ಘನ ವಾಹನ ಸಂಚಾರದಿಂದ ಟ್ರಾಫಿಕ್ ದಟ್ಟಣೆ ಹೆಚ್ಚಳ; ಇಂದ್ರಾಳಿ ರಸ್ತೆ ಕಾಮಗಾರಿ
Team Udayavani, Nov 1, 2022, 9:35 AM IST
ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ -ರಸ್ತೆ (ರಾ. ಹೆ. 169ಎ) ಸಂಬಂಧಿಸಿದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಘನ ವಾಹನಗಳ ಸಂಚಾರದಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತ್ತಿದೆ.
ಕಾಮಗಾರಿ ಆರಂಭಗೊಳ್ಳುವ ಮುನ್ನ ಈ ಮಾರ್ಗದಲ್ಲಿ 45 ದಿನಗಳ ಕಾಲ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದೇಶದಲ್ಲಿ ಸ್ಥಳೀಯ ಓಡಾಟದ ಬಸ್ಗಳನ್ನು ಹೊರತುಪಡಿಸಿ ಇತರ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿತ್ತು. ಇಕ್ಕಟ್ಟಾದ ರಸ್ತೆಯಲ್ಲಿ ಮಲ್ಟಿ ಎಕ್ಸೆಲ್ ಮಾದರಿಯ ಲಾಂಗ್ ರೂಟ್ ಬಸ್ಗಳು ಸಹಿತ ಕೆಲವು ಟ್ರಕ್ ಗಳು ಸಂಚರಿಸುವುದರಿಂದ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ. ಪೊಲೀಸರು ಬೆಳಗ್ಗೆಯಿಂದ ರಾತ್ರಿಯವರೆಗೂ ಕಾರ್ಯನಿರ್ವಹಿಸುತ್ತಿದ್ದು, ಸುಗಮ ಸಂಚಾರಕ್ಕೆ ಶ್ರಮಿಸುತ್ತಿದ್ದಾರೆ. ಕಾಮಗಾರಿ ಮುಗಿಯುವವರೆಗೆ ಟ್ರಕ್ ಮತ್ತು ಲಾಂಗ್ ರೂಟ್ ಬಸ್ಗಳಿಗೆ ಈ ಮಾರ್ಗದಲ್ಲಿ ಸಂಚರಿಸದಂತೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನ. 6ರ ಬಳಿಕ ಇನ್ನೊಂದು ಬದಿಗೆ ಕಾಂಕ್ರೀಟ್
ಒಂದು ಬದಿಯಲ್ಲಿ ಕಾಂಕ್ರೀಟ್ ಕಾಮಗಾರಿ ಸಂಪೂರ್ಣಗೊಂಡಿದ್ದು, ಕ್ಯೂರಿಂಗ್ ಪೂರ್ಣಗೊಂಡಿದೆ. ಇಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ರಸ್ತೆ ಮುಕ್ತವಾದಲ್ಲಿ ಈಗಿರುವಷ್ಟು ಮಟ್ಟದಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ನ.6ರಿಂದ ರಸ್ತೆಯ ಇನ್ನೊಂದು ಬದಿಗೆ ಕಾಂಕ್ರೀಟ್ ನಿರ್ಮಾಣ ಆರಂಭಗೊಳ್ಳಲಿದೆ. 10 ದಿನಗಳು ಕಾಮಗಾರಿ ನಡೆದು, 15 ದಿನಗಳು ಕ್ಯೂರಿಂಗ್ ವರ್ಕ್ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.