ಮಣ್ಣಪಳ್ಳ ಕೆರೆ ಸೇರುತ್ತಿದೆ ಕೊಳಚೆ ನೀರು
Team Udayavani, Oct 31, 2022, 8:39 AM IST
ಮಣಿಪಾಲ: ನಗರ ವ್ಯಾಪ್ತಿ ಜನರಿಗೆ ಸುಂದರ ವಿಹಾರ ತಾಣವಾಗಿರುವ ಮಣ್ಣಪಳ್ಳ ಕೆರೆ ಪರಿಸರ ಹದಗೆಡಿಸುತ್ತಿದೆ.
ಈ ಪ್ರದೇಶ ತ್ಯಾಜ್ಯ ಕೊಂಪೆಯಾಗುತ್ತಿರುವ ಬಗ್ಗೆ ಉದಯವಾಣಿ ಈಗಾಗಲೇ ವಿಸ್ತೃತ ಸರಣಿ ವರದಿ ಪ್ರಕಟಿಸಿತ್ತು. ಮಳೆಗಾಲ ಮುಗಿಯುತ್ತಿದ್ದು ಮಣಿಪಾಲ ಪರಿಸರದ ಕಟ್ಟಡ, ಮನೆಗಳ ಕೊಳಚೆ ನೀರು ಮಣ್ಣಪಳ್ಳ ಒಡಲು ಸೇರುತ್ತಿರುವುದು ಆತಂಕಕಾರಿಯಾಗಿದೆ. ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಮಣಿಪಾಲ, ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು.
ತ್ಯಾಜ್ಯ ರಾಶಿಗಳು ಅಲ್ಲಲ್ಲಿ ಹರಡಿಕೊಂಡಿರುವುದು, ಪ್ಲಾಸ್ಟಿಕ್ ಕವರ್ಗಳು ಎಲ್ಲೆಂದರಲ್ಲಿ ಬೀಸಾಡಿರುವುದು. ಪರಿಸರದ ಸುತ್ತಮುತ್ತ ಮಧ್ಯರಾತ್ರಿ ಮದ್ಯದ “ಪಾರ್ಟಿ’ಯೂ ನಡೆಯುತ್ತಿದ್ದು, ಮದ್ಯ, ಬಿಯರ್ ಬಾಟಲಿಗಳು ಅಲ್ಲಲ್ಲಿ ಬಿದ್ದಿವೆ. ಮಣ್ಣಪಳ್ಳಕ್ಕೆ ಸಂಪರ್ಕಿಸುವ ಮಳೆ ನೀರು ಕಾಲುವೆಯಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ನೀರು ಕೆರೆಗೆ ಸೇರುತ್ತಿರುವುದು ಕಳವಳಕಾರಿಯಾಗಿದೆ. ಇದರ ಜತೆಗೆ ವಿವಿಧ ತ್ಯಾಜ್ಯ, ಮದ್ಯದ ಬಾಟಲಿ, ಚಾಕೊಲೆಟ್, ಬಿಸ್ಕೆಟ್, ಚಾಟ್ಸ್ ಮಸಾಲ ಪ್ಯಾಕ್ಸ್ ತಿಂಡಿಗಳ ರ್ಯಾಪರ್ಗಳು ಸೇರಿಕೊಂಡು ಮೆಲ್ಲನೇ ಕೆರೆಯ ಒಡಲನ್ನು ಸೇರುತ್ತಿದೆ.
ಜಲಚರಗಳಿಗೆ ಮಾರಕ:
ನಗರದ ಈ ತ್ಯಾಜ್ಯ ನೀರಿನಿಂದ ಕೆರೆಯ ಆರೋಗ್ಯಕರ ಪರಿಸರ ಕಲುಷಿತಗೊಂಡಲ್ಲಿ ಕೆರೆಯನ್ನೇ ನಂಬಿದ ಜಲಚರಗಳಿಗೆ ಕಂಟವಾಗುತ್ತಿದೆ. ಅಲ್ಲದೆ ಮಣಿಪಾಲ ಪರಿಸರದಲ್ಲಿ ಅಂತರ್ಜಲ ವೃದ್ಧಿಗೂ ಈ ಕೆರೆ ಸಹಕಾರಿಯಾಗಿದ್ದು, ಕೆರೆ ಕಲುಷಿತಗೊಂಡಲ್ಲಿ ಮಣಿಪಾಲ ಅಂತರ್ಜಲವು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇಲ್ಲಿಗೆ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ತ್ಯಾಜ್ಯ ನೀರು, ಪ್ಲಾಸ್ಟಿಕ್ ತ್ಯಾಜ್ಯದಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಲಿದೆ.
ಮಣ್ಣಪಳ್ಳ ಅಭಿವೃದ್ಧಿಗೆ ಯೋಜನೆ
ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು, ಹಲವು ವರ್ಷಗಳಿಂದ ಪಾಳು ಬಿದ್ದಂತಿರುವ ಮಣ್ಣಪಳ್ಳ ಕೆರೆಗೆ ಪುನಶ್ಚೇತನ ನೀಡಲು ಕ್ರಮವಹಿಸಲಾಗುತ್ತಿದೆ. ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಯೋಜನೆ ರೂಪಿಸಿದ್ದು, ಮಣ್ಣಪಳ್ಳ ಪರಿಸರಕ್ಕೆ ದಕ್ಕೆ ಬಾರದಂತೆ ಸ್ವತ್ಛತೆ, ನಿರ್ವಹಣೆ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಪ್ರವಾಸೋದ್ಯಮವಾಗಿ ಮಣ್ಣಪಳ್ಳ ಅಭಿವೃದ್ಧಿಪಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಯಾಯ ಕ್ರಮ: ಮಣಿಪಾಲದಲ್ಲಿ ಯುಜಿಡಿ ವ್ಯವಸ್ಥೆ ಸರಿಯಾಗಿ ರೂಪುಗೊಳ್ಳದ ಕಾರಣ ಈ ಸಮಸ್ಯೆ ಎದುರಾಗುತ್ತಿದೆ. ಮಣ್ಣಪಳ್ಳ ಕೆರೆಗೆ ಮಳೆ ನೀರು ಹರಿಯುವ ತೋಡಿನಲ್ಲಿ ತ್ಯಾಜ್ಯನೀರು ಮತ್ತು ತ್ಯಾಜ್ಯ ಸೇರುತ್ತಿರುವುದನ್ನು ತಪ್ಪಿಸಲು ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಮಣ್ಣಪಳ್ಳ ಅಭಿವೃದ್ಧಿ ಸಂಬಂಧಿಸಿ ನಡೆದಸಭೆಯಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಮಣ್ಣಪಳ್ಳ ಅಭಿವೃದ್ಧಿ ಯೋಜನೆ ಅನುಷ್ಠಾನದಲ್ಲಿ ಮೊದಲ ಆದ್ಯತೆಯಾಗಿ ಈ ಸಮಸ್ಯೆಪರಿಗಣಿಸಲಾಗುವುದು. –ಕಲ್ಪನಾ ಸುಧಾಮ, ನಗರಸಭೆ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ