ಶಿರ್ವ: ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
Team Udayavani, May 28, 2021, 12:45 PM IST
ಶಿರ್ವ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಶಿರ್ವಸಮುದಾಯ ಆರೋಗ್ಯ ಕೇಂದ್ರದ ಬಳಿಯ ಕೋವಿಡ್ ಲಸಿಕಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿರ್ವಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುತ್ತಿರುವ ಸಾಮಾನ್ಯ ರೋಗಿಗಳು ಮತ್ತು ಕೋವಿಡ್ ಪರೀಕ್ಷೆಗೆ ಬರುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಸೋಂಕು ಹರಡದಂತೆ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಲಸಿಕೆ ಕೇಂದ್ರವನ್ನು ಮೇ.28ರಿಂದ ಸಮೀಪದ ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಲಸಿಕೆ ಕೊರತೆ ಇಲ್ಲ. ಇಂದು ಇಲ್ಲಿ 200 ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿದಿನ ಲಸಿಕೆ ಲಭ್ಯತೆಯ ಬಗ್ಗೆ ಮಾಧ್ಯಮದ ಮೂಲಕ ತಿಳಿಸಲಾಗುತ್ತದೆ. ಸಾರ್ವಜನಿಕರು ಎಚ್ಚರಿಕೆಯಿಂದಿದ್ದು , ಕೊರೊನಾವನ್ನು ಲಸಿಕೆ ಕೇಂದ್ರದಿಂದ ಮನೆಗೆ ತೆಗೆದುಕೊಂಡು ಹೋಗದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಲಸಿಕೆ ಪಡೆದು ಮನೆಗೆ ತೆರಳಬೇಕೆಂದು ಮನವಿ ಮಾಡಿದರು.
ಕೊರೊನಾ ನಿಯಂತ್ರಿಸುವಲ್ಲಿ ಟಾಸ್ಕ್ ಪೋರ್ಸ್ ಸಮಿತಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಶಿರ್ವಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದರು.ಜಿಲ್ಲಾಧಿಕಾರಿಯವರು ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಕೋವಿಡ್ ನಿಯಂತ್ರಿಸಲು ಬಿಗಿ ಕ್ರಮ ಕೈಗೊಳ್ಳಲು ಸ್ಥಳಿಯಾಡಳಿತಕ್ಕೆ ಸೂಚಿಸಿದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಗಾಯತ್ರಿ,ಗ್ರಾ.ಪಂ. ಸದಸ್ಯರಾದ ಹಸನಬ್ಬ ಶೇಖ್, ಪ್ರವೀಣ್ ಪೂಜಾರಿ, ರತನ್ ಶೆಟ್ಟಿ, ಶ್ರೀನಿವಾಸ ಶೆಣೈ ,ಫಾರೂಕ್,ಶಿರ್ವ ಗ್ರಾಮ ಕರಣಿಕ ವಿಜಯ್, ಸಹಾಯಕ ಭಾಸ್ಕರ್, ಗ್ರಾ.ಪಂ. ಸಿಬಂದಿ, ಆರೋಗ್ಯ ಸಹಾಯಕಿಯರು, ಅಶಾ ಕಾರ್ಯಕರ್ತೆಯರು, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು,ಆಸ್ಪತ್ರೆಯ ಲಸಿಕೆ ಕಾರ್ಯಕ್ರಮದ ಸ್ವಯಂಸೇವಕರು ಉಪಸ್ಥಿತರಿದ್ದರು.