ಹಡಗಿನಲ್ಲಿ ಸಿಲುಕಿದ್ದವರು ಊರಿಗೆ
Team Udayavani, May 3, 2020, 8:39 AM IST
ಸಾಂದರ್ಭಿಕ ಚಿತ್ರ
ಪಡುಬಿದ್ರಿ: ಲಾಕ್ಡೌನ್ನಿಂದ ತೊಂದರೆಗೊಳಗಾಗಿ 40 ದಿನಗಳಿಂದ ಸಮುದ್ರದಲ್ಲಿಯೇ ಅಲೆದ ಟುಯಿ ಕಂಪೆನಿಗೆ ಸೇರಿದ ಮರೆಲ್ಲಾ ಕ್ರೂಸೆಸ್ ಹಡಗಿನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರು ಆಕಾಶಭವನದ ಲಿವಿಟ್ ಡಿ’ಸೋಜಾ, ಕೋಡಿಕಲ್ನ ಹರಿಪ್ರಸಾದ್ ರಾವ್ ಅವರು ಮುಂಬಯಿ ಮೂಲಕ ವಿಶೇಷ ಬಸ್ನಲ್ಲಿ ಆಗಮಿಸಿ ಉಡುಪಿ ಜಿಲ್ಲಾ ಗಡಿ ದಾಟಿ ತವರೂರಿಗೆ ಶುಕ್ರವಾರ ತಲುಪಿದ್ದಾರೆ. ಅವರು ಮನೆಗೆ ತೆರಳದೆ ಕಾವೂರಿನ ಕೊಠಡಿಯೊಂದರಲ್ಲಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಭಾರತದ 145 ಮಂದಿ ಸಹಿತ ವಿವಿಧ ರಾಷ್ಟ್ರಗಳ 600 ಮಂದಿ ಸಿಬಂದಿಯಿದ್ದ ಹಡಗು ಲಾಕ್ಡೌನ್ನಿಂದ ಬಂದರು ಸೇರಲಾಗದೆ ಮಾ. 14ರಿಂದ ಸಮುದ್ರದಲ್ಲಿಯೇ ಸಿಲುಕಿತ್ತು. ಈ ಮಧ್ಯೆ ಚೆನ್ನೈ, ಮಂಗಳೂರು, ಮುಂಬಯಿಗಳಲ್ಲಿ ಬಂದರು ಪ್ರವೇಶಿಸಲು ಪ್ರಯತ್ನಿಸಿ ದರೂ ಅವಕಾಶ ಸಿಗಲಿಲ್ಲ. ಹಾಗಾಗಿ ಹಡಗಿನಲ್ಲಿದ್ದ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿ ಊರಿಗೆ ತೆರಳಲು ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದರು. ಕೊನೆಗೆ ಎ. 23ರಂದು ಮುಂಬಯಿ ಬಂದರಿನಲ್ಲಿ ಅವರನ್ನು ಇಳಿಸಲಾಯಿತು. ಬಳಿಕ ಅಂಧೇರಿಯಲ್ಲಿ 5 ದಿನಗಳ ಕಾಲ ಕ್ವಾರಂಟೈನ್ ಮಾಡಲಾಯಿತು. ಎಲ್ಲರ ತಪಾಸಣೆ ವರದಿ ನೆಗೆಟಿವ್ ಬಂದ ಬಳಿಕ ಎ. 30ರಂದು ಬಸ್, ಕಾರು ಗಳಲ್ಲಿ ಅವರವರ ಊರುಗಳಿಗೆ ಕಳುಹಿಸಲಾಯಿತು.
ಬೆಳಗಾವಿಯ ರಾಹುಲ್, ಉ.ಕ. ದಾಂಡೇಲಿಯ ಗ್ಲೋಬಿನ್, ಮೈಸೂರಿನ ರಕ್ಷಿತ್, ಕೇರಳ, ತಮಿಳುನಾಡಿನ ತಲಾ ಓರ್ವರು ಸೇರಿ 23 ಮಂದಿ ಈ ಬಸ್ನಲ್ಲಿ ಆಗಮಿಸಿದ್ದರು. ದಾರಿಯಲ್ಲಿ 20 ಕಡೆಗಳಲ್ಲಿ ಅವರ ತಪಾಸಣೆ ನಡೆಸ ಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಪ್ರತಿಯೊಬ್ಬರ ವಿವರ ಪಡೆಯಲಾಗಿದೆ ಎಂದು ಹರಿಪ್ರಸಾದ್ ರಾವ್ ವಿವರಿಸಿದ್ದಾರೆ.
ಆತಂಕ ತಂದ ಉಷ್ಣಾಂಶ ಹಡಗು ಸಿಬಂದಿ ದ.ಕ. ಜಿಲ್ಲೆ ಪ್ರವೇ
ಶಿಸುವ ಹೆಜಮಾಡಿ ತಪಾಸಣೆ ಕೇಂದ್ರದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಸಿಬಂದಿ ಆರೋಗ್ಯ ತಪಾಸಣೆ ನಡೆಸಿ
ದಾಗ ದೇಹದ ಉಷ್ಣತೆ ಹೆಚ್ಚು ತೋರಿಸಿದ್ದು ಆತಂಕಕ್ಕೆ ಕಾರಣವಾಯಿತು. ಒಂದು ಗಂಟೆ ಕಾಲ ವಿಶ್ರಮಿಸಲು ಹೇಳಿ ಮತ್ತೆ ತಪಾಸಣೆ ಮಾಡಿದಾಗ ಸರಿಯಾದ ಉಷ್ಣತೆ ತೋರಿಸಿದ್ದರಿಂದ ತೆರಳಲು ಅವಕಾಶ ಕಲ್ಪಿಸಲಾಯಿತು.