ಇನ್ನೂ ಈಡೇರದ ಪೊಲಿಪು ಕಡಲ ತೀರದ ನಿವಾಸಿಗಳ ಬೇಡಿಕೆ
Team Udayavani, Apr 25, 2022, 12:40 PM IST
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡ್ನ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಡಲ್ಕೊರೆತ ಭೀತಿಯಿಂದ ಆತಂಕದಿಂದ ದಿನಕಳೆಯುವಂತಾಗಿದೆ.
ಈ ಪರಿಸರದಲ್ಲಿ ಈ ಹಿಂದೆ ಸಮುದ್ರ ದಡ ದಲ್ಲಿ ಹಾಕಲಾಗಿದ್ದ ತಡೆಗೋಡೆ ತೆರವುಗೊಳಿಸಿ, ಹೊಸತಾಗಿ ಸದೃಢ ತಡೆಗೋಡೆ ನಿರ್ಮಿಸಿಕೊಡು ತ್ತೇವೆ ಎಂದು ವಾಗ್ಧಾನ ನೀಡಿ ಬಳಿಕ ಯಾವುದೇ ರೀತಿಯ ಕಾಮಗಾರಿ ಕೈಗೊಳ್ಳದ ಪರಿಣಾಮ ಪರಿಸರದ 8-10 ಮನೆಗಳು ಮತ್ತು ಹಲವು ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಅಧಿಕಾರಿಗಳು ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಗಮನಕ್ಕೆ ತಂದಾಗ, ಅವರು ಸ್ಥಳಕ್ಕೆ ಭೇಟಿಯಿತ್ತು ಜಿಲ್ಲಾಧಿಕಾರಿ, ಕಾರ್ಯನಿರ್ವಾಹಕ ಅಭಿಯಂತರ, ಗುತ್ತಿಗೆದಾರರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದರು. ಆ ಸಂದರ್ಭ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಭರವಸೆ ಮರೆತವರ ವಿರುದ್ಧ ಜನಾಕ್ರೋಶ
ಪರಿಸ್ಥಿತಿಯ ಗಂಭೀರತೆಯನ್ನು ಸ್ಥಳೀಯ ಶಾಸಕರ ಮತ್ತು ಸಂಸದರ ಗಮನಕ್ಕೂ ತರಲಾಗಿದ್ದರೂ ಅವರೂ ಕೂಡಾ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ, ಸ್ಪಂದನೆ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆಯಿಂದ ಬೇಸತ್ತ ಸ್ಥಳೀಯರು ಶುಕ್ರವಾರ ಮತ್ತೆ ಸಭೆ ನಡೆಸಿದ್ದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಈ ಬಗ್ಗೆ ಮತ್ತೂಮ್ಮೆ ಜಿಲ್ಲಾಧಿಕಾರಿ ಹಾಗೂ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಭಿಯಂತರರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು. ಈ ಸಂದರ್ಭ ಸ್ಥಳೀಯರಿಗೆ ತುರ್ತಾಗಿ ಕಾಮಗಾರಿ ನಡೆಸುವ ಭರವಸೆ ದೊರಕಿದ್ದು, ತಿಂಗಳ ಕೊನೆವರೆಗೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ತೀವ್ರ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ರಾಜೇಶ್ ಮೆಂಡನ್, ಶ್ರೀಧರ್ ಕಾಂಚನ್, ಶಶಿಕಾಂತ್ ಕುಂದರ್, ತೇಜಪಾಲ್ ಕರ್ಕೇರ, ಲವಿತ್ ಕುಮಾರ್, ದಿನೇಶ್ ಮೆಂಡನ್, ಸುರೇಶ್ ಕುಮಾರ್, ದಿನೇಶ್, ಚಂದ್ರಶೇಖರ್ ಪುತ್ರನ್, ಅಭಿ ಪೊಲಿಪು, ಕಿಶನ್, ಕಿರಣ್, ಅರುಣ್ ಕುಮಾರ್, ಅಖಿಲ್, ಮಿಥುನ್, ವಸಂತ್, ಮನೋಜ್, ಸುಧಾಕರ್, ರಾಜೇಶ್, ಪ್ರೀತೇಶ್, ಅಶೋಕ್ ನಾಯರಿ ಇದ್ದರು.