ಕುಟೀರಗಳಲ್ಲಿ ಅರಳುವ ವಿದ್ಯಾ ಕುಸುಮಗಳು
ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಗುರುಕುಲ ಶಿಕ್ಷಣ
Team Udayavani, Sep 5, 2020, 5:41 AM IST
ಕಾರ್ಕಳ ತಾ|ನಲ್ಲಿ ತೆರೆದುಕೊಂಡ ಕುಟೀರ ಶಾಲೆಗಳಲ್ಲಿ ಪಾಠ.
ಕಾರ್ಕಳ: ಇಂದು ದೇಶದೆಲ್ಲೆಡೆ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಶಿಕ್ಷಕರಿಗೆ ಗೌರವ ನಮನ ಸಲ್ಲಿಸುವ ವೇಳೆ ಸ್ಫೂರ್ತಿದಾಯಕ ಗುರುಕುಲ ಮಾದರಿ ವಿದ್ಯಾ ಕುಟೀರಗಳು ಮಾದರಿ ಶಿಕ್ಷಣದ ಆಶಯವನ್ನು ನನಸಾಗಿಸುತ್ತಿವೆ. ಕಾರ್ಕಳಕ್ಕೆ 100 ವರ್ಷಗಳಾಗುತ್ತಿರುವ ಹಿನ್ನೆಲೆ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಚಟುವಟಿಕೆಗಾಗಿ ಶಾಸಕರ ವಿಶೇಷ ಪರಿಕಲ್ಪನೆಯಲ್ಲಿ ಶಿಕ್ಷಣಾಧಿಕಾರಿಗಳ ಸಲಹೆ ಮೇರೆಗೆ ಕುಟೀರ ಶಿಕ್ಷಣವನ್ನು ಪ್ರಾಯೋಗಿಕವಾಗಿ 19 ಶಾಲೆಗಳಲ್ಲಿ ಜಾರಿಗೆ ತರಲಾಗಿದೆ.
ಇಲ್ಲೇನಿರುತ್ತದೆ?
ಹಿಂದಿನ ಗುರುಕುಲ ಮಾದರಿಯಲ್ಲಿ ಶಿಕ್ಷಣವಿರುತ್ತದೆ. ಕುಟೀರದ ವಾತಾವರಣದಲ್ಲಿ ಮಕ್ಕಳು ನೆಮ್ಮದಿ, ಶಾಂತಿ, ತಾಳ್ಮೆಯಿಂದ ಪಾಠ ಆಲಿಸಿ ಬದುಕು ರೂಪಿಸಲು ಅಡಿಪಾಯ ಹಾಕಲಾಗುತ್ತಿದೆ. ಸುಸ್ಥಿರ, ವಿವಿಧ ಆಯಾಮದ ಶಿಕ್ಷಣ, ಜೀವನಮೌಲ್ಯದ ರೂಪದಲ್ಲಿ ಶಿಕ್ಷಣ ನೀಡುವುದೇ ಕುಟೀರ ಶಿಕ್ಷಣ.
ಸಂಸ್ಕೃತಿಯ ಪ್ರತಿಬಿಂಬ
ಬಿದಿರು, ಮುಳಿಹುಲ್ಲು, ಅಡಿಕೆ ಮರ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕುಟೀರಗಳನ್ನು ನಿರ್ಮಿಸಲಾಗಿದೆ. ತಂಪಾದ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. 1ರಿಂದ 7ನೇ ತರಗತಿವರೆಗೆ ಎಲ್ಲ ತರಗತಿಗಳ ಮಕ್ಕಳಿಗೆ ನಿತ್ಯ ಒಂದೊಂದು ತರಗತಿಗಳನ್ನು ಈ ಕುಟೀರಗಳಲ್ಲಿ ನಡೆಸಲಾಗುತ್ತದೆ. ತುಳುನಾಡ ಪಾಡ್ದನ, ಯಕ್ಷಗಾನ, ನಾಟಕ, ಕುಲಕಸುಬುಗಳ ಪರಿಚಯ, ಗ್ರಾಮೀಣ ಕ್ರೀಡೆಗಳ ತಿಳಿವಳಿಕೆ, ಕರಕುಶಲ ಕಲೆಗಳು, ಬುಟ್ಟಿ, ತೆಂಗಿನ ಮಡಲು ಹೆಣೆಯುವಿಕೆ ಸಹಿತ ವಿವಿಧ ಚಟುವಟಿಕೆಗಳು ಕುಟೀರಗಳಲ್ಲಿ ನಡೆಯುತ್ತವೆ.
ಹಲವರ ಪ್ರಯತ್ನದ ಫಲ
ಈಗಾಗಲೇ ನಿರ್ಮಾಣವಾದ ಮತ್ತು ಪ್ರಗತಿ ಹಂತದಲ್ಲಿರುವ ಅಷ್ಟೂ ಕುಟೀರಗಳ ಹಿಂದೆ ಶಿಕ್ಷಣ ಪ್ರೇಮಿಗಳ ಪ್ರಯತ್ನವೂ ಇದೆ. ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರೇ ಕುಟೀರ ನಿರ್ಮಿಸಿಕೊಟ್ಟಿದ್ದಾರೆ. ಶಿಕ್ಷಕರು, ದಾನಿಗಳು ಸಹಕರಿಸಿದ್ದಾರೆ. ಕೆಲವು ಕುಟೀರಗಳಿಗೆ 1ಲಕ್ಷದ ವರೆಗಿನ ತನಕ ವ್ಯಯಿಸಲಾಗಿದೆ. ನಮ್ಮ ಪೆರ್ಮೆದ ಸ್ವರ್ಣ ಕಾರ್ಲ ಎಂಬ ಶಾಸಕರ ಪರಿಕಲ್ಪನೆಯ ಭಾಗ ಇದಾಗಿದೆ. ಜತೆಗೆ ಗುಬ್ಬಚ್ಚಿ ಇಂಗ್ಲಿಷ್ ಸ್ಪೋಕನ್ ತರಗತಿಗಳು ನಡೆಯುತ್ತಿವೆ. ಗಾಂಧೀಜಿ 150, ಸ್ವಚ್ಛತೆಗಾಗಿ ಸ್ವಲ್ಪ ಹೊತ್ತು’ ಪರಿಣಾಮಕಾರಿಯಾಗಿ ನಡೆದಿದೆ. ಫಲಿತಾಂಶ ಹೆಚ್ಚಿಸುವ ಎಸೆಸೆಲ್ಸಿ ವಿಷನ್ -100 ಯಶಸ್ವಿಯಾಗಿದ್ದು, ಈ ಬಾರಿ ತಾಲೂಕು ಉತ್ತಮ ಸಾಧನೆ ಮಾಡಿದೆ.
ಎಲ್ಲೆಲ್ಲಿವೆ ವಿದ್ಯಾ ಕುಟೀರಗಳು?
ಶಿವಪುರ. ಕೈರಬೆಟ್ಟು, ಅಂಡಾರು, ಮುಂಡ್ಕೂರು, ಜಾರ್ಕಳ ಮುಂಡ್ಲಿ, ಶಿರ್ಲಾಲು ಸೂಡಿ, ಇರ್ವತ್ತೂರು, ನಂದಳಿಕೆ, ನಲ್ಲೂರು, ಸಾಣೂರು, ಪುನರ್ಕೆರೆ, ಅಜೆಕಾರು, ಕೆರ್ವಾಶೆ, ಈದು ಹೊಸ್ಮಾರು, ಕಲ್ಯ, ಕುಚ್ಚಾರು-2, ಸೋಮೇಶ್ವರ ಪೇಟೆ, ಎಲಿಯಾಲ ಶಾಲೆಗಳಲ್ಲಿ ಕುಟೀರಗಳಿವೆ. ಇವುಗಳಿಗೆ ಶಾಂಭವಿ, ನಿಹಾರಿಕಾ, ಪಂಚವಟಿ, ಪರಂಪರಾ, ವನಸಿರಿ ಮಿತ್ರ ಇತ್ಯಾದಿ ಹೆಸರುಗಳನ್ನೂ ಇಡಲಾಗಿದೆ.
ಗುರುಕುಲದ ಕಲ್ಪನೆ
ವಿದ್ಯಾ ಕುಟೀರದ ಮೂಲ ಆಶಯ ಶಿಕ್ಷಣದ ವಿದ್ಯೆ ಜತೆಗೆ ವಿನಯ, ಶಿಸ್ತು, ಸಂಸ್ಕಾರ ಹಾಗೂ ಸಮಯ ಪಾಲನೆ ಹಾಗೂ ಸದ್ವಿಚಾರ, ಸನ್ನಡತೆ ಮತ್ತು ಜೀವನ ಮೌಲ್ಯ ಹೇಳಿಕೊಡುವ ಗುರುಕುಲದ ಕಲ್ಪನೆಯಿದು. ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶ ಹೊಂದಿದೆ. ಪ್ರಸ್ತುತ ಕೇಂದ್ರ ಜಾರಿಗೊಳಿಸಲು ಉದ್ದೇಶಿಸಿದ ರಾಷ್ಟ್ರೀಯ ಶಿಕ್ಷಣ ನೀತಿಗೂ ಇದು ಪೂರಕವಾಗಿದೆ.
ಕುಟೀರ ಸಂಖ್ಯೆ ಹೆಚ್ಚಳದ ಗುರಿ
ಸರಕಾರಿ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಳ ಮತ್ತು ಗುಣಮಟ್ಟ ಕಾಪಾಡುವುದು, ಆಟ-ಪಾಠದೊಂದಿಗೆ ಹೊರ ಪ್ರಪಂಚದ ಶಿಕ್ಷಣ ದೊರಕಿಸುವುದು ಉದ್ದೇಶ. ಇದು ಯಶಸ್ವಿಯಾಗಿದೆ. ಈ ಬಾರಿ ಕುಟೀರ ಸಂಖ್ಯೆ ಹೆಚ್ಚಿಸಲಾಗುವುದು.
-ವಿ. ಸುನಿಲ್ಕುಮಾರ್, ಶಾಸಕರು ಕಾರ್ಕಳ
ಸರ್ವರ ಪ್ರಯತ್ನದಿಂದ ಯಶಸ್ಸು
ಶಾಸಕರ ಪ್ರೇರಣೆಯಲ್ಲಿ ಕುಟೀರ ಶಿಕ್ಷಣ ಆರಂಭಗೊಂಡಿದೆ. ಗುರುಕುಲ ಶಿಕ್ಷಣದ ಮಾದರಿಯಲ್ಲಿ ಪಾಠ, ನಾಡಿನ ಸಂಸ್ಕೃತಿ, ತುಳುನಾಡಿನ ಆಚರಣೆಗಳ ಜತೆ ಜೀವನ ಪಾಠದ ನೈತಿಕ ಶಿಕ್ಷಣ ನೀಡುವುದು ಗುರಿ. ಶಿಕ್ಷಕರು, ಹೆತ್ತವರು ಕೈಜೋಡಿಸುತ್ತಿದ್ದಾರೆ.
– ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ