ಪಿತ್ರೋಡಿ : ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ , ದಡ ಸೇರುತ್ತಿದೆ ಸತ್ತ ಮೀನುಗಳು
Team Udayavani, Sep 22, 2021, 9:42 AM IST
ಕಟಪಾಡಿ : ಉದ್ಯಾವರ ಪಿತ್ರೋಡಿ ಭಾಗದ ಹೊಳೆಯಲ್ಲಿ ಮೀನುಗಳು ಸತ್ತಿರುವ ಸ್ಥಿತಿಯಲ್ಲಿ ದಡ ಸೇರುತ್ತಿದ್ದು, ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿರುತ್ತದೆ.
ಈ ಬಗ್ಗೆ ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ಅವರು ಗ್ರಾ.ಪಂ. ಸದಸ್ಯರುಗಳಾದ ಗಿರೀಶ್ ಸುವರ್ಣ, ಸಚಿನ್ ಸುವರ್ಣ ಪಿತ್ರೋಡಿ, ಹಾಗೂ ಸ್ಥಳೀಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಘಟಕಗಳ ಅಪಾಯಕಾರಿ ಮಲೀನ ತ್ಯಾಜ್ಯ ಹೊಳೆಯ ನೀರನ್ನು ಸೇರುವ ಪರಿಣಾಮ ಜಲಚರ ಮೀನುಗಳ ಸತ್ತ ಸ್ಥಿತಿಯಲ್ಲಿ ಕಂಡು ಬರುತ್ತಿದ್ದು, ಮಾರಣ ಹೋಮ ನಡೆಯುತ್ತಿದೆ. ದಡಕ್ಕೆ ಸೇರುತ್ತಿರುವ ಮೀನುಗಳಿಂದಾಗಿ ಪರಿಸರದ ಜನ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಮಾಹಿತಿಯನ್ನು ನೀಡಲಾಗಿದೆ. ಕೂಡಲೇ ಬಂದು ಪರಿಶೀಲನೆಯನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿಕೊಂಡಿರುವುದಾಗಿ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.