ಉದಯವಾಣಿ ಅಭಿಯಾನದ ಫಲಶ್ರುತಿ; ಕರಾವಳಿಗರಿಗೆ ಸಂದ ಜಯ; ಪಿಸಿಐಟಿ ಕಚೇರಿ ಎತ್ತಂಗಡಿ ಇಲ್ಲ
Team Udayavani, Sep 18, 2020, 6:30 AM IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು
ಆದಾಯ ತೆರಿಗೆ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಮಂಗಳೂರಿನಿಂದ ಗೋವಾಕ್ಕೆ ಎತ್ತಂಗಡಿ ಮಾಡುವ ಪ್ರಸ್ತಾವನೆ ಕೈಬಿಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಕಚೇರಿಯು ಮಂಗಳೂರಿನಲ್ಲೇ ಇರಬೇಕೆಂಬ ಕರಾವಳಿಗರ ಆಗ್ರಹಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ. ಉದಯವಾಣಿಯು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಕರಾವಳಿಗರ ಜತೆಗೂಡಿ ನಡೆಸಿದ ಹೋರಾಟಕ್ಕೆ ಸಿಕ್ಕ ಜಯವಿದು.
ಉಡುಪಿ: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಎತ್ತಂಗಡಿ ಮಾಡುವ ಆದೇಶವನ್ನು ರದ್ದುಗೊಳಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮತಿಸಿದ್ದಾರೆ. ವಿಶೇಷ ಆರ್ಥಿಕ ವಲಯ ಸಹಿತ ಸಾವಿರಾರು ಉನ್ನತ ಉದ್ಯಮ ಗಳಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಈ ಕಚೇರಿಯನ್ನು ಕರಾವಳಿಯಲ್ಲೇ ಉಳಿಸುವಂತೆ ಆಗ್ರಹಿಸಿ ಉದಯವಾಣಿ ಪತ್ರಿಕೆ ಅಭಿಯಾನ ಆರಂಭಿಸಿತ್ತು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕರಾವಳಿಯ ಜನತೆ ಇದಕ್ಕೆ ದನಿಗೂಡಿಸಿದ್ದರು.
ಮಂಗಳೂರಿನ ಕಚೇರಿ ಗೋವಾಕ್ಕೆ ಸ್ಥಳಾಂತರವಾಗುವುದರಿಂದ ಕರಾವಳಿಗರಿಗೆ, ಉದ್ಯಮ-ಸಂಸ್ಥೆಗಳಿಗೆ ಆಗುವ ತೊಂದರೆ ಹಾಗೂ ಅನ್ಯಾಯದ ಬಗ್ಗೆ ಉದಯವಾಣಿ ಪತ್ರಿಕೆಯು ಅಭಿಯಾನ ಸ್ವರೂಪದಲ್ಲಿ ವರದಿ ಮಾಡಿತ್ತು. ಕರಾವಳಿಯಲ್ಲೇ ಕಚೇರಿಯನ್ನು ಉಳಿಸಿಕೊಳ್ಳುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವನ್ನೂ ಉಲ್ಲೇಖೀಸಿತ್ತು. ಇದಕ್ಕೆ ಸ್ಥಳೀಯ ಸಂಘಸಂಸ್ಥೆಗಳು, ಜನರೂ ದನಿಗೂಡಿಸಿದ್ದರು.
ಪಕ್ಷಭೇದ ಮರೆತು ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹೋರಾಟ ನಡೆಸಿದ್ದರು. ಉಡುಪಿ ಮತ್ತು ದ.ಕ. ಲೆಕ್ಕ ಪರಿಶೋಧಕರ ಸಂಘ, ದ.ಕ. ಹಾಗೂ ಉಡುಪಿ ಸಣ್ಣ ಕೈಗಾರಿಕೆಗಳ ಸಂಘ, ದ.ಕ. ಕೆನರಾ ಚೇಂಬರ್ ಆಫ್ ಕಾಮರ್ಸ್ ಸಹಿತ ವಿವಿಧ ಸಂಘ-ಸಂಸ್ಥೆಗಳು ಬೆಂಬಲಿಸಿದ್ದವಲ್ಲದೇ, ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜನಪ್ರತಿನಿಧಿಗಳು, ಎತ್ತಂಗಡಿ ಆದೇಶ ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ದಿನಗಳಲ್ಲಿ ಆದೇಶ
ಕರಾವಳಿ ಜನಪ್ರತಿನಿಧಿಗಳು ಹಾಗೂ ಕರಾವಳಿಗರ ಆಗ್ರಹಕ್ಕೆ ಮಣಿದಿರುವ ಸಚಿವೆ ಪಿಸಿಐಟಿ ಕಚೇರಿಯನ್ನು ಮಂಗಳೂರಿನಲ್ಲೇ ಮುಂದುವರಿಸಲು ಸೆ. 17ರಂದು ಸಮ್ಮತಿ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ತಿಳಿಸಿದ್ದಾರೆ. ಎರಡು ದಿನಗಳೊಳಗೆ ಹೊಸ ಆದೇಶ ಪ್ರಕಟವಾಗಲಿದೆ.
4 ಲಕ್ಷ ತೆರಿಗೆ ಪಾವತಿದಾರರು
ಕರಾವಳಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿದ್ದು, ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಬೆಂಗಳೂರಿನ ಅನಂತರ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣವನ್ನು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಹೊಂದಿವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆಯನ್ನು ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರಿಗಿದ್ದರೆ, ಹುಬ್ಬಳ್ಳಿ ತೃತೀಯ ಸ್ಥಾನದಲ್ಲಿದೆ.
ಹಕ್ಕೊತ್ತಾಯ ಮಂಡಿಸಿದ “ಉದಯವಾಣಿ’ ಅಭಿಯಾನ
“ಉದಯವಾಣಿ’ ಪತ್ರಿಕೆಯು ಸೆ. 4ರಿಂದ ಸೆ. 9ರ ವರೆಗೆ ನಿರಂತರವಾಗಿ ಪಿಸಿಐಟಿ ಕಚೇರಿ ಮಂಗಳೂರಿನಲ್ಲೇ ಉಳಿಸಿ ಎನ್ನುವ ಅಭಿಯಾನವನ್ನು ನಡೆಸಿತ್ತು. ಕರಾವಳಿಗರಿಗೆ ಸತತವಾಗಿ ಆಗುತ್ತಿರುವ ಅನ್ಯಾಯದ ಎದುರು ಧ್ವನಿಯೆತ್ತುವಂತೆ ಆಗ್ರಹಿಸಿತ್ತು. ಜತೆಗೆ ಹುಬ್ಬಳ್ಳಿಯಲ್ಲಿ ಇದೇ ಕಚೇರಿಯನ್ನು ಉಳಿಸಿಕೊಂಡ ಬಗೆಯನ್ನೂ ಉಲ್ಲೇಖೀಸಿತ್ತು. ಅದರ ಮುಖೇನ ಕರಾವಳಿಯ ಜನಪ್ರತಿನಿಧಿಗಳೂ ಕಾರ್ಯೋನ್ಮುಖವಾಗುವಂತೆ ಆಗ್ರಹಿಸಿತ್ತು. ಓದುಗರ ಅಭಿಪ್ರಾಯಗಳನ್ನೂ ಪ್ರಕಟಿಸಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಪಿಸಿಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸದಂತೆ ಮನವಿ ಮಾಡಿದ್ದೇನೆ. ಕರಾವಳಿಗೆ ಅಗತ್ಯವಾಗಿರುವ ಪ್ರಧಾನ ಆಯುಕ್ತರ ಕಚೇರಿಯನ್ನು ಸ್ಥಳಾಂತರಿಸದಂತೆ ಮನವರಿಕೆ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವೆ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಈ ಸಂಬಂಧ ಆದೇಶ ಪತ್ರ ಕೈಸೇರಲಿದೆ.
-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು
ಕರಾವಳಿ ಕರ್ನಾಟಕದ ತೆರಿಗೆದಾರರ ಹಿತಾಸಕ್ತಿಗೆ ಪೂರಕವಾಗಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರಿಸಲು ಕೇಂದ್ರ ವಿತ್ತ ಸಚಿವೆ ಸಮ್ಮತಿಸಿದ್ದಾರೆ. ಇದಕ್ಕೆ ಸಹಕರಿಸಿದ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಶಿ ಅವರಿಗೂ ಕೃತಜ್ಞತೆಗಳು.
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ
ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ನಿರ್ಧಾರದಿಂದ ಹಿಂದೆಗೆದುಕೊಂಡು ಮಂಗಳೂರಿನಲ್ಲಿಯೇ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. “ಉದಯವಾಣಿ’ ಪತ್ರಿಕೆಯು ಈ ವಿಚಾರದ ಬಗ್ಗೆ ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ ಇದನ್ನೊಂದು ಅಭಿಯಾನವಾಗಿ ರೂಪಿಸಿ ತನ್ನ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.
-ಪ್ರದೀಪ್ ಜೋಗಿ, ಅಧ್ಯಕ್ಷರು, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ