ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ ; ಕರಿಮಣಿ ಸರ ವಾರಸುದಾರರಿಗೆ ಹಸ್ತಾಂತರ
Team Udayavani, Oct 9, 2020, 5:45 AM IST
ಹೆಬ್ರಿ ಠಾಣೆಯಲ್ಲಿ ಶಿವರಾಯ ಕಾಮತ್ ವಾರಸುದಾರರಿಗೆ ಚಿನ್ನದ ಸರವನ್ನು ನೀಡಿದರು.
ಹೆಬ್ರಿ: ಬಿದ್ದು ಸಿಕ್ಕಿದ ಸುಮಾರು 5 ಪವನ್ ತೂಕದ ಚಿನ್ನದ ಸರವನ್ನು ವಾರಸುದಾರರಿಗೆ ನೀಡಿ ಪ್ರಮಾಣಿಕ ಮೆರೆದ ಉದಯವಾಣಿ ಪತ್ರಿಕಾ ವಿತರಕ ವಿಶ್ವನಾಥ (ಶಿವರಾಯ) ಕಾಮತ್ ಸಂತೆಕಟ್ಟೆ ಅವರನ್ನು ಗುರುವಾರ ಹೆಬ್ರಿ ಠಾಣೆಯಲ್ಲಿ ಪೊಲೀಸರು ಗೌರವಿಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಬ್ರಿ ಬಸ್ ತಂಗುದಾಣದಲ್ಲಿ ವರ್ಷದ ಹಿಂದೆ ಬಿದ್ದಿದ್ದ ಚಿನ್ನದ ಕರಿಮಣಿ ಸರವೊಂದು ಬಸ್ ನಿಲ್ದಾಣ ವಠಾರದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದ ಶಿವರಾಯ ಕಾಮತ್ ಅವರಿಗೆ ಸಿಕ್ಕಿದ್ದು ಕೂಡಲೇ ಹೆಬ್ರಿ ಠಾಣೆಗೆ ಕೊಟ್ಟು ವಾರಸುದಾರರಿಗೆ ಹಿಂದುರುಗಿಸುವಂತೆ ವಿನಂತಿಸಿದ್ದರು. ತಿಂಗಳು ಕಳೆದರೂ ವಾರಸುದಾರರು ಬಾರದ ಕಾರಣ ಪೊಲೀಸರು ಸರವನ್ನು ಕೋರ್ಟ್ಗೆ ಒಪ್ಪಿಸಿದರು.
ಬೇಳಂಜೆಯ ಪ್ರಮೀಳಾ ಅವರು ಕರಿಮಣಿ ದುರಸ್ತಿಗೆ ಎಂದು ಹೆಬ್ರಿಗೆ ಬಂದಾಗ ಕೈತಪ್ಪಿ ಸರ ಕಳೆದು ಹೋಗಿತ್ತು. ಹುಡುಕಾಡಿದರೂ ಸಿಗದಾಗ ಕೈಚೆಲ್ಲಿದ್ದರು. ಸ್ವಲ್ಪ ಸಮಯದ ಬಳಿಕ ಠಾಣೆಗೆ ಭೇಟಿ ನೀಡಿ ವಿಚಾರಿಸಿದಾಗ ಸರಿಯಾದ ದಾಖಲೆಯನ್ನು ಕೋರ್ಟಿಗೆ ನೀಡಿ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಕೋರ್ಟ್ ಪ್ರಕ್ರಿಯೆಗಳ ಬಳಿಕ ಗುರುವಾರ ಸರವನ್ನು ಪ್ರಮೀಳಾ ಅವರಿಗೆ ಶಿವರಾಯ ಕಾಮತ್ ಅವರ ಮೂಲಕ ಪೊಲೀಸರು ಹಸ್ತಾಂತರಿಸಿದರು.
25ವರ್ಷಗಳಿಂದ ಪತ್ರಿಕೆ ವಿತರಣೆ
ಶಿವರಾಯ ಅವರು 25 ವರ್ಷಗಳಿಂದ ಉದಯವಾಣಿ ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುತ್ತಿರುವ ಜತೆಗೆ ಸಾರ್ವಜನಿಕರ ಸೇವೆಗಳಾದ ವಿದ್ಯುತ್/ ಫೋನ್ ಬಿಲ್ ಪಾವತಿ, ಗ್ಯಾಸ್ ಪೂರೈಕೆ ಇತ್ಯಾದಿಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಟ್ಟು ಜನರ ಮೆಚ್ಚುಗೆಗೆ ಪಾತ್ರರಾದ್ದಾರೆ. 1995ರಿಂದ ಸಂತೆಕಟ್ಟೆಯಲ್ಲಿ ಪತ್ರಿಕೆ ವಿತರಿಸಲು ಪ್ರಾರಂಭಿಸಿದ ಅವರು ಲಾಕ್ಡೌನ್ ಸಂದರ್ಭದಲ್ಲೂ ಪ್ರತಿ ದಿನ ಮನೆಮನೆಗೆ ಪತ್ರಿಕೆ ವಿತರಿಸುತ್ತಿದ್ದರು.
ಸರಿಯಾಗಿ ಮಾತು ಬಾರದ ಕಾಮತ್ ಅವರು ಒಂದು ದಿನವೂ ವಿರಮಿಸಿಲ್ಲ.ಅವರ ಸೇವೆಯ ನಡುವೆ ಹಲವಾರು ಬಾರಿ ಚಿನ್ನದ ಸರ, ಪರ್ಸ್, ದಾಖಲೆ ಪತ್ರಗಳು ಸಿಕ್ಕಿದ್ದು ವಾರಸುದಾದರನ್ನು ಪತ್ತೆಹಚ್ಚಿ ಅವರಿಗೆ ಮರಳಿಸಿದ್ದರು.
ಕಷ್ಟಪಟ್ಟ ಸಂಪಾದಿಸಿದ ಹಣ ಅಥವಾ ವಸ್ತುವನ್ನು ಕಳೆದುಕೊಂಡರೆ ಅದರ ದುಃಖ ಹೇಳತೀರದ್ದು. ಕಳಕೊಂಡವರಿಗೆ ವಾಪಸು ಸಿಕ್ಕರೆ ಅದರಷ್ಟು ಸಂತೋಷ ಬೇರೊಂದಿಲ್ಲ. ನಾವು ದುಡಿದು ಬದುಕಿದಾಗ ಸಂತೋಷವಿದೆ. ಪ್ರಾಮಾಣಿಕ ಕೆಲಸದಿಂದ ಸಂಪಾದಿಸುವ ಜನಪ್ರೀತಿಯೇ ಜೀವನದ ದೊಡ್ಡ ಸಂಪಾದನೆ.
– ವಿಶ್ವನಾಥ (ಶಿವರಾಯ) ನಾಯಕ್, ಉದಯವಾಣಿ ಏಜೆಂಟ್, ಹೆಬ್ರಿ ಸಂತೆಕಟ್ಟೆ