ಪ್ಲಾಸ್ಟಿಕ್ ರಹಿತ ಗೂಡುದೀಪಕ್ಕೆ ಬೇಡಿಕೆ
ಗರಿಗೆದರಿದ ದೀಪಾವಳಿ ಸಂಭ್ರಮ ; ಮಾರುಕಟ್ಟೆಗಳಲ್ಲಿ ಭರದ ಖರೀದಿ
Team Udayavani, Nov 13, 2020, 11:10 PM IST
ನಗರದಲ್ಲಿ ಹೂವಿನ ಮಾರಾಟ.
ಉಡುಪಿ:ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಶನಿವಾರದಿಂದ ಸಡಗರ ಎಲ್ಲರ ಮನೆಗಳಲ್ಲಿ ಮನೆಮಾಡಲಿದೆ. ಕೆಎಂ ಮಾರ್ಗ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ತರಕಾರಿ, ಹೂವು, ಹಣ್ಣುಗಳ ಮಾರಾಟಗಾರರು ಇದ್ದು, ಸಾರ್ವಜನಿಕರು ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದವು. ಹಲವೆಡೆ ಹಸುರು ಪಟಾಕಿ ಮಳಿಗೆಗಳನ್ನು ತೆರೆಯ ಲಾಗಿದೆ. ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಜನರು ಮಾರುಕಟ್ಟೆ ಪ್ರವೇಶಿಸಿದ್ದಾರೆ.
ಗೂಡುದೀಪಕ್ಕೆ ಬೇಡಿಕೆ
ನಗರದಲ್ಲಿ ಈ ಬಾರಿ ಬಣ್ಣ ಬಣ್ಣದ ಗೂಡುದೀಪಗಳು ಲಗ್ಗೆ ಇಟ್ಟಿವೆ. ಜನರು ಹೆಚ್ಚಾಗಿ ಪ್ಲಾಸ್ಟಿಕ್ರಹಿತ ಗೂಡುದೀಪಗಳ ಖರೀದಿಗೆ ಮುಂದಾಗಿದ್ದಾರೆ. ಕಾಗದ ರಹಿತ ಗೂಡುದೀಪ 300 ರೂ. ನಿಂದ 500 ರೂ. ವರೆಗಿನವು ಇವೆ. ಬಣ್ಣದ ಪಾಸ್ಟಿಕ್ ಕಾಗದ ಗಮನಸೆಳೆದರೂ, ಜನರು
ಪ್ಲಾಸ್ಟಿಕ್ ರಹಿತ ಗೂಡುದೀಪ ಖರೀದಿಸಲು ಆದ್ಯತೆ ನೀಡಿದ್ದಾರೆ ಎಂದು ಅಂಗಡಿಯೊಂದರ ಮಾಲಕ ವಿಜಯ ಅವರು ಹೇಳುತ್ತಾರೆ.
ತರಕಾರಿ ಬೆಲೆ ಇಳಿಕೆ
ಮಾರುಕಟ್ಟೆಗೆ ತರಕಾರಿ ಪೂರೈಕೆ ಯಾಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಒಂದು ಕೆ.ಜಿ. ಟೊಮೆಟೋಗೆ 40 ರೂ., ಬೀನ್ಸ್ 35 ರೂ., ಆಲೂಗಡ್ಡೆ 50 ರೂ., ಬೀಟ್ರೂಟ್ 40 ರೂ., ಹಾಗಲಕಾಯಿ 35 ರೂ., ಕ್ಯಾರೇಟ್ 70 ರೂ.ಗೆ ಮಾರಾಟ
ವಾಗುತ್ತಿದೆ. ಚೌತಿ, ನವರಾತ್ರಿಗೆ ಹೋಲಿಕೆ ಮಾಡಿದರೆ ಈಬಾರಿ ದೀಪಾವಳಿಗೆ ತರಕಾರಿ ಬೆಲೆ ಕಡಿಮೆಯಾಗಿದೆ. ಹೂವಿನ ದರ ಏರಿಕೆ ಈ ಬಾರಿ ಬೆಂಗಳೂರು, ಹಾಸನ ಸೇರಿ ದಂತೆ ವಿವಿಧ ಜಿಲ್ಲೆಗಳಿಂದ ಉಡುಪಿಗೆ ಬರುತ್ತಿದ್ದ ಹೂವಿನ ಪ್ರಮಾಣ ಕಡಿಮೆ ಯಾಗಿದೆ. ಇದರಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ 80 ರೂ., ಜೀನಿಯಾ 70 ರೂ., ಗೊಂಡೆ 100 ರೂ., ಬಿಳಿ ಸೇವಂತಿಗೆ 100 ರೂ., ಗುಲಾಬಿ 100 ರೂ., ಮಾರಿಗೋಲ್ಡ… 120 ರೂ.ಗೆ ಮಾರಾಟವಾಗುತ್ತಿವೆ. ಒಂದು ಮಾರಿನ ಹೂವಿನ ಮೇಲೆ 20 ರೂ. ನಿಂದ 30 ರೂ.ಗೆ ಏರಿಕೆಯಾಗಿವೆ.
ಹಣತೆಗೆ ಬೇಡಿಕೆ
ನಗರದ ವಿವಿಧ ಬೀದಿಗಳಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಒಂದು ಹಣತೆಗೆ 1 ರೂ.ನಿಂದ 5 ರೂ., ಪಿಂಗಾಣಿ ಹಣತೆಗೆ 5 ರಿಂದ 20 ರೂ. ತನಕ ಇದೆ. ಸಾರ್ವಜನಿಕರು ಮೇಣದ ಬತ್ತಿ ಬದಲಾಗಿ ಮಣ್ಣಿನ ಹಣತೆಯನ್ನು ಖರೀದಿಸುತ್ತಿರುವ ದೃಶ್ಯಗಳು ನಗರದಲ್ಲಿ ಕಂಡು ಬಂತು.