಲೆಯಲ್ಲಿ 159 ಗ್ರಾ.ಪಂ.ಗಳಿವೆ. ಮೊದಲ ಹಂತದಲ್ಲಿ 40 ಗ್ರಾ.ಪಂ.ಗಳಲ್ಲಿ ಗ್ರೇ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಜಾರಿಗೆ ಬರಲಿದೆ. ಎಲ್ಲೆಲ್ಲಿ ಚರಂಡಿ ಮೂಲಕ ತ್ಯಾಜ್ಯ ನೀರು ಹೋಗುತ್ತದೆ ಎಂಬುದನ್ನು ಗುರುತಿಸಲಾಗಿದೆ. ಜತೆಗೆ ಚರಂಡಿ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಮನೆಯ ಪರಿಸರದಲ್ಲೇ ತ್ಯಾಜ್ಯ ನೀರು ನಿಂತು ಸೊಳ್ಳೆ ಉತ್ಪತ್ತಿಗೂ ಕಾರಣವಾಗುತ್ತಿರುವುದು ತಿಳಿದು ಬಂದಿದೆ. ಗ್ರೇ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಮೂಲಕ ಮೊದಲಿಗೆ 40 ಗ್ರಾ.ಪಂ.ಗಳಲ್ಲಿ ಸೋಕ್ ಪಿಟ್, ಸಮುದಾಯ ಸೋಕ್ ಪಿಟ್ ನಿರ್ಮಿಸಲಾಗುತ್ತದೆ ಅನಂತರ ಇದನ್ನು ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಗೂ ವಿಸ್ತರಿಸಲಾಗುತ್ತದೆ ಎಂದು ಜಿ.ಪಂ. ಸಿಇಒ ಡಾ| ನವೀನ್ ಭಟ್ ವಿವರ ನೀಡಿದ್ದಾರೆ.
ಶೇ.90ರಷ್ಟು ಪೂರ್ಣ
ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ನಡೆಸಿದ ಮನೆ ಮನೆ ಸಮೀಕ್ಷೆ ಶೇ.90ರಷ್ಟು ಪೂರ್ಣಗೊಂಡಿದೆ. ಗ್ರೇ ವಾಟರ್ ಮ್ಯಾನೇಜ್ಮೆಂಟ್ ಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ಪಂಚಾಯತ್ಗಳನ್ನು ಗುರುತಿಸಲಾಗಿದೆ. ಅನಂತರ ಬ್ಲ್ಯಾಕ್ ವಾಟರ್ ಮ್ಯಾನೇಜ್ಮೆಂಟ್ ಗೆ ಒತ್ತು ನೀಡಲಾಗುತ್ತದೆ.
-ಡಾ| ನವೀನ್ ಭಟ್,
ಸಿಇಒ, ಜಿ.ಪಂ., ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ